ಅಜೆಕಾರು: ಕಿರೆಂಚಿಬೈಲು ಕಿಂಡಿ ಅಣೆಕಟ್ಟಿಗೆ ಖಾಸಗಿ ಪಂಪ್ಗಳ ಕನ್ನ!
Team Udayavani, Apr 1, 2018, 6:20 AM IST
ಅಜೆಕಾರು: ಒಂದೆಡೆ ಬೇಸಗೆ ಬೇಗೆ ತೀವ್ರವಾಗಿ ಕುಡಿವ ನೀರಿಗೆ ಸಂಚಕಾರ ತಂದೊಡ್ಡಿದ್ದರೆ, ಇತ್ತ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಗೂ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ನೀರುಣಿಸುವ ಕಿರೆಂಚಿಬೈಲು ಕಿಂಡಿ ಅಣೆಕಟ್ಟಿಗೆ ಖಾಸಗಿ ಪಂಪ್ ಗಳ ಅಳವಡಿಕೆಯಿಂದ ನೀರಿಲ್ಲದೇ ಬವಣೆ ಪಡಬೇಕಾದ ಆತಂಕ ಕಾಡಿದೆ.
ಕಡ್ತಲದಲ್ಲೂ ನೀರಿನ ಸಮಸ್ಯೆ
ಕಡ್ತಲ ಪಂಚಾಯತ್ ವ್ಯಾಪ್ತಿಯಲ್ಲಿ 20 ತೆರೆದ ಬಾವಿ, 39 ಕೊಳವೆ ಬಾವಿಗಳಿವೆ. 3 ಟ್ಯಾಂಕ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇಲ್ಲಿ ಮೈರ್ಗುಳಿ ಪ್ರದೇಶ, ಪೆರ್ಣಂಕ್ಯಾರು, ಕಡಂಬಳ್ಳಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಡುವ ಲಕ್ಷಣ ಗೋಚರಿಸಿದೆ. ಕಳೆದ ವರ್ಷ ನೀರಿನ ಸಮಸ್ಯೆ ತೀವ್ರವಾಗಿ ಕಾಡಿದ್ದ ಹಾರ್ಜೆ ಪ್ರದೇಶಕ್ಕೆ ಈ ಬಾರಿ ಪೈಪ್ಲೈನ್ ಅಳವಡಿಸಿ ನೀರು ಒದಗಿಸಲಾಗುತ್ತಿದೆ.
ಕ್ರಮ ಕೈಗೊಂಡಿಲ್ಲ
ಖಾಸಗಿ ಪಂಪ್ಗ್ಳ ತೆರವಿಗೆ ಕ್ರಮ ಕೈಗೊಳ್ಳಲು ಮರ್ಣೆ ಪಂಚಾಯತ್ 2017, ಮಾ.10ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಇದರೊಂದಿಗೆ ವಿದ್ಯುತ್ ಸಂಪರ್ಕ ಕಡಿತಕ್ಕೂ ಮನವಿ ಮಾಡಲಾಗಿತ್ತು. ಆದರೆ ಅಣೆಕಟ್ಟಿನ ನೀರು ಎತ್ತುತ್ತಿರುವುದರಿಂದ ಈ ಬಾರಿಯೂ ಕುಡಿಯುವ ನೀರಿಗೆ ಸಂಚಕಾರದ ಭಯ ಕಾಡಿದೆ.ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಅಳಲು ಸ್ಥಳೀಯರದ್ದಾಗಿದೆ.
ಶಾಶ್ವತ ಕುಡಿಯುವ ನೀರಿಗಾಗಿ ಯೋಜನೆ
ದೆಪ್ಪುತ್ತೆ, ಕಿರೆಂಚಿಬೈಲು ಪ್ರದೇಶದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪಂಚಾಯತ್ಹೊಸ ಯೋಜನೆಯೊಂದನ್ನು ಮಾಡಿದೆ. 2.50 ಲ.ರೂ. ಲಕ್ಷ ರೂ. ವೆಚ್ಚದಲ್ಲಿ ಭೂಗತ ನೀರಿನ ಟ್ಯಾಂಕ್ ಮಾಡಿ ಅದಕ್ಕೆ ಹೊಳೆ ನೀರನ್ನು ಫಿಲ್ಟರ್ ಮಾಡಿ ತುಂಬಿಸಲಾಗುವುದು. ಬಳಿಕ ಅದನ್ನು ಓವರ್ಹೆಡ್ ಟ್ಯಾಂಕ್ಗಳಿಗೆ ಸರಬರಾಜು ಮಾಡಿ ಮನೆಗಳಿಗೆ ಪೂರೈಸುವ ಪ್ಲಾನ್ ಇದೆ. ಇದರ ಕಾಮಗಾರಿ ಪ್ರಾರಂಭಗೊಂಡಿದ್ದು, ಮುಂದಿನ ವರ್ಷ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
15ಕ್ಕೂ ಹೆಚ್ಚು ಪಂಪ್ಗಳು!
ತೀಥೊìಟ್ಟು ಸೇತುವೆಯಿಂದ ಕಿರೆಂಚಿಬೈಲ್ ಕಿಂಡಿ ಅಣೆಕಟ್ಟಿನ ಪ್ರದೇಶದವರೆಗೆ ಎರಡು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 15ಕ್ಕೂ ಹೆಚ್ಚು ವಿದ್ಯುತ್ ಚಾಲಿತ ಖಾಸಗಿ ಪಂಪ್ಗ್ಳನ್ನು ಅಳವಡಿಸಲಾಗಿದ್ದು ಬಹುತೇಕ ದಿನವಿಡೀ ಚಾಲನೆಯಲ್ಲಿರುತ್ತವೆ. ಇವುಗಳ ಮೂಲಕ ಕೃಷಿ ಉದ್ದೇಶಕ್ಕೆ, ತೋಟಗಳಿಗೆ ನೀರು ಹಾಯಿಸಲಾಗುತ್ತದೆ.
ಹೆಚ್ಚಿದ ಆತಂಕ
ಮರ್ಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ 12 ಕೊಳವೆ ಬಾವಿ, 16 ತೆರೆದ ಬಾವಿ, 6 ಓವರ್ಹೆಡ್ ಟ್ಯಾಂಕ್ ಇವೆ. ದೆಪ್ಪುತ್ತೆ ಹಾಗೂ ಕಿರೆಂಚಿಬೈಲುವಿನಲ್ಲಿ ಕುಡಿಯುವ ನೀರಿನ 2 ಬಾವಿ ಇದೆ. ಇಲ್ಲಿ ಕಳೆದ ಬಾರಿ ನೀರಿನ ಸಮಸ್ಯೆ ತೀವ್ರವಾಗಿ ಕಾಡಿದ್ದಾಗ ಅಣೆಕಟ್ಟು ಎತ್ತರ ಹೆಚ್ಚುಗೊಳಿಸಿ, ನೀರಿನ ಸಂಗ್ರಹ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಅಣೆಕಟ್ಟಿನಲ್ಲಿ ನೀರಿದ್ದರೆ ಮಾತ್ರ ಇಲ್ಲಿನ ಬಾವಿಗಳಲ್ಲೂ ನೀರಿರುತ್ತದೆ. ಆದರೆ ವಿಪರೀತ ಬಳಕೆಯಿಂದ ನೀರಿನ ಮಟ್ಟ ಕುಸಿಯುತ್ತಿದೆ. ಇದರಿಂದ ದೆಪ್ಪುತ್ತೆ, ಕಿರೆಂಚಿಬೈಲು, ಕಾಡುಹೊಳೆ, ಗುಡ್ಡೆಯಂಗಡಿ, ಬೊಂಡುಕುಮೇರಿ, ಹೆರ್ಮುಂಡೆಯ ಕುಡೆcಮಾರೆಲ, ಕೈಕಂಬ ಪ್ರದೇಶಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಆತಂಕ ಕಾಡಿದೆ.
2 ದಿನಕ್ಕೊಮ್ಮೆ ನೀರು ಪೂರೈಕೆ
ಎಪ್ರಿಲ್, ಮೇ ತಿಂಗಳಿನಲ್ಲಿ ಕಡ್ತಲ ಪಂಚಾಯತ್ ವ್ಯಾಪ್ತಿಯ ಕಡಂಬಳ್ಳಿ, ಮೈರ್ಗುಳಿ, ಪೆರ್ಣಂಕ್ಯಾರು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇದೆ. ಟ್ಯಾಂಕರ್ ಮೂಲಕ ಸಮಸ್ಯೆಯಿರುವ ಪ್ರದೇಶಕ್ಕೆ 2 ದಿನಕ್ಕೊಮ್ಮೆ ನೀರು ಪೂರೈಸಲಾಗುವುದು. ಈ ಬಗ್ಗೆ ತಾ.ಪಂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ವಿಜಯ, ಕಡ್ತಲ ಪಿಡಿಒ
ಸದ್ಯ ಸಮಸ್ಯೆ ಇಲ್ಲ
ಮರ್ಣೆ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆಗೆ ಯೋಜನೆ ರೂಪಿಸಲಾಗಿದೆ. ಸದ್ಯ ಸಮಸ್ಯೆ ಇಲ್ಲ. ಸಮಸ್ಯೆ ಇದ್ದರೆ ಟ್ಯಾಂಕರ್ ನೀರು ಒದಗಿಸಲಾಗುವುದು.
– ಪುರಂದರ ಎಸ್.,
ಮರ್ಣೆ ಪಿಡಿಒ
– ಜಗದೀಶ್ ರಾವ್ ಅಂಡಾರು