ಅಜೆಕಾರು: ಗಾಳಿ ಮಳೆಗೆ ಮನೆ, ಕೃಷಿಗೆ ಹಾನಿ
Team Udayavani, May 18, 2018, 7:30 AM IST
ಅಜೆಕಾರು: ಮರ್ಣೆ ಪಂಚಾಯತ್ ವ್ಯಾಪ್ತಿಯ ಅಜೆಕಾರು ಸುತ್ತಮುತ್ತ ಹಾಗೂ ವರಂಗ ಗ್ರಾಮ ಪಂಚಾಯತ್ನ ಅಂಡಾರು ಗ್ರಾಮದಲ್ಲಿ ಮೇ 16ರಂದು ಸಂಜೆ ಸುರಿದ ಭಾರೀ ಪ್ರಮಾಣದ ಗಾಳಿ, ಸಿಡಿಲಿನಿಂದ ಕೂಡಿದ ಮಳೆಗೆ ಕೃಷಿ ಹಾಗೂ ವಾಸ್ತವ್ಯದ ಮನೆಗೆ ಹಾನಿಯಾಗಿರುವ ಘಟನೆಗಳು ವರದಿಯಾಗಿವೆ.
ಅಂಡಾರು ಎಳ್ಳುಮಜಲು ಸುರೇಶ್ ಎಂಬವರ ಅಡಿಕೆ ಮರಗಳು ಧರೆಗೆ ಉರುಳಿದ್ದು ಅಪಾರ ನಷ್ಟವಾಗಿದೆ. ಭಾರೀ ಗಾಳಿಯಿಂದಾಗಿ ಮನೆಯ ಹೆಂಚಿನ ಮೇಲ್ಛಾವಣಿಗೂ ಭಾಗಶಃ ಹಾನಿಯಾಗಿದೆ.
ಅಜೆಕಾರಿನ ಮರ್ಣೆ ಬೈಲುಮನೆ ಸುನಿತಾ ಅಂಚನ್ ಅವರ ವಾಸದ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದೆ. ಮನೆಯ ವಿದ್ಯುತ್ ವಯರಿಂಗ್ ಸಂಪೂರ್ಣ ಹಾನಿಗೀಡಾಗಿದ್ದು ಮನೆಯ ಹಂಚಿನ ಮೇಲ್ಛಾವಣಿಗೂ ಹಾನಿಯಾಗಿದೆ.
ಅಜೆಕಾರಿನ ಮಥಾಯಸ್ ಮಿನೇಜಸ್ರವರ ತೋಟಕ್ಕೆ ಸಿಡಿಲು ಬಡಿದು ಅಡಿಕೆ ಮರ, ತೆಂಗಿನ ಮರ ಹಾಗೂ ಕಾಳು ಮೆಣಸಿನ ಬಳ್ಳಿ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದೆ.
ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಹೆಬ್ರಿ: ಕುಚ್ಚಾರು ಬೇಳಂಜೆ ಸೊಳ್ಳೆ ಕಟ್ಟೆ ಪರಿಸರದ ಬೆ„ಲುಮನೆ, ಬಾದುÉ, ಕಾನ್ಬೆಟ್ಟು ಪ್ರದೇಶದಲ್ಲಿ ಕೂಡ 70ಕ್ಕೂ ಹೆಚ್ಚು ಕೃಷಿ ತೋಟಗಳಲ್ಲಿ ಹಾನಿ ಸಂಭವಿಸಿದ್ದು, ತೆಂಗು , ಅಡಿಕೆ ಮರಗಳು ಧರೆಗುರುಳಿವೆ.
ಸೊಳ್ಳೆಕಟ್ಟೆಯಿಂದ ಬೇಳಂಜೆ ತನಕ ರಸ್ತೆ ಬದಿಯಲ್ಲಿರುವ ಬೃಹತ್ ಮರಗಳು ರಸ್ತೆಗೆ ಉರುಳಿದ್ದು ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯ ಪಂಚಾಯತ್ ಸದಸ್ಯರು, ಇಲಾಖೆ ಹಾಗೂ ಸಾರ್ವಜನಿಕರ ಸಹಾಯದಿಂದ ಮರಗಳನ್ನು ತೆರವುಗೊಳಿಸಲಾಯಿತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ.