ಅಮೃತಾ ಮನೆಗೆ ತಾಲೂಕು ವೈದ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಭೇಟಿ
Team Udayavani, May 20, 2019, 6:00 AM IST
ಉದಯವಾಣಿ ಫಲಶ್ರುತಿ– ಕುಂದಾಪುರ: ವೈಕಲ್ಯ ಇದ್ದರೂ ಬಿಎ ಪದವಿ ಪೂರೈಸಿ ವೈದ್ಯಕೀಯ ಸವಲತ್ತು ಪಡೆಯಲು ತೊಂದರೆಗೊಳಗಾದ ಗುಡ್ಡಮ್ಮಾಡಿಯ ಸಾಲಾಡಿಯ ಅಮೃತಾ ಶೆಟ್ಟಿ (28) ಅವರ ಮನೆಗೆ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಅವರು ಭೇಟಿ ನೀಡಿದ್ದಾರೆ.
ಸ್ಥಳೀಯ ವೈದ್ಯಾಧಿಕಾರಿ ಡಾ| ಚಿಕ್ಕಮರಿ, ಆಶಾ ಕಾರ್ಯಕರ್ತೆ ಅವರ ಜತೆಗೂಡಿ ಭೇಟಿ ಮಾಡಿದರು. ಈಗಾಗಲೇ ಆರೋಗ್ಯ ಇಲಾಖೆಯಿಂದ ಅವರಿಗೆ ವಾಟರ್ಬೆಡ್, ವೀಲ್ಚೇರ್, ಎಂಡೋಸಲ್ಫಾನ್ ಮಾಸಾಶನ ಕೊಡಿಸಲಾಗುತ್ತಿದೆ. ಆದರೆ ದಾರಿಯೇ ಇಲ್ಲದ ಕಾರಣ ವೀಲ್ಚೇರ್ ಬಳಕೆ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗಿತ್ತು.
ಈಕೆ ಛಲದಿಂದ ಪದವಿ ಪಡೆದರೂ ಮಸ್ಕಿಲರಿ ಡಿಸ್ಟ್ರೋಫಿ ಸಮಸ್ಯೆಯಿಂದಾಗಿ ಉಂಟಾದ ವೈಕಲ್ಯಕ್ಕಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಲಾಗದೇ ಸೋತಿದ್ದಾರೆ. ಇನ್ನೊಬ್ಬರ ನೆರವಿಲ್ಲದೆ ಒಂದು ಹೆಜ್ಜೆ ಇಡಲಾಗದ ಈಕೆಗೆ ವೈದ್ಯರು ಚಿಕಿತ್ಸೆ ನಿರಾಕರಿಸಿದ್ದಾರೆ ಎಂಬ ಆರೋಪ ಇದೆ ಎಂಬ ಕುರಿತು ಉದಯವಾಣಿ “ವೈಕಲ್ಯ ಮರೆತು ಪದವಿಯಲ್ಲಿ ಪಾಸ್; ಚಿಕಿತ್ಸೆ ಪಡೆಯುವಲ್ಲಿ ಫೇಲ್!’ ಎಂದು ವರದಿ ಪ್ರಕಟಿಸಿತ್ತು.
ಈ ವರದಿಗೆ ತಾಲೂಕು ಆರೋಗ್ಯಾಧಿಕಾರಿಗಳು ಸ್ಪಂದಿಸಿ ಮನೆಗೆ ಭೇಟಿ ನೀಡಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ದುರಸ್ತಿ ಆಗುತ್ತಿರುವ ಕಾರಣ ಹಾಸಿಗೆಗಳ ಕೊರತೆ ಯಿಂದಾಗಿ ಸಂವ ಹನ ಕೊರತೆ ಯಾಗಿ ಚಿಕಿತ್ಸೆ ಸಾಧ್ಯವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿರುವ ಅವರು, ಈ ವಾರದಲ್ಲಿ ಅಮೃತಾ ಅವರ ಮನೆಗೆ ಇಲಾಖಾ ವಾಹನ ಕಳುಹಿಸಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದಾರೆ. ಅಲ್ಲದೇ ದಾರಿ ಸಮಸ್ಯೆ ಕುರಿತು ಸ್ಥಳೀಯ ವೈದ್ಯಾಧಿಕಾರಿಗಳು ನಾಡಾ ಗುಡ್ಡೆಯಂಗಡಿ ಗ್ರಾಮ ಪಂಚಾಯತ್ಗೆ ಪತ್ರ ಬರೆದಿದ್ದಾರೆ. ಚುನಾವಣ ನೀತಿ ಸಂಹಿತೆ ಮುಗಿದ ತತ್ಕ್ಷಣ ದಾರಿ ಕುರಿತು ಪರಿಶೀಲನೆ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾಗಿ ವೈದ್ಯಾಧಿಕಾರಿ ಹೇಳಿದ್ದಾರೆ.
ಸಾಂತ್ವನ ಕೇಂದ್ರದಿಂದ ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರದಿಂದ ಇಬ್ಬರು ಸಿಬಂದಿಗಳು ಭೇಟಿ ನೀಡಿ ವಿವರಗಳನ್ನು ಪಡೆದಿದ್ದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಿದ್ದಾರೆ. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಆಕೆಯ ಮನೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.