ಸಂಚಾರಕ್ಕೆ ದುಸ್ತರವಾದ ನಂಚಾರು ರಸ್ತೆ
4 ಕಿ.ಮೀ. ಉದ್ದಕ್ಕೆ ಸಂಪೂರ್ಣ ಹೊಂಡಗುಂಡಿ
Team Udayavani, Jun 28, 2019, 5:10 AM IST
ಬ್ರಹ್ಮಾವರ: ನಾಲ್ಕೂರು ಗ್ರಾ.ಪಂ. ವ್ಯಾಪ್ತಿಯ ನಂಚಾರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಂಚಾರಿನಿಂದ ಅಂಡಾರುಕಟ್ಟೆ ಕ್ರಾಸ್ ಸುಮಾರು 4 ಕಿ.ಮೀ. ದೂರದವರೆಗೆ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದೆ. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿದ್ದಾರೆ.
ಮುಖ್ಯ ರಸ್ತೆ
ಕೆಂಜೂರು, ಮುದ್ದೂರು, ನುಕ್ಕೂರು ಮೊದಲಾದ ಪ್ರದೇಶಗಳಿಂದ ಜನರು ಆವರ್ಸೆ, ಗೋಳಿಯಂಗಡಿ ಕಡೆಗೆ ತೆರಳುವ ಮುಖ್ಯ ರಸ್ತೆ ಇದಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ.
ಸಂಪೂರ್ಣ ನಿರ್ಲಕ್ಷé
ನಂಚಾರು ರಸ್ತೆಯಲ್ಲಿ ದಿನಂಪ್ರತಿ ಹಲವು ಶಾಲಾ ವಾಹನಗಳು ಸಂಚರಿಸುತ್ತವೆ. ಖಾಸಗಿ ವಾಹನಗಳಲ್ಲದೆ ಹಲವು ಫ್ಯಾಕ್ಟರಿ ವಾಹನಗಳು ಸಾಗುತ್ತವೆ. ಆದರೂ ಈ ರಸ್ತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೂರು ವರ್ಷಗಳ ಹಿಂದೆ ನವಯುಗ ಕಂಪೆನಿಯಿಂದ ದುರಸ್ತಿಗೊಂಡ ಬಳಿಕ ಈ ರಸ್ತೆ ಯಾವುದೇ ನಿರ್ವಹಣೆಯನ್ನೂ ಕಂಡಿಲ್ಲ.
ಮಳೆಗಾಲದ ದುಸ್ಥಿತಿ
ಈ ರಸ್ತೆಯುದ್ದಕ್ಕೂ ಬೃಹತ್ ಹೊಂಡಗಳು ನಿರ್ಮಾಣವಾಗಿವೆ. ಅವುಗಳಲ್ಲಿ ನೀರು ತುಂಬಿ ಸಂಚಾರ ಅಸಾಧ್ಯವಾಗಿದೆ. ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದಾಗಿದೆ.
ಚರಂಡಿ ಕಣ್ಮರೆ
ನಂಚಾರು ರಸ್ತೆಯ ಬಹುತೇಕ ಕಡೆ ಚರಂಡಿ ಮುಚ್ಚಿ ಹೋಗಿದೆ. ಪರಿಣಾಮ ನೀರು ರಸ್ತೆಯಲ್ಲೇ ಹರಿದು ಸಮಸ್ಯೆ ಉಲ್ಬಣಿಸಿದೆ. ಆಡಳಿತ ವ್ಯವಸ್ಥೆ
ತತ್ಕ್ಷಣ ಗಮನ ಹರಿಸಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಶಾಶ್ವತ ಕಾಮಗಾರಿ ಪ್ರಯತ್ನ
ನಂಚಾರು ರಸ್ತೆ ದುರಸ್ತಿ ಹಿನ್ನಲೆಯಲ್ಲಿ ಶಾಶ್ವತ ಕಾಮಗಾರಿಗೆ ಪ್ರಯತ್ನಿಸಲಾಗುತ್ತಿದೆ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಶೀಘ್ರ ಅನುದಾನ ಬಿಡುಗಡೆಯಾಗುವ ಭರವಸೆ ಇದೆ.
-ಕೆ. ರಘುಪತಿ ಭಟ್, ಶಾಸಕರು, ಉಡುಪಿ
ತತ್ಕ್ಷಣ ಸ್ಪಂದಿಸಿ
ನಂಚಾರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸಾರ್ವನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯಾಡಳಿತ ಮತ್ತು ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು.
-ಪ್ರಸಾದ್ ಹೆಗ್ಡೆ ನಂಚಾರು