ಗ್ರಾಮೀಣ ಹೈನುಗಾರರಿಗೆ ಪ್ರೋತ್ಸಾಹ ನೀಡಿದ ಸಂಸ್ಥೆ
ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿ.
Team Udayavani, Feb 21, 2020, 5:23 AM IST
ಗ್ರಾಮೀಣ ಭಾಗದ ಹೈನುಗಾರಿಕೆ ಮೂಲಕ ಸ್ವಾವಲಂಬನೆಯ ಕನಸಿನಿಂದಾಗಿ ಹುಟ್ಟಿದ ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಇಲ್ಲಿನ ಜನರ ಆರ್ಥಿಕ ಮೂಲ ಮಾತ್ರವಾಗಿರದೇ ಹೈನುಗಾರಿಕೆಯ ಪ್ರೋತ್ಸಾಹದ ನೆಲೆಯೂ ಆಗಿದ್ದು ವಾರ್ಷಿಕ 4.11 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಿರುವುದು ಹೆಮ್ಮೆಯ ಸಂಗತಿ.
ಮೊಳಹಳ್ಳಿ: ಗ್ರಾಮೀಣ ಭಾಗದ ಹೈನುಗಾರಿಕೆ ಮೂಲಕ ಸ್ವಾವಲಂಬನೆಯ ಕನಸಿನಿಂದಾಗಿ ಹುಟ್ಟಿದ ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿ. 1985ರಲ್ಲಿ ಸ್ಥಾಪನೆಯಾಯಿತು. ಈ ಸಂಘವು ಗ್ರಾಮೀಣ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಜತೆಗೆ ಗ್ರಾಮೀಣ ಅಭಿವೃದ್ಧಿಯ ಮೂಲ ಪ್ರೇರಣೆಯಾಗಿರಿಸಿಕೊಂಡು ಗ್ರಾಮೀಣ ಹೈನುಗಾರರಿಗೆ ಗರಿಷ್ಠ ಪ್ರೋತ್ಸಾಹ ನೀಡಿದ ಹೆಗ್ಗಳಿಕೆ ಈ ಸಂಸ್ಥೆಯದ್ದು.
ಈಗಾಗಲೇ ಮರತೂರು ಹಾಗೂ ಕ್ವಾಣಿ ಎಂಬಲ್ಲಿ ಶಾಖೆಯನ್ನು ಹೊಂದಿದ್ದು, ಗುಣಮಟ್ಟದ ಹಾಲು ಸಂಗ್ರಹಿಸಿ ಬಿದ್ಕಲ್ಕಟ್ಟೆಯ ಬಿಎಂಸಿಗೆ ನೀಡಲಾಗುತ್ತಿದೆ. . ಸಂಘದ ಸದಸ್ಯರಾದ ಚಂದ್ರಶೇಖರ್ ಶೆಟ್ಟಿ ಕಂಬಳಗದ್ದೆ ಹಾಗೂ ಜಯರಾಂ ಶೆಟ್ಟಿ ಅವರು ಪ್ರತಿ ನಿತ್ಯ ಸುಮಾರು 25 ಲೀ. ಹಾಲು ಸಂಘಕ್ಕೆ ನೀಡುತ್ತಿದ್ದು ಗರಿಷ್ಠ ಹಾಲು ಪೂರೈಕೆದಾರರಾಗಿದ್ದಾರೆ.
ಹೈನುಗಾರರಿಗೆ ಪ್ರೋತ್ಸಾಹ
ಸಂಘದ ವತಿಯಿಂದ ಇತ್ತೀಚೆಗೆ ಕೈಲ್ಕೆರೆಯಲ್ಲಿ ವಲಯ ಮಟ್ಟದ ಜಾನುವಾರು ಪ್ರದರ್ಶನಗೊಂಡಿದೆ. ಹಾಗೂ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ಹೈನುಗಾರರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಬಹುಮಾನ ನೀಡಲಾಗುತ್ತಿದೆ.
ಸಂಘವು ಕಳೆದ ಸಾಲಿನಲ್ಲಿ 4.11 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು 1.96 ಲಕ್ಷ ರೂ. ಬೋನಸ್ಸು ನೀಡಲಾಗಿದೆ. ಹಾಗೆಯೇ ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ನೀಡಿದ ಸಾಧನೆಯನ್ನೂ ಮಾಡಿದೆ.
ಸ್ವಂತ ನಿವೇಶನ ನೀಡಿದ ದಾನಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಳೆ ಸಂಘದಲ್ಲಿ ಒಂದಾದ ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಫೆ.2, 1985 ರಂದು ಸ್ಥಾಪಿಸುವ ಮೊದಲು ದಾನಿ ವಿಶ್ವನಾಥ ಶೆಟ್ಟಿ ಹೆಸಿನ್ಕಟ್ಟೆ ಅವರು ತನ್ನೂರಿನ ಹೈನುಗಾರರಿಗೂ ಕೂಡಾ ಆರ್ಥಿಕ ಶಕ್ತಿ ನೀಡಬೇಕು ಎನ್ನುವ ನಿಟ್ಟಿನಿಂದ ಅಂದು ತನ್ನ ಸ್ವಂತ ನಿವೇಶನವನ್ನು ಈ ಸಂಘದ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ಗ್ರಾಮಕ್ಕೆ ಮಾದರಿಯಾಗಿದ್ದರು.
ಪ್ರಸ್ತುತ ಸ್ಥಿತಿಗತಿ
ಸಂಘವು 60 ಸದಸ್ಯರಿಂದ ಆರಂಭಗೊಂಡಿದ್ದು, 100 ಲೀ. ಹಾಲು ಸಂಗ್ರಹಿಸುತ್ತಿತ್ತು. ಇನ್ನು ದಿ| ಡಾ| ಟಿ.ಎ.ಪೈ ಅವರು ಸ್ಥಾಪಿಸಿದ ಕೆನರಾ ಮಿಲ್ಕ್ ಯೂನಿಯನ್ಗೆ ಸರಬರಾಜು ಮಾಡಲಾಗುತ್ತಿತ್ತು. ಸದ್ಯ 368 ಸದಸ್ಯರಿದ್ದು, ಪ್ರತಿ ದಿನ 800 ಲೀ. ಹಾಲು ಸಂಗ್ರಹವಾಗುತ್ತಿದೆ .
ಸಂಸ್ಥೆಯು ಹೈನುಗಾರಿಕೆಯ ಜತೆಗೆ ಸಮಾಜಮುಖೀ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಗ್ರಾಮೀಣ ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಯ ಮಹತ್ತರ ಪಾತ್ರವನ್ನು ವಹಿಸುತ್ತಿದ್ದು , ಮುಂದಿನ ದಿನಗಳಲ್ಲಿ ಸಂಘವು ವ್ಯವಸ್ಥಿತ ಕಟ್ಟಡ ನಿರ್ಮಾಣದ ಯೋಜನೆ ಹೊಂದಿದೆ.
-ದಿನೇಶ್ ಹೆಗ್ಡೆ ಮೊಳಹಳ್ಳಿ ,
ಅಧ್ಯಕ್ಷರು
ಅಧ್ಯಕ್ಷರು:
ಸೀತಾರಾಮ ಹೆಗ್ಡೆ, ಗೋಪಾಲ ಶೆಟ್ಟಿ ಬಾಗಳಕಟ್ಟೆ, ಸದಾನಂದ ಶೆಟ್ಟಿ ಕೋಣಿ, ನವೀನಚಂದ್ರ ಶೆಟ್ಟಿ, ದಿನೇಶ್ ಹೆಗ್ಡೆ (ಹಾಲಿ)
ಕಾರ್ಯದರ್ಶಿಗಳು:
ಗೋಪಾಲ ಶೆಟ್ಟಿ, ಅನಿತಾ ಶೆಟ್ಟಿ, ಆರ್.ವಿವೇಕಾನಂದ ಶೆಟ್ಟಿ (ಹಾಲಿ)
ಟಿ.ಲೋಕೇಶ್ಆಚಾರ್ಯತೆಕ್ಕಟ್ಟೆ