ಕೇಂದ್ರ ಸರಕಾರದ ಪ್ರಜಾತಂತ್ರ ವಿರೋಧಿ ನೀತಿ: ಕಾಂಗ್ರೆಸ್
Team Udayavani, Apr 15, 2018, 6:00 AM IST
ಉಡುಪಿ: ವಿಪಕ್ಷಗಳು ಬಜೆಟ್ ಅಧಿವೇಶನದಲ್ಲಿ ಸಂಸತ್ ಕಲಾಪ ನಡೆಸಲು ಅವಕಾಶ ನೀಡದೆ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿವೆ ಎಂಬ ನೆಪದೊಂದಿಗೆ ದೇಶದ ವಿವಿಧೆಡೆ ಬಿಜೆಪಿ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಜನವಿರೋಧಿ ನೀತಿಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರತಿಕ್ರಿಯಿಸಿದ್ದಾರೆ.
ಸಂಸತ್ತಿನಲ್ಲಿ ಬಹುಮತ ಇದೆ ಎಂಬುದರಿಂದ ತಾನು ನಡೆದದ್ದೇ ದಾರಿ ಎಂಬಂತೆ ವರ್ತಿಸುವ ಬಿಜೆಪಿ, ಕಲಾಪಗಳಲ್ಲಿ ಜನಸಾಮಾನ್ಯರ ಹಾಗೂ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ವಿಪಕ್ಷಗಳಿಗೆ ಆಸ್ಪದ ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಯುಪಿಎ ಸರಕಾರದ ಅವಧಿಯಲ್ಲಿ ಇದೇ ಬಿಜೆಪಿಯ ಸಂಸದರು ಯಾವುದೇ ಜನಪರ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಅವಕಾಶ ನೀಡದೆ ಪ್ರತಿಭಟನೆ, ಗದ್ದಲದೊಂದಿಗೆ ಜನವಿರೋಧಿ ನೀತಿ ಅನುಸರಿಸಿದ್ದರು. ಬಿಜೆಪಿಯ ಈ ನಡೆಯಿಂದ ದೇಶದ ಅಭಿವೃದ್ಧಿಯ ನಾಗಾಲೋಟಕ್ಕೆ ಹಿನ್ನಡೆಯಾಗಿತ್ತು.
ಇದರ ಹೊಣೆಯನ್ನು ಬಿಜೆಪಿ ಹೊರಬೇಕು. ಅಂದು ಪ್ರತಿಭಟಿಸಿ, ವಿರೋಧಿಸಿದ ಯುಪಿಎ ಸರಕಾರದ ಯೋಜನೆಗಳನ್ನು ಇಂದು ಬಿಜೆಪಿ ಕಾರ್ಯಗತಗೊಳಿಸುತ್ತಿದೆ. ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ಉಪವಾಸ ಹಾಗೂ ಪ್ರತಿಭಟನೆಯ ನೆನಪಾಗುವುದು ಎಂದು ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರತಿಕ್ರಿಯಿಸಿದ್ದಾರೆ.