ಮಳೆ ಬಂದರೆ ಮುಖ್ಯ ರಸ್ತೆಯಲ್ಲಿ ಕೃತಕ ನೆರೆ…!
ಗಂಗೊಳ್ಳಿ: ಮಳೆಗಾಲದ ಸಿದ್ಧತೆ ಇಲ್ಲದೆ ಅವಾಂತರ ಸೃಷ್ಟಿ
Team Udayavani, Jun 20, 2019, 5:51 AM IST
ಗಂಗೊಳ್ಳಿ: ಮುಂಗಾರು ನಿಧಾನಕ್ಕೆ ಬಿರುಸು ಪಡೆದುಕೊಳ್ಳುತ್ತಿದೆ. ಆದರೆ ಮಳೆಗಾಲಕ್ಕೆ ಮುನ್ನ ಆಗಬೇಕಾದ ಸಿದ್ಧತೆಗಳು ಮಾತ್ರ ಸರಿಯಾದ ಸಮಯಕ್ಕೆ ಮುಗಿಯದೇ ಇದ್ದು ಕೆಲವೆಡೆ ಮಳೆಗಾಲದ ಅವಾಂತರಗಳು ಸೃಷ್ಟಿಯಾಗುತ್ತಿವೆ. ಮಳೆ ಬಂತೆಂದರೆ ಸಾಕು ಮುಖ್ಯ ರಸ್ತೆಯಲ್ಲಿ ಕೃತಕ ನೆರೆ ನಿರ್ಮಾಣವಾಗುತ್ತಿದ್ದು, ಸಾರ್ವಜನಿಕರು ಸಂಚಾರಕ್ಕೆ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಮಳೆಗಾಲಕ್ಕೂ ಮುನ್ನ ಅನೇಕ ಕಡೆಗಳಲ್ಲಿ ಚರಂಡಿ ಸ್ವತ್ಛತೆ, ಅದರಲ್ಲಿದ್ದ ಹೂಳೆತ್ತುವ ಕಾರ್ಯ, ತ್ಯಾಜ್ಯ ನಿರ್ವಹಣೆ ಮಾಡಿಲ್ಲ. ಕೆಲವೆಡೆಗಳಲ್ಲಿ ಮುಖ್ಯ ರಸ್ತೆಯಾಗಿದ್ದರೂ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದ ಮಳೆ ನೀರೆಲ್ಲ ರಸ್ತೆಯಲ್ಲಿಯೇ ಹರಿದು ಹೋಗುತ್ತಿದ್ದು, ನೀರು ಹೋಗಲು ದಾರಿ ಇಲ್ಲದ ಕಡೆಗಳಲ್ಲೆಲ್ಲ ರಸ್ತೆಯೇ ತೋಡಿನಂತಾಗುತ್ತದೆ.
ಇದರಿಂದ ಕೆಲವೊಮ್ಮೆ ಇತರ ವಾಹನಗಳು ತೆರಳುವಾಗ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರಿಗೆ ಕೆಸರು ನೀರಿನ ಅಭಿಷೇಕವಾಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು, ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಿ, ಕೃತಕ ನೆರೆ ಸೃಷ್ಟಿಯಾಗದಂತೆ ಸ್ಥಳೀಯಾಡಳಿತ ಗಮನಹರಿಸಲಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ಕ್ರಮ ಕೈಗೊಳ್ಳಲಾಗುವುದು
ಮುಖ್ಯ ರಸ್ತೆಗೆ ಚರಂಡಿ ಇಲ್ಲದಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗೆ ಪಂಚಾಯತ್ನಿಂದ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದೇವೆ. ಈಗಾಗಲೇ ಕೆಲವೆಡೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಕೂಡಲೇ ಕೆಲಸ ಮಾಡಲಾಗುವುದು.
-ಶ್ರೀನಿವಾಸ ಖಾರ್ವಿ,
ಅಧ್ಯಕ್ಷರು, ಗಂಗೊಳ್ಳಿ ಗ್ರಾ.ಪಂ.