ಬ್ರಹ್ಮಾವರ ತಾಲೂಕು: ಪ್ರಾಕೃತಿಕ ವಿಕೋಪ ಎದುರಿಸಲು ಸಿದ್ಧತೆ
Team Udayavani, Jun 21, 2019, 5:59 AM IST
ಬ್ರಹ್ಮಾವರ: ನೂತನ ಬ್ರಹ್ಮಾವರ ತಾಲೂಕು ಪ್ರಸ್ತುತ ಸಾಲಿನ ಮಳೆಗಾಲವನ್ನು ನಿರ್ವಹಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ.
ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಈಗಾಗಲೇ ಬ್ರಹ್ಮಾವರ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗಳ ಪೂರ್ವಭಾವಿ ಸಭೆ ನಡೆಸಿ ರೂಪು ರೇಶೆ ಹಾಕಿಕೊಳ್ಳಲಾಗಿದೆ.
ಮುಖ್ಯವಾಗಿ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜುಗೊಳ್ಳಲಾಗಿದೆ. ದೋಣಿ ವ್ಯವಸ್ಥೆ, ಈಜುಗಾರರು, ಮರ ಕತ್ತರಿಸುವ ಯಂತ್ರ, ಕತ್ತರಿಸುವವರು, ಗೃಹರಕ್ಷಕ ದಳ, ಜೆಸಿಬಿ ಸೇರಿದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುರ್ತು ಪರಿಸ್ಥಿತಿ ಸಂದರ್ಭ ಗಂಜಿ ಕೇಂದ್ರ ಸ್ಥಾಪನೆ ಕುರಿತು ಯೋಜಿಸಲಾಗಿದೆ. ಆಯಾಯ ಪ್ರದೇಶಗಳಲ್ಲಿ ಸ್ಥಳೀಯ ಯುವಕ ಮಂಡಲದ ನೆರವನ್ನು ಪಡೆಯಲು ನಿರ್ಧರಿಸಲಾಗಿದೆ.
ನೆರೆ ಸಾಧ್ಯತೆ ಪ್ರದೇಶಗಳು
ನೀಲಾವರ ಸಮೀಪದ ಬಾವಲಿ ಕುದ್ರು, ನಂದನ ಕುದ್ರು,ರಾಮನ ಕುದ್ರು, ಸಾಹೇಬರ ಕುದ್ರು, ಉಪ್ಪೂರು ಪಂಚಾಯತ್ ವ್ಯಾಪ್ತಿಯ ಹೆರಾಯಿಬೆಟ್ಟು, ಮಾಯಾಡಿ, ಮಾವಿನಕುದ್ರು, ಹೇರೂರು ಹೊಳೆಬದಿ, ಆರೂರು, ಹಾವಂಜೆಯ ಕೀಳಂಜೆ ನೆರೆ ಕಾಲನಿ, ಬೈಕಾಡಿ ಹೊಳೆಬದಿ, ಮಟಪಾಡಿ, ಹಂದಾಡಿ, ಬಾರಕೂರು ಕಚ್ಚಾರು ನೆರೆ ಪೀಡಿತ ಪ್ರದೇಶಗಳಾಗಿವೆ.
ಕೋಟ ಹೋಬಳಿಯಲ್ಲಿ ವಡ್ಡರ್ಸೆ ಗ್ರಾಮದ ಉಪ್ಲಾಡಿ, ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಬೆಟ್ಲಕ್ಕಿ, ಕೋಟ ಪಂಚಾಯತ್ ವ್ಯಾಪ್ತಿಯ ಗಿಳಿಯಾರು ಹಾಗೂ ಶಿರಿಯಾರ ಪ್ರಮುಖವಾಗಿ ನೆರೆಯಿಂದ ಸಮಸ್ಯೆಗೊಳಗಾಗುವ ಪ್ರದೇಶಗಳು.