ಕಾಲ್ನಡಿಗೆಯಲ್ಲಿ ಬ್ರಹ್ಮಾವರ ಟು ಜಮ್ಮು ಕಾಶ್ಮೀರ: 55 ದಿನಗಳಲ್ಲಿ ಜಮ್ಮು ತಲುಪಿದ ಯುವಕ
Team Udayavani, Nov 19, 2021, 8:00 AM IST
ಉಡುಪಿ: ಇದು ಬ್ರಹ್ಮಾವರ ಟು ಜಮ್ಮು ಕಾಶ್ಮೀರ ಏಕಾಂಗಿ ಪಯಣದ ಕಥನ… ನಡಿಗೆ ಮೂಲಕ 55 ದಿನಗಳಲ್ಲಿ ತಲುಪಿ, ಅಲ್ಲಿನ ಜನರಿಗೆ ತುಳುನಾಡಿನ ಹೆಮ್ಮೆಯ ಜಾನಪದ ಕಲೆ ಹುಲಿವೇಷವನ್ನು ಪ್ರದರ್ಶಿಸಿದ್ದಾರೆ ಬ್ರಹ್ಮಾವರ ತಾಲೂಕು ಪೇತ್ರಿ ಸಮೀಪದ ಮುಂಡ್ಕಿನಜಡ್ಡು ನಿವಾಸಿ 22ರ ಹರೆಯದ ಹರ್ಷೇಂದ್ರ.
ಸೆ. 19ರಂದು ಬ್ರಹ್ಮಾವರದಿಂದ ಹೊರಟು ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್ ಮೂಲಕ 2,800 ಕಿ.ಮೀ. ದೂರದ ಜಮ್ಮು ಕಾಶ್ಮೀರದ ಪಠಾಣ್ಕೋಟ್ಗೆ ಸೋಮವಾರ ತಲುಪಿದ್ದಾರೆ. ಮಳೆ, ಬಿಸಿಲಿನ ನಡುವೆ ಪ್ರತೀದಿನ ಗಂಟೆಗೆ ಐದಾರು ಕಿ.ಮೀ.ಯಂತೆ 50 ಕಿ.ಮೀ. ಕ್ರಮಿಸುತ್ತಿದ್ದೆ ಎಂದು ಅವರು ಹೇಳುತ್ತಾರೆ.
ಲಾಡ್ಜ್ ನಲ್ಲಿ ತಂಗಿಲ್ಲ, ಲಘು ಆಹಾರ:
ಕಡಿಮೆ ಬಜೆಟ್ನಲ್ಲಿ ಕನಸಿನ ಪಯಣಕ್ಕೆ ಮುನ್ನುಡಿ ಬರೆದ ಹಷೇìಂದ್ರ ಲಾಡ್ಜ್ ನಲ್ಲಿ ಎಲ್ಲಿಯೂ ತಂಗಿಲ್ಲ. ರಾತ್ರಿ ವೇಳೆ ಪೆಟ್ರೋಲ್ ಬಂಕ್, ಡಾಬಾ, ಪೊಲೀಸ್ ಠಾಣೆ, ರೈಲ್ವೇ ಸ್ಟೇಶನ್, ದೇವಸ್ಥಾನ, ಮಠಗಳಲ್ಲಿ ಉಳಿದುಕೊಂಡಿದ್ದಾರೆ. ಮಹಾರಾಷ್ಟ್ರ, ಪಂಜಾಬ್ಗಳಲ್ಲಿ ಕೆಲವು ಮನೆಯವರು ಆತಿಥ್ಯ ನೀಡಿದ್ದಾರೆ. ಹೊಟೇಲ್ಗಳಲ್ಲಿ ಲಘು ಸಸ್ಯಾಹಾರ ಊಟ, ಉಪಾಹಾರ ಸೇವಿಸಿದ್ದಾರೆ. ದಿನಕ್ಕೆ 5 ಲೀಟರ್ ನೀರು ಸೇವನೆ, 12 ಗಂಟೆ ನಡಿಗೆ, 8 ಗಂಟೆ ನಿದ್ರೆ ಮಾಡುತ್ತಿದ್ದೆ. ಹೆಚ್ಚು ಭಾರದ ಲಗೇಜ್ ಹೊಂದಿರದೆ ಕೆಲವೇ ಬಟ್ಟೆಗಳು, ಮ್ಯಾಟ್, ಬೆಡ್ಶೀಟ್, ಟೆಂಟ್ಸೆಟ್, ನೀರಿನ ಬಾಟಲ್, ಪ್ರಾಥಮಿಕ ಚಿಕಿತ್ಸಾ ಕಿಟ್ಗಳನ್ನು ಹೊಂದಿದ್ದೆ ಎನ್ನುತ್ತಾರೆ ಹರ್ಷೇಂದ್ರ.
ಹುಲಿವೇಷಕ್ಕೆ ಮಾರುಹೋದ ಕಾಶ್ಮೀರಿಗರು :
ಹರ್ಷೇಂದ್ರ ಅವರ ಪಯಣದ ಮೂಲ ಉದ್ದೇಶ ಡ್ರೀಮ್ವಾಕ್ ಪರಿಕಲ್ಪನೆ ಅಡಿಯಲ್ಲಿ ತುಳುನಾಡು ಬಾವುಟದ ಜತೆಗೆ ಕಾಶ್ಮೀರ ತಲುಪುವುದು ಮತ್ತು ಅಲ್ಲಿ ಹುಲಿವೇಷ ತೊಟ್ಟು ಪ್ರದರ್ಶಿಸುವುದಾಗಿತ್ತು. ಅದರಂತೆ ಮಂಗಳವಾರ ಉತ್ಥಾನದ್ವಾದಶಿ ದಿನ ಅವರ ಕನಸು ಈಡೇರಿದ್ದು, ಜಮ್ಮು ಕಾಶ್ಮೀರ ಗಡಿ ಭಾಗ ಲಕನ್ಪುರ್ ಎಂಬಲ್ಲಿ ಸ್ಥಳೀಯ ಪೈಂಟರ್ಗಳನ್ನು ಹುಡುಕಿ ಹುಲಿವೇಷ ತೊಟ್ಟಿದ್ದಾರೆ. ಹುಲಿವೇಷಕ್ಕೆ ಬೇಕಾದ ಪರಿಕರಗಳನ್ನು ಇವರು ಮನೆಯಿಂದಲೇ ಕೊಂಡೊಯ್ದಿದ್ದರು. ನೂರಾರು ಮಂದಿ ಸ್ಥಳೀಯರು ಒಟ್ಟುಗೂಡಿ ಹುಲಿವೇಷ ಕಂಡು ಅಚ್ಚರಿ ಜತೆಗೆ ಹರ್ಷ ವ್ಯಕ್ತಪಡಿಸಿದರು.
ಡ್ರೀಮ್ವಾಕ್ ಥೀಂನಲ್ಲಿ ತುಳುನಾಡಿನ ಧÌಜದೊಂದಿಗೆ ಕಾಶ್ಮೀರಕ್ಕೆ ನಡೆದುಕೊಂಡು ಸಾಗುವುದು ಮತ್ತು ಕರಾವಳಿ ಹೆಮ್ಮೆಯ ಕಲೆ ಹುಲಿವೇಷ ತೊಟ್ಟು ಪ್ರದರ್ಶಿಸುವುದು ನನ್ನ ಕನಸಾಗಿತ್ತು. ಹುಲಿವೇಷ ಪ್ರದರ್ಶನಕ್ಕೆ ನೂರಾರು ಮಂದಿ ಸ್ಥಳೀಯರು ಸೇರಿದ್ದರು. ಮೆಚ್ಚುಗೆಯ ಮಹಾಪೂರವೇ ಸಿಕ್ಕಿತು. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ನ.18ಕ್ಕೆ ವಿಮಾನದ ಮೂಲಕ ಮಂಗಳೂರು ತಲುಪಿ, ಊರಿಗೆ ಮರಳಲಿದ್ದೇನೆ. -ಹರ್ಷೇಂದ್ರ., ಮುಂಡ್ಕಿನಜಡ್ಡು