ಮೋರ್ಟು – ಬೆಳ್ಳಾಲ ಸೇತುವೆ ಕಾಮಗಾರಿ ವಿಳಂಬ
ಮಾಸಾಂತ್ಯಕ್ಕೆ ಅಂತಿಮ ಗಡುವಿದ್ದರೂ ಮುಗಿಯದ ಕಾಮಗಾರಿ ; ಮಳೆಗಾಲದಲ್ಲಿ ನದಿ ದಾಟಲು ಜನರಿಗೆ ಸಂಕಷ್ಟ
Team Udayavani, Jun 29, 2019, 5:32 AM IST
ಆಜ್ರಿ: ಕೆರಾಡಿ ಗ್ರಾಮ ವ್ಯಾಪ್ತಿಯ ಮೋರ್ಟು – ಬೆಳ್ಳಾಲ – ಆಜ್ರಿ ಎನ್ನುವ ಊರುಗಳನ್ನು ಬೆಸೆಯುವ ಸೇತುವೆ ಕಾಮಗಾರಿಗೆ ಜೂ.30 ಕ್ಕೆ ಅಂತಿಮ ಗಡುವಿದ್ದರೂ, ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವುದು ಕಷ್ಟ. ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ಇದರಿಂದ ಇಲ್ಲಿನ ಜನ ನದಿ ದಾಟಲು ಸುತ್ತಿ ಬಳಸಿ ಬರಬೇಕಾದ ಸ್ಥಿತಿಯಿದೆ.
ಈ ಬಾರಿಯ ಮಳೆಗಾಲ ಆರಂಭವಾದರೂ ಇನ್ನೂ ಮೋರ್ಟು -ಬೆಳ್ಳಾಲ ಸಂಪರ್ಕಿಸುವ ಚಕ್ರಾ ನದಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಮಾತ್ರ ಮುಗಿದಿಲ್ಲ. ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆ ಈ ಬಾರಿಯ ಮುಂಗಾರಿಗೂ ಮುನ್ನ ಈಡೇರುವ ಭರವಸೆ ಮಾತ್ರ ದೂರವಾದಂತಿದೆ. ಇನ್ನೂ ಸಾಕಷ್ಟು ಕಾಮಗಾರಿ ಬಾಕಿ ಇರುವುದರಿಂದ ಸೇತುವೆ ಸಂಚಾರಕ್ಕೆ ತೆರೆದುಕೊಳ್ಳಲು ಮತ್ತಷ್ಟು ಸಮಯ ಬೇಕಾಗಬಹುದು. ಆದರೆ ಅಧಿಕಾರಿಗಳು ಹೇಳುವ ಪ್ರಕಾರ ಜುಲೈ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಕಳೆದೊಂದು ವರ್ಷದಿಂದ ಮೋರ್ಟು – ಬೆಳ್ಳಾಲ ಸಂಪರ್ಕಿಸುವ ಸೇತುವೆ ಕಾಮಗಾರಿ ನಡೆಯುತ್ತಿದೆ. ಸೇತುವೆಗೆ ಸಂಪರ್ಕಿಸುವ ಸುಮಾರು 6.5 ಕಿ.ಮೀ. ಉದ್ದದ ರಸ್ತೆಗೆ ಡಾಮರೀಕರಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇನ್ನು 1.5 ಕಿ.ಮೀ. ಉದ್ದದ ರಸ್ತೆಗೆ ಡಾಮರೀಕರಣ ಕಾಮಗಾರಿ ಬಾಕಿ ಇದೆ. ಸೇತುವೆ ಕಾಮಗಾರಿಗೆ 2.49 ಕೋ.ರೂ. ಮಂಜೂರಾಗಿದ್ದರೆ, ಒಟ್ಟು ಸುಮಾರು 4.50 ಕೋ.ರೂ. ಅನುದಾನವು ಸೇತುವೆ, ಡಾಮರೀ ಕರಣ ಹಾಗೂ ಕಾಂಕ್ರೀಟಿಕರಣ ಕಾಮಗಾರಿಗೆ ಬಿಡುಗಡೆಯಾಗಿದೆ.
ಮಳೆಗಾಲದಲ್ಲಿ ಸಂಪರ್ಕ ಕಡಿತ
ಸಿದ್ದಾಪುರ ಮಾರ್ಗವಾಗಿ ಆಜ್ರಿಯಿಂದ ಮೋರ್ಟು ದಾರಿಯಾಗಿ ಬೆಳ್ಳಾಲ ಗ್ರಾಮಕ್ಕೆ ತೆರಳಬೇಕಾದರೆ ನದಿ ದಾಟಬೇಕು. ಬೇಸಗೆಯಲ್ಲಿ ಈ ಊರಿನವರು ತಾತ್ಕಾಲಿಕ ಕಾಲು ಸಂಕದ ಮೂಲಕವೇ ನದಿ ದಾಟುತ್ತಾರೆ. ಇದರಲ್ಲಿ ದ್ವಿಚಕ್ರ ವಾಹನ ಮಾತ್ರ ಸಂಚರಿಸುತ್ತದೆ. ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಕಡೆಗಳಿಂದ ಸಿದ್ದಾಪುರ, ಹೆಮ್ಮಕ್ಕಿ, ಶಂಕರನಾರಾಯಣ ಶಾಲೆ- ಕಾಲೇಜುಗಳಿಗೆ ವ್ಯಾಸಂಗಕ್ಕಾಗಿ ಸುಮಾರು 250 ರಿಂದ 300 ಮಕ್ಕಳು ಬರುತ್ತಿದ್ದು, ಮಳೆಗಾಲದಲ್ಲಿ ಅವರು ಸುತ್ತು ಹಾಕಿ ತೆರಳುತ್ತಾರೆ. ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.
ಕೊಲ್ಲೂರಿಗೆ ಹತ್ತಿರ
ಸಿದ್ದಾಪುರ, ಆಜ್ರಿಯಿಂದ ಚಕ್ರಾ ನದಿ ದಾಟಿ ಮೋರ್ಟು-ಬೆಳ್ಳಾಲ- ಕೆರಾಡಿ- ಮಾರಣಕಟ್ಟೆ ಯಾಗಿ ಕೊಲ್ಲೂರಿಗೆ ತೆರಳಲು ಇದು ಹತ್ತಿರದ ಮಾರ್ಗವಾಗಿದೆ.
30 ಕಿ.ಮೀ. ದೂರ ಸಂಚಾರ
ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಭಾಗದಲ್ಲಿ ಸುಮಾರು 1,000ಕ್ಕೂ ಹೆಚ್ಚು ಮನೆಗಳಿದ್ದು, ಈ ಭಾಗದ ಜನರಿಗೆ ಸಿದ್ದಾಪುರ ಹತ್ತಿರದ ಪೇಟೆ. ಸೇತುವೆಯಿಲ್ಲದ ಕಾರಣ ಮಳೆಗಾಲದಲ್ಲಿ ಸಿದ್ದಾಪುರಕ್ಕೆ ತೆರಳಬೇಕಾದರೆ ಸುತ್ತು ಬಳಸಿ 30 ಕಿ. ಮೀ. ಸಂಚರಿಸಬೇಕಾಗಿದೆ. ಸೇತುವೆಯಿದ್ದರೆ ಕೇವಲ 10 ಕಿ.ಮೀ. ಅಷ್ಟೇ ದೂರವಿರುವುದು. ಆದರೆ ಮಳೆಗಾಲ ಆರಂಭವಾದ ಮೇಲೆ ಖರೀದಿ, ಕೆಲಸ ಕಾರ್ಯಗಳಿಗೆ ಸಿದ್ದಾಪುರಕ್ಕಿಂತ 35 ಕಿ.ಮೀ. ದೂರದ ಕುಂದಾಪುರಕ್ಕೆ ಹೆಚ್ಚಾಗಿ ಹೋಗುವ ಪರಿಸ್ಥಿತಿ ಇಲ್ಲಿನ ಜನರದ್ದು. ಬೇಸಿಗೆಯಲ್ಲಿ ಇಲ್ಲಿನ ಜನರಿಗೆ ನದಿ ದಾಟಲು ಮೋರ್ಟು ಬಳಿ ಹಾಕಲಾದ ಕಾಲು ಸಂಕವೇ ಆಶ್ರಯವಾಗಿದೆ.
ಜುಲೈಗೆ
ಕಾಮಗಾರಿ ಪೂರ್ಣ
ಈ ತಿಂಗಳಾಂತ್ಯಕ್ಕೆ ಗುತ್ತಿಗೆದಾರರಿಗೆ ಕಾಮಗಾರಿ ಮುಗಿಸಲು ಕೊಟ್ಟ ಸಮಯ ಮುಕ್ತಾಯವಾಗಲಿದೆ. ಸ್ವಲ್ಪ ಮಟ್ಟಿಗೆ ನಿಧಾನಗತಿಯ ಕಾಮಗಾರಿಯಿಂದಾಗಿ ತಡವಾಗಿದೆ. ಆದರೂ ಈಗ ಮಳೆಗಾಲ ಆರಂಭವಾಗಿರುವುದರಿಂದ ಒಂದು ಬದಿ ನೀರು ಹರಿಯಲು ಬಿಟ್ಟು, ಮತ್ತೂಂದು ಬದಿ ಸ್ಲಾÂಬ್ ಹಾಕಲಾಗುವುದು. ಆ ಬಳಿಕ ಮತ್ತೂಂದು ಬದಿಯ ಸ್ಲಾÂಬ್ ಮಾಡಲಾಗುವುದು. ಇದನ್ನು ಸಂಪರ್ಕಿಸುವ ರಸ್ತೆಗೂ ಕಾಂಕ್ರೀಟೀಕರಣ ಕಾಮಗಾರಿ ಆಗುತ್ತಿದೆ. ಜುಲೈ ಅಂತ್ಯಕ್ಕೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ.
– ದುರ್ಗಾದಾಸ್, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್, ಲೋಕೋ ಪಯೋಗಿ ಇಲಾಖೆ ಕುಂದಾಪುರ
-ಪ್ರಶಾಂತ್ ಪಾದೆ