ಬೈಂದೂರು: ಬಹುತೇಕ ಶಾಂತಿಯುತ ಮತದಾನ
Team Udayavani, Apr 24, 2019, 6:08 AM IST
ಕುಂದಾಪುರ: ರಾಜ್ಯದ ಗಮನಸೆಳೆದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಚುನಾವಣೆ ನಡೆದಿದ್ದು, ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಬೆಳಗ್ಗಿನ ವೇಳೆ ಬಿರುಸಿನ ಮತದಾನ ನಡೆದರೆ, ಮಧ್ಯಾಹ್ನದಷ್ಟೊತ್ತಿಗೆ ಮಂದಗತಿಯಲ್ಲಿ ಮತದಾನ ನಡೆಯಿತ್ತಿದ್ದುದ್ದು ಕಂಡು ಬಂತು.
ನಗರ, ಪೇಟೆ, ಭಾಗಕ್ಕಿಂತ ಗ್ರಾಮೀಣ ಪ್ರದೇಶದ ಮತದಾರರಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂತು. ಹೆಚ್ಚಿನ ಎಲ್ಲ ಕಡೆಗಳಲ್ಲಿ ಉತ್ತಮ ಪ್ರಮಾಣದ ಮತದಾನ ನಡೆಯಿತು.
ನಕ್ಸಲ್ ಪ್ರದೇಶ: ಉತ್ತಮ ಮತದಾನ
ನಕ್ಸಲ್ ಪೀಡಿತ ತೊಂಬಟ್ಟುವಿನ ಮತಗಟ್ಟೆಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಶೇ. 42 ಪ್ರತಿಶತ ಮತದಾನವಾಗಿತ್ತು. ಇಲ್ಲಿ ಒಟ್ಟು 986 ಮತದಾರರಿದ್ದು, ಇದರಲ್ಲಿ 412 ಮಂದಿ ಆ ವೇಳೆಗಾಗಲೇ ತಮ್ಮ ಹಕ್ಕು ಚಲಾಯಿಸಿದ್ದರು. ಇಲ್ಲಿನ ಮತಗಟ್ಟೆಯಿಂದ ಹಂಚಿಕಟ್ಟೆಗೆ 7 ಕಿ.ಮೀ. ದೂರವಿದ್ದು, ಅಲ್ಲಿಂದ ಕೂಡ ಹೆಚ್ಚಿನವರು ಮತದಾನಕ್ಕೆ ಆಗಮಿಸಿದ್ದರು. ಇನ್ನು ಮತ್ತೂಂದು ನಕ್ಸಲ್ ಪ್ರದೇಶದ ಮತಗಟ್ಟೆಯಾದ ಮಚ್ಚಟ್ಟುವಿನಲ್ಲಿ ಒಟ್ಟು 1,278 ಮತದಾರರಿದ್ದು, ಬೆಳಗ್ಗೆ 11.40 ರ ಸುಮಾರಿಗೆ 467 ಮಂದಿ ಮತ ಚಲಾಯಿಸಿದ್ದು, ಆಗ ಶೇ.36.54 ಪ್ರತಿಶತ ಮತದಾನವಾಗಿತ್ತು. ಇನ್ನು ನಕ್ಸಲ್ ಬಾಧಿತ ಇತರೆ ಪ್ರದೇಶಗಳಾದ ಹಳ್ಳಿಹೊಳೆ, ಯಡಮೊಗೆ, ಹೊಸಂಗಡಿ, ಶಂಕರನಾರಾಯಣ, ಜಡ್ಕಲ್ – ಮುದೂರು ಭಾಗದಲ್ಲಿಯೂ ಉತ್ತಮ ಪ್ರಮಾಣದಲ್ಲಿ ಮತದಾನವಾಗದೆ. ಇಲ್ಲಿ ಗೋವಾ ಅರೆ ಸೇನಾ ಪಡೆಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಹಿರಿಯರಲ್ಲಿ ಅತ್ಯುತ್ಸಾಹ
ಹೆಚ್ಚಿನ ಕಡೆಯ ಮತಗಟ್ಟೆಗಳಲ್ಲಿ ಯುವಕರನ್ನು ನಾಚಿಸುವಂತೆ ಹಿರಿಯರೇ ಅತ್ಯುತ್ಸಾಹದಿಂದ ಬೆಳ್ಳಂಬೆಳಗ್ಗೆ ಮತದಾನಕ್ಕೆ ಆಗಮಿಸಿರುವುದು ಕಂಡು ಬಂತು. ವಯೋ ಸಹಜ ಅಸೌಖ್ಯವಿದ್ದರೂ, ಮತದಾನ ನನ್ನ ಆದ್ಯ ಕರ್ತವ್ಯ ಮತ್ತು ಹಕ್ಕು. ಅದನ್ನು ನಾನು ಈವರೆಗೆ ತಪ್ಪಿಸಿಲ್ಲ. ಈ ಬಾರಿಯೂ ತಪ್ಪಸಬಾರದು ಅನ್ನುವ ಕಾರಣಕ್ಕೆ ಮತ ಚಲಾಯಿಸಿದ್ದೇನೆ ಎನ್ನುವುದು ತೊಂಬಟ್ಟುವಿನ 89 ವರ್ಷ ಪ್ರಾಯದ ಮುತ್ತು ಅವರ ಮಾತು.
ಈಗಾಗಲೇ ನಾವು ಬಿಜೂರಿಗೆ ತೆರಳಿ ಮನ ಒಲಿಸುವ ಪ್ರಯತ್ನ ಮಾಡಿದ್ದೇವೆ. ಚುನಾವಣೆಯಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು, ಹೀಗಾಗಿ ಬಹಿಷ್ಕಾರ ಎಲ್ಲದಕ್ಕೂ ಮಾನದಂಡವಲ್ಲ. ಮೊದಲು ಮತದಾನದ ಮೂಲಕ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು.
-ಬಸಪ್ಪ ಪೂಜಾರ್, ಬೈಂದೂರು ತಹಶೀಲ್ದಾರ್
ಡಿಸಿ, ಎಸ್ಪಿ ಭೇಟಿ
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮತದಾನ ನಡೆದ ಏಕೈಕ ವಿಧಾನಸಭಾ ಕ್ಷೇತ್ರ ಬೈಂದೂರು ಆಗಿದ್ದು, ಬೆಳಗ್ಗಿನಿಂದಲೇ ಕ್ಷೇತ್ರ ವ್ಯಾಪ್ತಿಯ ಅನೇಕ ಮತಗಟ್ಟೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಹೆಫಿÕಬಾ ರಾಣಿ ಕೊರ್ಲಪಾಟಿ, ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಭೇಟಿ ನೀಡಿ, ಮತದಾನ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಸಹಾಯಕ ಚುನಾವಣಾಧಿಕಾರಿ ಕುಸುಮಾಧರ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಬೈಂದೂರಿನ ಮಸ್ಟರಿಂಗ್ ಕೇಂದ್ರದಲ್ಲಿ ಮತದಾನದ ಉಸ್ತುವಾರಿ ವಹಿಸಿದ್ದರು.