ಅಧ್ಯಯನಕ್ಕಾಗಿ ಶಾನಾಡಿಗೆ ಆಗಮಿಸಿದ ಕಾಂಬೋಡಿಯಾದ ರೈತರು
ಸಾವಯವ ಗೇರು ಕೃಷಿ
Team Udayavani, Sep 16, 2019, 5:32 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹಿರಿಯ ಪ್ರಗತಿ ಪರ ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್ ಅವರ ಪ್ರಯೋಗಾತ್ಮಕ ಯಶಸ್ವಿ ಸಾವಯವ ಗೇರು ಕೃಷಿ ಅಧ್ಯಯನಕ್ಕಾಗಿ ಕಾಂಬೋಡಿಯ ದೇಶದ ರೈತರು ಸೆ.13 ರಂದು ಭೇಟಿ ನೀಡಿದ್ದಾರೆ.
ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನ ಅಡ್ಯನಡ್ಕ ಇದರ ಮುಖ್ಯಸ್ಥ ಮತ್ತು ಸಾವಯವ ಕೃಷಿಯ ಹರಿಕಾರ ಡಾ| ವಾರಣಾಶಿ ಕೃಷ್ಣಮೂರ್ತಿಯವರು ಉದಯವಾಣಿಗೆ ಪ್ರತಿಕ್ರಿಯಿಸಿ, ಕಾಂಬೋಡಿಯ ದೇಶದ ರೈತರಿಗೆ ಸಾವಯವ ಗೇರು ಕೃಷಿ ಬಗ್ಗೆ ತಿಳಿ ಹೇಳುವ ನಿಟ್ಟಿನಿಂದ ಜಪಾನಿನ ಐ.ವಿ.ವೈ. (ಯಮಗಾಟದ ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ) ಮತ್ತು ಜರ್ಮನಿಯ ಜಿ.ಐ.ಝಡ್.(ಜರ್ಮನಿಯ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ) ಪ್ರಾಯೋಜಕತ್ವದಲ್ಲಿ ಸಾವಯವ ಕೃಷಿ ಏನು?, ಏಕೆ, ಹೇಗೆ ಎಂಬ ಬಗ್ಗೆ ವಿವರ ತಿಳಿಸುವ ನಿಟ್ಟಿನಿಂದ ಕೃಷಿ ತಜ್ಞರಿಂದ ಪೂರಕವಾದ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಹಿರಿಯ ಪ್ರಗತಿ ಪರ ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್ ಹಾಗೂ ನಾಲ್ವರು ಕಾಂಬೋಡಿಯದ ರೈತರು ಉಪಸ್ಥಿತರಿದ್ದರು.
ಚಿಂತನೆ ಅಗತ್ಯ
ಕಾಂಬೋಡಿಯ ದೇಶದಿಂದ ಬಂದಿರುವ ರೈತರು ನಮ್ಮ ತೋಟದಲ್ಲಿರುವ ಸಾವಯವ ಗೇರು ಕೃಷಿ, ಮಿಶ್ರ ಬೆಳೆ, ನೆಲ ಜಲ ಸಂರಕ್ಷಣೆ , ಪಶು ಪಾಲನೆ ಹಾಗೂ ಸಾವಯವ ಗೊಬ್ಬರಗಳನ್ನು ನೋಡಿ ಹಾಗೂ ಇಲ್ಲಿನ ಪರಿಸರವನ್ನು ಕಂಡು ತುಂಬಾ ಸಂತಸ ವ್ಯಕ್ತಪಡಿಸಿದರು. ಯಾವುದೋ ದೇಶದಿಂದ ಸಾವಯವ ಕೃಷಿ ಅಧ್ಯಯನಕ್ಕಾಗಿ ಭಾರತದೆಡೆಗೆ ಮುಖ ಮಾಡಿ ನಿಂತಿರುವಾಗ ಇಲ್ಲಿನ ಅತ್ಯಮೂಲ್ಯ ಕೃಷಿ ಸಂಸ್ಕೃತಿಗಳ ಉಳಿವಿನ ಬಗ್ಗೆ ನಮ್ಮ ಯುವ ಸಮುದಾಯಗಳು ಗಂಭೀರವಾದ ಚಿಂತನೆ ಮಾಡಬೇಕಾದ ಅಗತ್ಯವಿದೆ.
-ಶಾನಾಡಿ ರಾಮಚಂದ್ರ ಭಟ್,
ಹಿರಿಯ ಪ್ರಗತಿಪರ ಸಾವಯವ ಕೃಷಿಕ