‘ಕಾರ್ಟೂನುಗಳಿಂದ ಒತ್ತಡದ ಮನಸ್ಸಿಗೆ ತುಸು ನೆಮ್ಮದಿ’
Team Udayavani, Dec 11, 2018, 1:35 AM IST
ಕುಂದಾಪುರ: ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುವ ಮನಸ್ಥಿತಿಗೆ ಸದಾ ಬೆಂಬಲ ದೊರೆಯಬೇಕು. ಹಿಟ್ಲರ್ ಕೂಡಾ ಆತನ ನೀತಿ ನಿಯಮದ ವಿರುದ್ಧವಾಗಿ ಬಂದಿದ್ದ ಸಿನಿಮಾವನ್ನು ಮೂರು ಬಾರಿ ವೀಕ್ಷಿಸಿದ್ದನಂತೆ. ಆದರೆ ಅಂತಾರಾಷ್ಟ್ರೀಯ ಖ್ಯಾತಿಯ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು ಯಾವುದೇ ರಾಜಕೀಯ ಪಕ್ಷಗಳ ವಿರುದ್ಧ ಬರೆದರೂ ಅದರ ಭಕ್ತರು ಅವರನ್ನು ವಿರೋಧಿಸಿ ಟೀಕಿಸುವುದು ಅಂತಹವರ ಕುತ್ಸಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಉಡುಪಿಯ ಎ.ವಿ. ಬಾಳಿಗಾ ಆಸ್ಪತ್ರೆಯ ಮನಃಶಾಸ್ತ್ರ ವೈದ್ಯ ಡಾ| ಪಿ.ವಿ. ಭಂಡಾರಿ ಹೇಳಿದರು.
ರವಿವಾರ ಸಂಜೆ ಇಲ್ಲಿನ ಜೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಮೂರು ದಿನಗಳಿಂದ ನಡೆದ ಕುಂದಾಪುರ ಕಾರ್ಟೂನ್ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬಲ್ಲಂತಹ ಕಾರ್ಟೂನುಗಳು ಒತ್ತಡದ ಮನಸ್ಸಿಗೆ ತುಸು ನೆಮ್ಮದಿಯನ್ನು ನೀಡುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಸಮಾಜದ, ಅಧಿಕಾರಸ್ಥರ ಓರೆಕೋರೆಗಳನ್ನು ತಿದ್ದುವ ಗುಣ ಹೊಂದಿದೆ ಎಂದರು.
ಖ್ಯಾತ ವಕೀಲ ರವಿಕಿರಣ್ ಮುರ್ಡೇಶ್ವರ, ದಿನನಿತ್ಯದ ಘಟನೆಗಳಲ್ಲಿಯೇ ಹಾಸ್ಯ ಸೃಜಿಸುತ್ತದೆ. ಪುಟಗಟ್ಟಲೆ ಬರಹದಲ್ಲಿ ಹೇಳಲಾಗದ್ದನ್ನು ಒಂದು ಸಣ್ಣ ಕಾರ್ಟೂನ್ ಹೇಳುವ ಸಾಮರ್ಥ್ಯ ಹೊಂದಿದೆ ಎಂದರು. ಕಣ್ಣಿನ ವೈದ್ಯ ಡಾ| ಶ್ರೀಕಾಂತ್ ಶೆಟ್ಟಿ, ಬೆಂಗಳೂರಿನಲ್ಲಿ ನಡೆಯುವ ನಮ್ಮೂರ ಹಬ್ಬದ ರೂವಾರಿ, ಉದ್ಯಮಿ ನರಸಿಂಹ ಬೀಜಾಡಿ, ಕಾರ್ಯಕ್ರಮದ ಸಂಘಟಕ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.
ಡಯಲಾಗ್ ಬರೆಯಿರಿ, ಸ್ಕೂಲ್ಟೂನ್ ಸ್ಪರ್ಧೆ, ಅಂಬರೀಶ್ ಚಿತ್ರ ಬರೆಯಿರಿ, ಕುಂದಾಪುರ ಕನ್ನಡ ಸ್ಟಾಂಡಪ್ ಕಾಮಿಡಿ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚೇತನ್ ನೈಲಾಡಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ರೋಹಿಣಿ ಶರಣ್ ನಿರ್ವಹಿಸಿ, ಪತ್ರಕರ್ತ ರಾಮಕೃಷ್ಣ ಹೇರ್ಳೆ ವಂದಿಸಿದರು. ರವಿಕುಮಾರ್ ಗಂಗೊಳ್ಳಿ ಬಹುಮಾನಿತರ ಪಟ್ಟಿ ವಾಚಿಸಿದರು.