ಮೋದಿ ಅಭಿಮಾನ; ಪೆರ್ಡೂರಿನಲ್ಲಿ ಉಚಿತ ಪಾಯಸ, ಬಸ್ ಟಿಕೆಟ್ ಫ್ರೀ, ಉಚಿತ ಆಟೋ ಸೇವೆ
Team Udayavani, May 30, 2019, 4:43 PM IST
ಉಡುಪಿ/ಪೆರ್ಡೂರು/ಮಂಗಳೂರು: ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮೋದಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಉಚಿತ ಊಟೋಪಚಾರ, ಹಲಸಿನ ಹಣ್ಣಿನ ಪಾಯಸ ಕೊಡುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಉಡುಪಿ ಕಡಿಯಾಳಿ ಹೋಟೆಲ್ ಶ್ರೀನಿವಾಸದಲ್ಲಿ ಉಚಿತ ಹಾಲು ಪಾಯಸ:
ಉಡುಪಿ-ಮಣಿಪಾಲ್ ರಸ್ತೆಯ ಕಡಿಯಾಳಿ ಸಮೀಪ ಇರುವ ಹೋಟೆಲ್ ಶ್ರೀನಿವಾಸ್ ಮಾಲಕ ನರಸಿಂಹ ಕಿಣಿಯವರು ಮೋದಿ ಮೇಲಿನ ಅಭಿಮಾನದಿಂದ ಹೋಟೆಲ್ ಗ್ರಾಹಕರಿಗೆ ಇಂದು ಬೆಳಗ್ಗೆ 10ಗಂಟೆಯಿಂದ ಉಚಿತವಾಗಿ ಹಾಲು ಪಾಯಸದ ವ್ಯವಸ್ಥೆ ಮಾಡಿದ್ದಾರೆ.
ಪೆರ್ಡೂರಿನಲ್ಲಿ ಉಚಿತ ಹಲಸಿನ ಹಣ್ಣಿನ ಪಾಯಸ:
ಪೆರ್ಡೂರಿನ ಹೋಟೆಲ್ ಶ್ರೀಕೃಷ್ಣ ಭವನದಲ್ಲಿ ಇಂದು ಮಧ್ಯಾಹ್ನ 12ಗಂಟೆಯಿಂದ ಹೋಟೆಲ್ ಗ್ರಾಹಕರಿಗೆ ಮತ್ತು ಸಮಸ್ತ ನಾಗರಿಕರಿಗೆ ಉಚಿತ ಹಲಸಿನ ಹಣ್ಣಿನ ಪಾಯಸದ ವ್ಯವಸ್ಥೆ ಮಾಡಲಾಗಿದೆ. ಮೋದಿ ಅಭಿಮಾನಿಗಳು ಈ ಸಂತೋಷದಲ್ಲಿ ಪಾಲ್ಗೊಳ್ಳಬೇಕೆಂದು ಹೋಟೆಲ್ ಮಾಲ ಕೆ.ತುಕಾರಾಮ್ ನಾಯಕ್ ತಿಳಿಸಿದ್ದಾರೆ.
ಉಡುಪಿಯಿಂದ ಪೇತ್ರಿವರೆಗೆ ಉಚಿತ ಬಸ್ ಸೇವೆ:
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಮಾಂಡೋವಿ ಬಸ್ ನಲ್ಲಿ ಇಂದು ಪ್ರಯಾಣಿಸುವ ಉಡುಪಿ, ಬ್ರಹ್ಮಾವರ, ಪೇತ್ರಿ, ಎಳ್ಳಂಪಳ್ಳಿಗೆ ಹೋಗುವವರು ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದೆ. ಈ ಬಗ್ಗೆ ಬಸ್ ನ ಮುಂಭಾಗದ ಗ್ಲಾಸ್ ಮೇಲೆ ಉಚಿತ ಪ್ರಯಾಣ ಎಂದು ಹೇಳಿದೆ.
ಉಪ್ಪಿನಂಗಡಿಯಲ್ಲಿ 5 ಕಿ.ಮೀವರೆಗೆ ಉಚಿತ ಆಟೋ ಸೇವೆ:
ಉಪ್ಪಿನಂಗಡಿಯಲ್ಲಿ ರಿಕ್ಷಾ ಚಾಲಕ-ಮಾಲಕರು ಇಂದು ಮೋದಿ ಪ್ರಧಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ 5 ಕಿಲೋ ಮೀಟರ್ ವರೆಗೆ ಉಚಿತವಾಗಿ ಆಟೋ ಸೇವೆ ಕಲ್ಪಿಸಿದೆ.