ಬಾಲಕಾರ್ಮಿಕ ಪಿಡುಗು ನಿವಾರಣೆಗೆ ಸತತ ಪ್ರಯತ್ನ ಅಗತ್ಯ
Team Udayavani, Jun 13, 2019, 6:10 AM IST
ಉಡುಪಿ: ಬಾಲ ಕಾರ್ಮಿಕ ಪದ್ಧತಿ ಕೇವಲ ಕಾನೂನಿನ ಮೂಲಕ ನಿರ್ಮೂಲನೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಬಾಲಕಾರ್ಮಿಕ ಪಿಡುಗು ನಿವಾರಣೆಗೆ ಸತತವಾಗಿ ಪ್ರಯತ್ನಿಸಿದಾಗ ಮಾತ್ರ ಈ ಪಿಡುಗಿನಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ವಕೀಲರ ಸಂಘ, ಸಣ್ಣ ಕೈಗಾರಿಕಾ ತರಬೇತಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ಮಣಿಪಾಲ ರಜತ್ರಾದಿಯಲ್ಲಿ ಆಯೋಜಿಸಿದ್ದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಪಿಡುಗಿನ ನಿರ್ಮೂಲನೆ ಅಗತ್ಯ
ಕುಟುಂಬದಲ್ಲಿನ ಆರ್ಥಿಕ ಸಮಸ್ಯೆ,ಅನಿವಾರ್ಯ ಸಂದರ್ಭ, ಶಿಕ್ಷಣದ ಕೊರತೆ ಸೇರಿದಂತೆ ಹಲವು ಸಂಗತಿಗಳು ಬಾಲ ಕಾರ್ಮಿಕರ ಪದ್ಧತಿ ಕಾರಣವಾಗಿದೆ. ಬಾಲ ಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗಾಗಿದ್ದು, ಅದನ್ನು ಎಲ್ಲೂ ತಲೆಯೆತ್ತದಂತೆ ಮಾಡಬೇಕಾದ ಕರ್ತವ್ಯ ಎಲ್ಲರ ಮೇಲಿದೆ ಎಂದರು.
1098ಗೆ ಕರೆ ಮಾಡಿ
ಸಮಾಜದಲ್ಲಿ ಈ ಪಿಡುಗು ಬಗ್ಗೆ ಅರಿವು ಮೂಡಿಸುವುದಲ್ಲದೇ, ಬಾಲ ಕಾರ್ಮಿಕರು ಕಂಡು ಬಂದಲ್ಲಿ ಕೂಡಲೇ 1098ಗೆ ಕರೆ ಮಾಡಿ ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಬಾಲ ಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದ್ದಾರೆ.
ಬಾಲ ಕಾರ್ಮಿಕ ಪದ್ಧತಿಯಿಂದ ಹೊರಬಂದು, ವಿದ್ಯಾಭ್ಯಾಸದ ಮುಂದುವರೆಸಿ, ದ್ವಿತೀಯ ಪಿಯುನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ರಾಜುವನ್ನು ಸಮ್ಮಾನಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾ ಸರಕಾರಿ ವಕೀಲ ಮಹಮ್ಮದ್ ಸುಹಾನ್, ಬಾಲ ಕಾರ್ಮಿಕಮತ್ತು ಕಿಶೋರ ಕಾರ್ಮಿಕ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಕಾರ್ಮಿಕ ಅಧಿಕಾರಿ ಎಂ. ಬಾಲಕೃಷ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಬಿ. ಫುರ್ಟಾಡೋ, ವಕೀಲರ ಸಂಘದ ಅಧ್ಯಕ್ಷ ದಿವಾಕರ್ ಎಂ. ಶೆಟ್ಟಿ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಜಗದೀಶ ಉಪಸ್ಥಿತರಿದ್ದರು.
ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಜೀವನ್ ಕುಮಾರ್ ವಂದಿಸಿದರು.
ಮಕ್ಕಳಿಗೆ ಅವರ ಬಾಲ್ಯ ಕಳೆಯಲು ಅವಕಾಶ ನೀಡಿ
ಬಾಲ ಕಾರ್ಮಿಕ ಪದ್ಧತಿ ಇದೆ ಎನ್ನುವುದು ಸಮಾಜದ ಪ್ರತಿಯೊಬ್ಬರೂ ತಲೆ ತಗ್ಗಿಸುವ ವಿಚಾರ. ನಾಗರಿಕ ಸಮಾಜದಲ್ಲಿ ಅಮಾನವೀಯ ಸಂಗತಿ. ಮಕ್ಕಳಿಗೆ ಅವರ ಬಾಲ್ಯ ಕಳೆಯಲು ಅವಕಾಶ ನೀಡಬೇಕು, ಮನೆ ಕೆಲಸಕ್ಕೆ ಅಥವಾ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದು ಶಿûಾರ್ಹ ಅಪರಾಧವಾಗಿದೆ. ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಸಮಾಜದ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಎಂದು ಹೇಳಿದರು.