“ಚೈಲ್ಡ್ಲೈನ್ ಸೇ ದೋಸ್ತಿ ಸಪ್ತಾಹ’ ಇಂದು ಉದ್ಘಾಟನೆ
Team Udayavani, Nov 14, 2019, 5:50 AM IST
ಉಡುಪಿ: “ಚೈಲ್ಡ್ಲೈನ್ ಸೇ ದೋಸ್ತಿ ಸಪ್ತಾಹ’ ಕಾರ್ಯಕ್ರಮವನ್ನು ನ. 14ರ ಬೆಳಗ್ಗೆ 10ಕ್ಕೆ ಒಳಕಾಡು ಪ್ರೌಢಶಾಲಾ ಸಭಾಭವನದಲ್ಲಿ ಉದ್ಘಾಟಿಸಲಾಗುವುದು. ನ. 20ರ ಸಂಜೆ 6.30ಕ್ಕೆ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಕ್ಕಳ ಸಹಾಯವಾಣಿ ವತಿಯಿಂದ ಹೊರತಂದ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದ ಅವರು, ಉದ್ಘಾಟನೆ ಮತ್ತು ಸಮಾರೋಪ ಇವೆರಡೂ ಸಮಾರಂಭಗಳಲ್ಲಿ ಜಿ.ಪಂ. ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಎಸ್ಪಿ, ಜಿಲ್ಲಾ ನ್ಯಾಯಾಧೀಶರು ಮತ್ತಿತರ ಅಧಿಕಾರಿಗಳು ಭಾಗವಹಿಸುವರು ಎಂದರು. ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಚೈಲ್ಡ್ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಸಂಚಾಲಕಿ ಕಸ್ತೂರಿ ಉಪಸ್ಥಿತರಿದ್ದರು.
ನ. 14ರಂದು ಮಕ್ಕಳ ಸಹಾಯವಾಣಿ ಉಪಯೋಗ, ಮಹತ್ವದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು. ಸಹಿ ಸಂಗ್ರಹ ಅಭಿಯಾನವೂ ನಡೆಯಲಿದೆ.
ನ. 15ರಂದು ಸಮೂಹ ಜಾಗೃತಿ ಕಾರ್ಯಕ್ರಮದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳು, ಬಾಲಕಾರ್ಮಿಕತೆ ಬಗ್ಗೆ ಅರಿವು ಮೂಡಿಸಲು ಭಿತ್ತಿ ಚಿತ್ರಗಳನ್ನು ಅಂಟಿಸಲಾಗುವುದು. ನ. 16ರಂದು ಮಾದಕದ್ರವ್ಯ ವ್ಯಸನ, ಅಂತರ್ಜಾಲ ಸುರಕ್ಷೆ, ಬಾಲಕಾರ್ಮಿಕತನ, ಮಕ್ಕಳ ಭಿಕ್ಷಾಟನೆ ಕುರಿತು ಜಾಗೃತಿ ಮೂಡಿಸಲು ಜಾಥಾ ನಡೆಯಲಿದೆ.
ನ. 17ರಂದು ಬಾಲ್ಯವಿವಾಹದ ಕುರಿತು ಜಾಗೃತಿ ಮೂಡಿಸಲು ಭಿತ್ತಿ ಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುವುದು. ಶಾಲಾ ಮಟ್ಟದಲ್ಲಿ ನಡೆಯುವ ದೈಹಿಕ ಶಿಕ್ಷೆ ತಡೆಗಟ್ಟಲು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ನ. 18ರಂದು ವಿಶೇಷ ಅಗತ್ಯ ವಿರುವ ಮಕ್ಕಳೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಸಲಾಗುವುದು.
ನ. 19ರಂದು ಫೋಟೋ ಫ್ರೆàಮ್ನೊಂದಿಗೆ ಫೋಟೋ ಕ್ಲಿಕ್ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹನುಮಂತನಗರ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾನೂನು, ರಸ್ತೆ ಸುರಕ್ಷೆ, ವೈಯಕ್ತಿಕ ಸ್ವತ್ಛತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ನ. 20ರಂದು ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನದ 30ನೆಯ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಸ್ವತ್ಛ ಭಾರತ್ ಆಂದೋಲನದಲ್ಲಿಯೂ ಸಹಭಾಗಿಯಾಗಲಿದ್ದು ಇದಕ್ಕೆ ಚಾಲನೆ ನೀಡಲಾಗುವುದು. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.