ಕರಾವಳಿ: ಭಾರೀ ಮಳೆ; ಓರ್ವ ಸಾವು
Team Udayavani, May 29, 2018, 12:48 PM IST
ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ರವಿವಾರ ರಾತ್ರಿ ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗಿ ಅಪಾರ ಹಾನಿ ಸಂಭವಿಸಿದೆ. ಸೋಮ ವಾರ ರಾತ್ರಿಯೂ ಕೆಲವೆಡೆ ಮಳೆಯಾಗಿದೆ.
ರವಿವಾರ ರಾತ್ರಿ ಭಾರೀ ಸಿಡಿಲಿನಿಂದಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರು ಶ್ರೀನಿವಾಸ ಅವರ ಮನೆ ಸಂಪೂರ್ಣ ಧ್ವಂಸಗೊಂಡಿದ್ದು, ಸುಮಾರು 5 ಲಕ್ಷ ರೂ. ನಷ್ಟ ಉಂಟಾಗಿದೆ.
ಮಂಗಳೂರಿನ ಬಜಾಲ್ ಪಡೀಲ್ನಲ್ಲಿ ಸಿಡಿಲಿನಿಂದಾಗಿ ಎರಡು ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಮಳೆಯಿಂದಾಗಿ ಕಡಬದ ಹೊಸಮಠ ಸೇತುವೆ ಬಳಿಯ ರಸ್ತೆ ಕುಸಿತಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ವಾಹನ ಸಂಚಾರ ಪುನರಾರಂಭಿಸಲಾಯಿತು. ಪುತ್ತೂರು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರೋಳೀಕೆರೆಯಲ್ಲಿ ಪ್ರವೀಣ್ ಡಿ’ಸೋಜಾ ಅವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಹೊಸಂಗಡಿಯಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಸಿಡಿಲಿಗೆ ಕಡಿರುದ್ಯಾವರ ಗ್ರಾಮದಲ್ಲಿ ಎರಡು ಜಾನುವಾರುಗಳು ಬಲಿಯಾಗಿವೆ.
ಪುತ್ತೂರು ಬೆಟ್ಟಂಪಾಡಿಯ ಗೋಳಿಪದವಿನಲ್ಲಿ ಸುಂದರ, ಸುಂದರ ಎಂ. ಮತ್ತು ಕುಸುಮಾ ಅವರ ಮನೆಗೆ ಹಾನಿ ಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ವರದಿ ತಿಳಿಸಿದೆ.
ವಿದ್ಯುತ್ ಕಂಬಗಳು ಧರೆಗೆ
ಉಡುಪಿ ಜಿಲ್ಲೆಯಲ್ಲಿ ನೂರಾರು ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ. ಕಾರ್ಕಳ ತಾಲೂಕಿನಲ್ಲಿ 35 ಮತ್ತು ಉಡುಪಿ ತಾಲೂಕಿನಲ್ಲಿ 37 ಮನೆ ಹಾನಿ ಪ್ರಕರಣಗಳು ವರದಿ ಯಾಗಿವೆ. ಉಡುಪಿ ಮೂಡನಿಡಂಬೂರಿನಲ್ಲಿ ವನಿತಾ ಅವರ ಕಾರಿನ ಮೇಲೆ ಮರ ಬಿದ್ದು 3 ಲ.ರೂ., ಕೊಡವೂರಿನ ಗಿರಿಜಾ ಪೂಜಾರ್ತಿಯವರ ಮನೆ ಮೇಲೆ ಮರ ಬಿದ್ದು 1.5 ಲ.ರೂ., ದೊಡ್ಡಣಗುಡ್ಡೆಯ ಬೇಬಿ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು 1.2 ಲ.ರೂ. ನಷ್ಟವಾಗಿದೆ. ನೀರು ಮನೆಗೆ ನುಗ್ಗಿದ ಪ್ರಕರಣಗಳಿವೆ.
**
ಬಿದಿರ ಹಿಂಡು ಬಿದ್ದು ಮನೆಗೆ ಹಾನಿ
ಶಿರ್ವ: ಬಲ್ಲಾಡಿಕರೆ ಶ್ಯಾನುಭೋಗರಬೆಟ್ಟು ನಿವಾಸಿ ವೆಂಕಟರಮಣ ಭಟ್ ಅವರ ಮನೆಗೆ ರವಿವಾರ ರಾತ್ರಿ ಬಿದಿರಿನ ಹಿಂಡು ಬಿದ್ದು ಹಾನಿ ಸಂಭವಿಸಿದೆ. ಹೆಂಚು ಹಾಗೂ ತಗಡು ಶೀಟುಗಳು ಪುಡಿಯಾಗಿವೆ. ಗೋಡೆ ಭಾಗಶಃ ಕುಸಿದು ಸುಮಾರು ಒಂದು ಲಕ್ಷ ರೂ. ಹಾನಿ ಸಂಭವಿಸಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕಾಪು ಕಂದಾಯ ನಿರೀಕ್ಷಕ ರವಿಶಂಕರ್ ಮತ್ತು ಶಿರ್ವ ಗ್ರಾಮ ಕರಣಿಕ ವಿಜಯ್ ಸ್ಥಳಕ್ಕೆ ತೆರಳಿ ಹಾನಿಯ ಪರಿಶೀಲನೆ ನಡೆಸಿದ್ದಾರೆ.
ಕಳತ್ತೂರು ಮನೆಗೆ ಹಾನಿ: ಕಳತ್ತೂರು ಗ್ರಾಮದ ಚಂದ್ರನಗರ ನಿವಾಸಿ ಗೀತಾ ಸುಂದರ ಶೆಟ್ಟಿ ಅವರ ಮನೆಗೆ ರಾತ್ರಿ ಸುರಿದ ಗಾಳಿ-ಮಳೆಗೆ ಮಾವಿನ ಮರ ಮತ್ತು ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಸುಮಾರು 75,000 ರೂ. ನಷ್ಟ ಸಂಭವಿಸಿದೆ. ಕಾಪು ಕಂದಾಯ ನಿರೀಕ್ಷಕ ರವಿಶಂಕರ್ ಮತ್ತು ಶಿರ್ವಗ್ರಾಮ ಕರಣಿಕ ವಿಜಯ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
**
ಬೆಳ್ಮಣ್ ಪರಿಸರದಲ್ಲಿ ಭಾರೀ ಹಾನಿ
ಬೆಳ್ಮಣ್: ಬೆಳ್ಮಣ್ ಪರಿಸರದಲ್ಲಿ ರವಿವಾರ ರಾತ್ರಿಯ ಗುಡುಗು ಸಹಿತ ಭಾರೀ ಗಾಳಿ ಮಳೆಗೆ ಅಪಾರ ನಷ್ಟ ಸಂಭವಿಸಿದೆ.
ನಂದಳಿಕೆ ಗೋಳಿಕಟ್ಟೆ ಆರ್ಯಾ ಡುವಿನಲ್ಲಿ ವಿದ್ಯುತ್ ತಂತಿ ಮೇಲೆಮರ ಬಿದ್ದ ಪರಿಣಾಮ ಸುಮಾರು 4 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇನ್ನ ಗ್ರಾ.ಪಂ. ವ್ಯಾಪ್ತಿ ಯಲ್ಲೂ ಮರ ಬಿದ್ದು 5 ವಿದ್ಯುತ್ ಕಂಬಗಳು ತುಂಡಾಗಿವೆೆ. ಮುಂಡ್ಕೂರು ಗ್ರಾ.ಪಂ.ನ ಮುಲ್ಲಡ್ಕ ನಿವಾಸಿ ಶೇಖರ ಗೌಡರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹೆಂಚುಗಳು ಹಾರಿ ಹೋಗಿವೆ. ವಿದ್ಯುತ್ ವಯರಿಂಗ್ ಸಹಿತ ವಿದ್ಯುತ್ ಮೀಟರ್ ಸುಟ್ಟು ಹೋಗಿದೆ. 60,000 ರೂ.ಗೂ ಅ ಧಿಕ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಸುಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೋಳ ಗ್ರಾ.ಪಂ.ನ ಬೋಪಾಡಿಯಲ್ಲಿ ಸಿಡಿಲಿನಿಂದ ಸೋಮಾವತಿ ಅವರ ಮನೆಯ ವಿದ್ಯುತ್ ವಯರಿಂಗ್, ಮೀಟರ್, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿ ಸುಮಾರು 40,000 ರೂ. ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಸುದರ್ಶನ್ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ