ಒಂದೇ ವಾರದಲ್ಲಿ ಕಾಂಕ್ರೀಟ್ ರಸ್ತೆ ಬಿರುಕು
Team Udayavani, Jun 2, 2018, 2:35 AM IST
ವಿಶೇಷ ವರದಿ – ಬೈಂದೂರು: ಕಾಮಗಾರಿ ನಡೆದು ಒಂದೇ ವಾರದಲ್ಲಿ ಶಿರೂರು ಗ್ರಾಮದ ದೊಂಬೆ -ಕರಾವಳಿ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು ಕಂಡು ಬಂದಿದೆ. 8ಕಿ.ಮೀ ಉದ್ದದ ರಸ್ತೆ ಕೊನೆ ಭಾಗದ ಕಾಮಗಾರಿ ಮುಗಿಯುವ ಮುನ್ನ ಇನ್ನೊಂದು ತುದಿಯಲ್ಲಿ ಬಿರುಕು ಬಿಟ್ಟಿರುವುದು ಕಳಪೆ ಕಾಮಗಾರಿ ನಡೆಸಿದ ಶಂಕೆ ಮೂಡಿಸಿದೆ. ಕಳಪೆ ಕಾಮಗಾರಿ ನಡೆದಿರುವ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.
ಕಳಪೆ ಕಾಮಗಾರಿ, ನಿರ್ವಹಣೆ ಕೊರತೆ
ರಸ್ತೆ ದುರಸ್ತಿಗೆ ಕರಾವಳಿ ಹಾಗೂ ದೊಂಬೆ ಭಾಗದ ಜನತೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಉದಯವಾಣಿ ಇಲ್ಲಿನ ಜನರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿತ್ತು. ವರದಿಗೆ ಸ್ಪಂದಿಸಿದ ಅಂದಿನ ಶಾಸಕರು ವಿಶ್ವ ಬ್ಯಾಂಕ್ ನೆರವು ನೀಡುವ ಸುನಾಮಿ ನಿಧಿಯಲ್ಲಿ 2.36 ಕೋ.ರೂ. ಅನುದಾನದ ಕಾಂಕ್ರೀಟ್ ರಸ್ತೆ ಮಂಜೂರು ಮಾಡಿದ್ದರು. ಕಾಮಗಾರಿ ಘೋಷಣೆಯಾದ ಬಳಿಕ ಟೆಂಡರ್ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿತ್ತು.ಬಳಿಕ ಮರಳಿನ ಸಮಸ್ಯೆಯ ನೆಪದಿಂದ ಸಾಕಷ್ಟು ಸಮಯದ ಬಳಿಕ ಕಾಮಗಾರಿ ಪ್ರಾರಂಭಗೊಂಡಿತ್ತು. ಆದರೆ ಮೂಲ ಟೆಂಡರ್ ಪಡೆದವರು ಸಬ್ ಟೆಂಡರ್ ನೀಡಿರುವುದು ಕಾಮಗಾರಿಯ ವಿಳಂಬಕ್ಕೆ ಕಾರಣವಾಗಿದೆ. ಕಾಮಗಾರಿ ಶೀಘ್ರ ಮುಗಿಸುವ ತರಾತುರಿಯಲ್ಲಿ ನಿರ್ವಹಣೆ ಕೊರತೆಯಿಂದ ಕಾಂಕ್ರಿಟ್ ರಸ್ತೆ ಕೇವಲ ಒಂದು ವಾರದಲ್ಲೆ ಕೆಲವು ಕಡೆ ಬಿರುಕು ಬಿಟ್ಟಿದೆ.
ಕೃಷಿ ಭೂಮಿಗೆ ಹಾನಿ
ಕರಾವಳಿ ಭಾಗದ ಪ್ರಮುಖ ಜೀವನಾಧಾರ ಕೃಷಿ ಕಾಂಕ್ರಿಟ್ ರಸ್ತೆ ನಿರ್ಮಾಣವಾಗುವ ಸಂದರ್ಭದಲ್ಲಿ ಕೃಷಿ ಭೂಮಿಯ ಬೇಲಿಯನ್ನು ಚರಂಡಿ ನಿರ್ಮಾಣಕ್ಕಾಗಿ ಸಂಪೂರ್ಣ ತೆರವುಗೊಳಿಸಲಾಯಿತು.ಆದರೆ ಮಳೆಗಾಲ ಪ್ರಾರಂಭವಾಗಿರುವುದರಿಂದ ಗುತ್ತಿಗೆದಾರರು ಚರಂಡಿ ನಿರ್ಮಿಸಿಲ್ಲ. ಬೇಲಿಯ ವ್ಯವಸ್ಥೆಯನ್ನೂ ಮಾಡಿಲ್ಲ. ಇದರಿಂದ ಕೃಷಿ ಭೂಮಿ ಹಾನಿ ಭೀತಿ ಇದೆ. ಮಾತ್ರವಲ್ಲದೆ ಕಾಮಗಾರಿ ನಡೆಯುವ ಸ್ಥಳಕ್ಕೆ ವಾರಕ್ಕೊಮ್ಮೆಯಾದರೂ ಗುತ್ತಿಗೆದಾರರು ಬರುತ್ತಿಲ್ಲ. ಇದರಿಂದ ಸಮಸ್ಯೆ ಹೇಳಿಕೊಳ್ಳಲೂ ಆಗುತ್ತಿಲ್ಲ. ಮೊಬೈಲ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ದೂರಿದ್ದಾರೆ.
ಸೂಕ್ತ ಕ್ರಮ
ದೊಂಬೆ -ಕರಾವಳಿ ರಸ್ತೆಯ ಗುಣಮಟ್ಟದ ಬಗ್ಗೆ ಅನುಮಾನವಿಲ್ಲ. ಕಳಪೆ ಕಾಮಗಾರಿ ನಡೆಸಿದರೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಬಿರುಕು ಬಂದಿರುವ ಕಡೆ ದುರಸ್ತಿ ಮಾಡಲಾಗುತ್ತದೆ.
– ಮಂಜುನಾಥ, ಎಂಜಿನಿಯರ್ ಪಿಡಬ್ಲ್ಯುಡಿ , ಉಡುಪಿ
ನಂಬಿಕೆ ಇಲ್ಲ
ಕಾಮಗಾರಿಗೆ ಸರಕಾರ ಅನುದಾನ ನೀಡಿದರೂ ಸಹ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ನಿರ್ವಹಣೆ ಕೊರತೆಯಿಂದ ಮಹತ್ವಾಕಾಂಕ್ಷೆಯ ಯೋಜನೆಗಳ ಮೇಲೆ ಜನರಿಗಿರುವ ನಂಬಿಕೆ ಹೊರಟು ಹೋಗುತ್ತಿದೆ.
– ತಿಮ್ಮಪ್ಪ ಬಿಲ್ಲವ, ಸ್ಥಳೀಯರು