ವ್ಯಾಸರಾಜ ಮಠಾಧೀಶರಿಗೆ ಅಭಿನಂದನೆ
Team Udayavani, Jul 18, 2017, 3:35 AM IST
ಉಡುಪಿ: ಶ್ರೀ ವ್ಯಾಸರಾಜ ಮಠದ ನೂತನ ಪೀಠಾಧೀಶರಾದ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಅಭಿನಂದಿಸಿದರು.
70 ವರ್ಷಗಳ ಹಿಂದಿನ ತಿರುವು
1957ರಲ್ಲಿ ತಾನು ಬಾಲಕನಾಗಿದ್ದಾಗ ಬಾರಕೂರು ಭಂಡಾರಕೇರಿ ಮಠಕ್ಕೆ ಶಾಸ್ತ್ರ, ಸಂಸ್ಕೃತ ಪರೀಕ್ಷೆಗೆ ಬಂದಿದ್ದೆ.
ಆಗಲೇ ಶ್ರೀವಿದ್ಯಾಮಾನ್ಯತೀರ್ಥರು, ಶ್ರೀವಿಶ್ವೇಶತೀರ್ಥರು ವಿದ್ಯಾಭ್ಯಾಸಕ್ಕೆ ಕರೆದಿದ್ದರು. ಒಂದು ವರ್ಷದ ಬಳಿಕ ಮೈಸೂರಿನಲ್ಲಿ ತಂದೆತಾಯಿ ಜತೆಗಿದ್ದಾಗ ಮನೆಗೆ ಪೇಜಾವರ ಶ್ರೀಗಳು ಬಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಸೇರಲು ಹೇಳಿದರು. ಅದು ತನ್ನ ಜೀವನದ ದೊಡ್ಡ ತಿರುವು. ಆಗ ವಿದ್ಯಾಭ್ಯಾಸಕ್ಕೆ ಸೇರಿದ್ದರಿಂದಲೇ ಮಾನ ಸಮ್ಮಾನಗಳು ದೊರಕುತ್ತಿವೆ. ಈಗ ಅವರದೇ ಐದನೆಯ ಪರ್ಯಾಯದಲ್ಲಿ ವ್ಯಾಸರಾಜ ಮಠಾಧೀಶರಾಗಿ ಬರುವ ಅವಕಾಶ ದೊರಕಿದ್ದು ಸುಯೋಗ ಎಂದು ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರು ತಿಳಿಸಿದರು.
ಮಿಥಿಲೆಯಲ್ಲಿ ಅಂದು ದೊಡ್ಡ ಸುದ್ದಿ…
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪ್ರಾಧ್ಯಾಪಕರಾಗಿದ್ದಾಗ ಮಿಥಿಲೆಯ ಸಂಸ್ಕೃತ ಶಾಸ್ತ್ರ ಪರೀಕ್ಷೆಗೆ ಪ್ರಹ್ಲಾದಾಚಾರ್ಯರ (ಈಗ ವಿದ್ಯಾಶ್ರೀಶತೀರ್ಥರು) ಜತೆ ನಾನು ಹೋಗಿದ್ದೆ. ಹೋಗುವಾಗ ಆಚಾರಕ್ಕೆ ಅನುಗುಣವಾಗಿ ಅಡುಗೆ ಮಾಡಲು ಪಾತ್ರೆಗಳನ್ನು ಕೊಂಡೊಯ್ದಿದ್ದೆವು. ಅದು ವಿಮಾನ ನಿಲ್ದಾಣದಲ್ಲಿ ಕೈತಪ್ಪಿ ಹೋಯಿತು. ಮಿಥಿಲೆಯಲ್ಲಿದ್ದ ವ್ಯವಸ್ಥೆ ಸರಿ ಇರಲಿಲ್ಲ. ಮತ್ತೆ ಮಾರುಕಟ್ಟೆಗೆ ಹೋಗಿ ಹೊಸ ಪಾತ್ರೆಗಳನ್ನು ಖರೀದಿಸಿ ಬಂದು ಮತ್ತೆ ಸ್ವತಃ ಅಡುಗೆ ಮಾಡಿ ನೈವೇದ್ಯ ಮಾಡಿ ಊಟ ಮಾಡಿದೆವು. ಪಂಚತಾರಾ ಹೊಟೇಲಿನಲ್ಲಿದ್ದರೂ ಇಂತಹ ಆಚಾರನಿಷ್ಠರಿದ್ದಾರೆಂದು ಪತ್ರಿಕೆಗಳು ವರದಿ ಮಾಡಿದ್ದವು ಎಂಬುದನ್ನು ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಎ.ಹರಿದಾಸ ಭಟ್ ಹೇಳಿದರು.
ತಮ್ಮ ಎರಡನೆಯ ಪರ್ಯಾಯದಲ್ಲಿ ಗುರು ಶ್ರೀ ವಿದ್ಯಾಮಾನ್ಯತೀರ್ಥರಿಗೆ ಶ್ರೀಕೃಷ್ಣಪೂಜೆ ಯೋಗ ಲಭಿಸಿದರೆ ಈಗ ನಮ್ಮಲ್ಲಿ ಓದಿದ ಪ್ರಹ್ಲಾದಾಚಾರ್ಯರಿಗೆ ವ್ಯಾಸರಾಜ ಮಠಾಧಿಪತಿತ್ವ ದೊರಕಿದೆ ಎಂದು ಪೇಜಾವರ ಶ್ರೀಗಳು ಹರ್ಷ ವ್ಯಕ್ತಪಡಿಸಿದರು. ಶ್ರೀ ವಿಶ್ವಪ್ರಸನ್ನತೀರ್ಥರು ಆಶೀರ್ವಚನ ನೀಡಿದರು. ಬ್ರಹ್ಮಣ್ಯತೀರ್ಥಾಚಾರ್ಯ ಶುಭಕೋರಿದರು. ಗುರುಮೂರ್ತಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಪೇಜಾವರ ಶ್ರೀಗಳ ಪೂರ್ಣಪ್ರಜ್ಞ ವಿದ್ಯಾಪೀಠದ ಮೊದಲ ತಂಡದ ಸುಧಾ ವಿದ್ಯಾರ್ಥಿಯಾದ ಪ್ರಹ್ಲಾದಾಚಾರ್ಯರು, ಬಳಿಕ ಅಲ್ಲಿಯೇ ಪ್ರಾಧ್ಯಾಪಕರಾಗಿ, ತಿರುಪತಿ ಸಂಸ್ಕೃತ ವಿ.ವಿ. ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಈಗ ಪೇಜಾವರ ಶ್ರೀಗಳ ಪಂಚಮ ಪರ್ಯಾಯದಲ್ಲಿ ಮೊದಲ ಸಪೊ¤àತ್ಸವವನ್ನು ಪ್ರಹ್ಲಾದಾ ಚಾರ್ಯರು ನೀಡಿದರು. ಈಗ ವ್ಯಾಸರಾಜ ಮಠಾಧೀಶರಾಗಿ ಆಗಮಿಸಿದರು.