ಕಾಂಗ್ರೆಸ್ ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ: ಪ್ರಮೋದ್ ಮಧ್ವರಾಜ್
Team Udayavani, May 22, 2022, 12:19 AM IST
ಉಡುಪಿ: ಪೂರ್ವ ನಿರ್ಧಾರ ಮಾಡದೆ ಬಿಜೆಪಿಯನ್ನು ಸೇರಿಲ್ಲ. ಯೋಚನೆ ಮಾಡಿ ತೆಗೆದುಕೊಂಡ ನಿರ್ಧಾರವಾಗಿದ್ದು, ಪಶ್ಚಾತ್ತಾಪ ಪಡುವ ದಿನ ಬರುವುದಿಲ್ಲ. ಭವಿಷ್ಯದಲ್ಲಿ ತನ್ನ ನೆಲೆ ಕಳೆದುಕೊಂಡು ಕಾಂಗ್ರೆಸ್ ಪಶ್ಚಾತ್ತಾಪ ಪಡಬೇಕಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇದು ಅರಿವಾಗಲಿದೆ. 2020-23ರ ಚುನಾವಣೆಯಲ್ಲಿ ಅಧಿಕಾರ ಸಿಗುತ್ತದೆ ಎಂಬ ಅಹಂನಲ್ಲಿ ಮೆರೆಯುತ್ತಿದ್ದು, ಅವರು ಪಶ್ಚಾತ್ತಾಪ ಪಡಬೇಕಾಗು ತ್ತದೆ ಎಂದರು.
ಬಿಜೆಪಿಯೊಳಗಿನ ವ್ಯವಸ್ಥೆಯಂತೆ ಸ್ಥಳೀಯ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನಂತರ ಆಸಕ್ತ ಕಾರ್ಯಕರ್ತರು, ನಾಯಕರು ಬಿಜೆಪಿಗೆ ಸೇರಬಹುದು. ಈಗಾಗಲೇ ನಾನು ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರ ಜತೆಗೆ ಚರ್ಚಿಸಿದ್ದೇನೆ ಎಂದರು.
ಪ್ರಮೋದ್ಗೆ ಈಗ ಕೆಳಗೆ ಕೂರುವ ಪರಿಸ್ಥಿತಿ ಬಂದಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನ ನನ್ನದಲ್ಲ. ಬಿಜೆಪಿ ಶಿಸ್ತಿಗೆ ಒಳಪಟ್ಟು ಕಾರ್ಯಕರ್ತನಾಗಿ ಸೇರಿದ್ದೇನೆ. ಕೆಳಗೆ ಕುಳಿತುಕೊಳ್ಳಲು ನನಗೆ ಮುಜುಗರ, ಬೇಸರವಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಸಂಪ್ರದಾಯದಲ್ಲಿ ವ್ಯತ್ಯಾಸಗಳಿವೆ, ಕಾಂಗ್ರೆಸ್ ವೇದಿಕೆಯಲ್ಲಿ ಜನಜಂಗುಳಿ ಇರುತ್ತದೆ. ಎಲ್ಲರೂ ವೇದಿಕೆಗೆ ಹತ್ತುವವರೇ ಇರುವುದು ಎಂದರು.