ಅಪಘಾತ: ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ
Team Udayavani, Oct 4, 2022, 12:43 AM IST
ಉಡುಪಿ: ಅಪಘಾತಪಡಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
2017ರ ಅ. 18ರಂದು ಟೆಂಪೋ ವಾಹನ ಚಾಲಕ ಉಮೇಶ್ ಪೂಜಾರಿ (30) ಅವರು ಹೇರೂರು ಗ್ರಾಮದ ಮಂಜುನಾಥ ಪೆಟ್ರೋಲ್ ಬಂಕ್ನಿಂದ ಸ್ವಲ್ಪ ಮುಂದೆ ರಾ.ಹೆ. 66ರಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಟೆಂಪೋ ಚಲಾಯಿಸಿಕೊಂಡು ಬಂದು ಬಿ. ರಮಾನಂದ ರಾವ್ ಅವರು ಹೋಗುತ್ತಿದ್ದ ಸೈಕಲ್ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದರು.
ಪರಿಣಾಮ ರಮಾನಂದ ರಸ್ತೆಗೆ ಬಿದ್ದು, ತೀವ್ರ ತರಹದ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದರು. ಈ ಬಗ್ಗೆ ಉಡುಪಿ-ಬ್ರಹ್ಮಾವರ ಠಾಣೆಯ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ಉಮೇಶ್ ಪೂಜಾರಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಆರೋಪಿಗೆ 2 ವರ್ಷ 6 ತಿಂಗಳುಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.