ಕೋವಿಡ್ ಲಸಿಕೆ ಅಭಿಯಾನ: ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
Team Udayavani, Nov 23, 2021, 2:45 PM IST
ಶಿರ್ವ: ಉಡುಪಿ ಜಿಲ್ಲೆಯಲ್ಲಿ ಶೇ.100 ಕೋವಿಡ್ಲಸಿಕೆ ಅಭಿಯಾನ ನಡೆಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಕೋವಿಡ್ ಲಸಿಕೆ ಗುರಿ ಸಾಧನೆಯ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.
ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ರಾವ್ ಮಾಹಿತಿ ನೀಡಿದರು. ದಾಖಲೆ ಪತ್ರಗಳಿಲ್ಲದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಇರುವ ಸ್ಥಳೀಯ ಹೊಟೇಲೊಂದರ ಕಾರ್ಮಿಕರ ಬಳಿ ತೆರಳಿ ಮಾಹಿತಿ ಪಡೆದು, ದಾಖಲೆಪತ್ರ ಹೊಂದಿಸಿಕೊಂಡು ಕೋವಿಡ್ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂಗಡಿ, ಹೊಟೇಲು, ವ್ಯವಹಾರ ಕೇಂದ್ರಗಳ ಮಾಲೀಕರು ತಮ್ಮ ಸಿಬಂದಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಆದೇಶಿಸಿದರು.
ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಾಪು ಕಂದಾಯ ಪರಿವೀಕ್ಷಕ ಸುಧೀರ್ ಶೆಟ್ಟಿ,ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್, ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ,ಪಿಡಿಒ ಅನಂತ ಪದ್ಮನಾಭ ನಾಯಕ್,ಗ್ರಾ.ಪಂ. ಸದಸ್ಯರು, ಗ್ರಾಮ ಕರಣಿಕ ವಿಜಯ್, ಸಹಾಯಕ ಭಾಸ್ಕರ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ…ಆದರೆ ಪೆಟ್ರೋಲ್,ಡೀಸೆಲ್ ವಾಹನಗಳ ಮೇಲೆ ನಿಷೇಧವಿಲ್ಲ:ಗಡ್ಕರಿ
ಬಳಿಕ ಉದಯವಾಣಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್ ಜಿಲ್ಲೆಯಲ್ಲಿ ಶೇ. 100 ಕೋವಿಡ್ ಲಸಿಕೆ ಗುರಿ ಸಾಧಿಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಮನೆ ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮದಡಿ ಪ್ರತೀ ಗ್ರಾಮದಲ್ಲಿ,ವಾರ್ಡ್ನಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರು ಸೇರಿಕೊಂಡು ಪ್ರಥಮ ಮತ್ತು ದ್ವಿತೀಯ ಡೋಸ್ಲಸಿಕೆ ಪಡೆಯದೆ ಬಾಕಿ ಇದ್ದವರ ಮನೆಗೆ ತೆರಳಿ ಲಸಿಕೆ ಪಡೆಯಲು ಮನವೊಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಪು ತಾಲೂಕಿನ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಸಾರ್ವಜನಿಕರು, ಸಂಘಸಂಸ್ಥೆಗಳು, ವ್ಯವಹಾರ ಕೇಂದ್ರಗಳು ಸಮುದಾಯದಲ್ಲಿ ಲಸಿಕೆ ಹಾಕುವ ಜವಾಬ್ದಾರಿಯನ್ನು ನಿಭಾಯಿಸಿಕೊಂಡಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ. 100 ಲಸಿಕೆ ಅಭಿಯಾನ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.