ಮಣಿಪಾಲ: ಸೂಟ್ಕೇಸ್ನಲ್ಲಿ ತುಂಬಿಸಿ ಚಿಕ್ಕಮ್ಮನ ಕೊಲೆ ಯತ್ನ!
Team Udayavani, Feb 20, 2022, 7:13 AM IST
ಉಡುಪಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಂಚಿ ಕುಮೇರಿಯ ಸುಮತಿ ಅವರನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕೊಲೆಗೆ ಯತ್ನಿಸಿರುವ ಘಟನೆ ಶಿವಳ್ಳಿಯ ಮಂಚಿಕುಮೇರಿಯಲ್ಲಿ ನಡೆದಿದೆ.
ಈ ಸಂಬಂಧ ಸುಮತಿಯ ಅಕ್ಕನ ಮಗ ಮಂಗಳೂರಿನ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ನನ್ನು ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುಮತಿಯವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣದ ವಿವರ
ಶುಕ್ರವಾರ ಸಂಜೆ ವೇಳೆ ಸುದರ್ಶನ್ ಎಂಬವರು ತನ್ನ ಮನೆಯಿಂದ ಸಮೀಪದ ಮೈದಾನದ ಕಡೆಗೆ ಹೋಗುತ್ತಿದ್ದಾಗ ಸ್ಥಳೀಯರಾದ ರಮಾನಾಥ ರೈ ಅವರ ಮನೆಯ ಕಡೆಗೆ ಇಬ್ಬರು ಹೋಗುತ್ತಿದ್ದುದನ್ನು ಗಮನಿಸಿದರು. ಅವರ ಕೈಯಲ್ಲಿ ದೊಡ್ಡ ಟ್ರಾಲಿ ಬ್ಯಾಗ್ ಕೂಡ ಇತ್ತು. ಈ ಹೊತ್ತಿಗೆ ರಮಾನಾಥ ರೈ ಮನೆಯಲ್ಲಿರಲಿಲ್ಲ.
ಸ್ವಲ್ಪ ಸಮಯದ ಬಳಿಕ ರಮಾನಾಥ್ ರೈ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿತ್ತು ಹಾಗೂ ಒಳಗಿನಿಂದ ಚಿಲಕ ಹಾಕಲಾಗಿತ್ತು. ಎಷ್ಟು ಕೂಗಿದರೂ ಪತ್ನಿ ಬಾಗಿಲು ತೆರೆಯದ ಕಾರಣ ನೆರೆಹೊರೆಯವರಾದ ಸುದರ್ಶನ್, ಮಿಥುನ್, ಮಹಮ್ಮದ್ ಇಸ್ಮಾಯಿಲ್, ಸದಾನಂದ್, ಹರೀಶ್, ಮೇಘಾ ಮೊದ ಲಾದವರ ಸಹಾಯ ಯಾಚಿಸಿದರು.
ಹೊರಗೆ ಜನ ಸೇರಿದಾಗ ಒಳಗಿನಿಂದ ಬಾಗಿಲು ತೆಗೆದ ಮಿಥುನ್ ಹಾಗೂ ನಾಗೇಶ್ ಪರಾರಿಯಾಗಲು ಯತ್ನಿಸಿದರು. ಅವರನ್ನು ಸ್ಥಳೀಯರು ಹಿಡಿದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಳಗೆ ಹೋಗಿ ನೋಡಿದಾಗ ಸುಮತಿಯವರನ್ನು ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಟ್ರಾಲಿ ಬ್ಯಾಗ್ನೊಳಗೆ ಹಾಕಲಾಗಿದ್ದುದು ಕಂಡು ಬಂತು. ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು ಎಂದು ಸುದರ್ಶನ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.