ಹುಣ್ಸೆಕಟ್ಟೆ : ರಾಜ್ಯ ಹೆದ್ದಾರಿ ಪಕ್ಕ ಅಪಾಯ ಆಹ್ವಾನಿಸುತ್ತಿದೆ ಬಾವಿ
ಕಾರು ಢಿಕ್ಕಿಯಾಗಿ ಕುಸಿದ ಬಾವಿ ದಂಡೆ
Team Udayavani, May 27, 2019, 10:02 AM IST
ಕುಂದಾಪುರ: ಪುರಸಭೆ ವ್ಯಾಪ್ತಿಯ ಹುಣ್ಸೆಕಟ್ಟೆಯಲ್ಲಿ ಕುಂದಾಪುರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಬಲ ಬದಿಯಲ್ಲಿ ರಸ್ತೆಗೆ ತಾಗಿಕೊಂಡೇ ಇರುವ ಅಪಾಯಕಾರಿ ಬಾವಿಯೊಂದು ಅನಾಹುತವನ್ನು ಆಹ್ವಾನಿಸುವಂತಿದೆ. ಕೆಲ ದಿನಗಳ ಹಿಂದೆ ಕಾರೊಂದು ಚಾಲಕನಿಗೆ ತಿಳಿಯದೇ ಈ ಬಾವಿಯ ದಂಡೆಗೆ ಢಿಕ್ಕಿಯಾಗಿ, ಪ್ರಯಾಣಿಕರು ಪವಾಡಸದೃಶವಾಗಿ ಪಾರಾದ ಘಟನೆ ಕೂಡ ಸಂಭವಿಸಿತ್ತು.
ಹುಣ್ಸೆಕೆರೆಯಲ್ಲಿರುವ ಈ ಬಾವಿ ಕುಂದಾಪುರ ಪುರಸಭೆ ಅಧೀನಕ್ಕೊಳಪಟ್ಟಿದ್ದು, ಇದರಲ್ಲಿ ಸ್ವಲ್ಪ ಪ್ರಮಾಣದ ನೀರಿದ್ದರೂ ಅದರ ಬಣ್ಣ ಬದಲಾಗಿರುವುದರಿಂದ, ಅದು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಹಾಗಾಗಿ ಇದು ಬಾವಿ ಯಾರಿಗೂ ಪ್ರಯೋಜನವಿಲ್ಲದೆ ನಿಷ್ಪ್ರಯೋಜಕವಾಗಿದೆ.
ದಂಡೆಗೆ ಕಾರು ಢಿಕ್ಕಿ
ಮೇ 17ರಂದು ಚಿತ್ರದುರ್ಗದಿಂದ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರೊಂದು ಮುಂಜಾನೆ 3.15ರ ಸುಮಾರಿಗೆ ಈ ಬಾವಿಯ ದಂಡೆಗೆ ಢಿಕ್ಕಿಯಾಗಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ, ಮಕ್ಕಳು ಸಹಿತ 5 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕಾರು ಢಿಕ್ಕಿಯಾದ ಪರಿಣಾಮ ಬಾವಿಯ ದಂಡೆಯ ಒಂದು ಬದಿ ಕುಸಿದು ಬಿದ್ದಿದ್ದು, ಈಗ ಇದು ವಾಹನ ಸವಾರರಿಗೆ ಮತ್ತಷ್ಟು ಅಪಾಯಕಾರಿಯಾದಂತಿದೆ. ಆ ಬಳಿಕ ಇಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರಿ ಪೊಲೀಸ್ ಇಲಾಖೆ ವತಿಯಿಂದ ಬ್ಯಾರಿಕೇಡ್ ಇಡಲಾಗಿದೆ.
ಮಳೆಗಾಲಕ್ಕೆ ಕುಸಿಯುವ ಭೀತಿ
ಈಗಿನ್ನು ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದ್ದು, ಅದಕ್ಕೂ ಮೊದಲು ಸೂಕ್ತ ಕ್ರಮಕೈಗೊಳ್ಳದಿದ್ದರೆ, ಮಳೆಗಾಲದಲ್ಲಿ ಈ ಬಾವಿ ಒಂದು ಬದಿಯಿಂದ ಕುಸಿಯುತ್ತ ಬಂದರೆ ರಾಜ್ಯ ಹೆದ್ದಾರಿಗೂ ಕಂಟಕ ಎದುರಾಗುವ ಭೀತಿಯಿದೆ. ಅದಕ್ಕಾಗಿ ಯಾರಿಗೂ ಪ್ರಯೋಜನವಿಲ್ಲದ ಬಾವಿಯನ್ನು ಮುಂದಿನ ದಿನಗಳಲ್ಲಿ ಮಳೆ ನೀರು ಇಂಗಿಸಲು ಬಳಸುವ ಬಗ್ಗೆ ಪುರಸಭೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತತ್ಕ್ಷಣ ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಲಿ
ಈ ಬಾವಿ ಹಲವು ವರ್ಷಗಳಿಂದ ಇದ್ದರೂ ಯಾರೂ ಕೂಡ ಇದರ ನೀರು ಉಪಯೋಗಿಸುತ್ತಿಲ್ಲ. ಹಲವು ಬಾರಿ ಈ ಬಾವಿಯಿಂದಾಗಿಯೇ ಅಪಘಾತಗಳು ಉಂಟಾಗಿ, ಇದೊಂದು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಸಂಬಂಧ ಪಟ್ಟವರು ಈ ಬಾವಿಯನ್ನು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ, ಸದುಪಯೋಗ ಪಡಿಸಿಕೊಳ್ಳಲಿ.
– ವೇಣುಗೋಪಾಲ್ ಶೆಟ್ಟಿ, ಸ್ಥಳೀಯರು
ಸೂಕ್ತ ಕ್ರಮ
ಅಲ್ಲಿನ ಜನರ ಅಭಿಪ್ರಾಯ ಪಡೆಯುವುದರ ಜತೆಗೆ ಇದರ ಸಾಧಕ – ಬಾಧಕಗಳನ್ನು ನೋಡಿಕೊಂಡು, ಸೂಕ್ತ ಕ್ರಮ ಕೈಗೊಳ್ಳಲು ಕೂಡಲೇ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅದನ್ನು ಮುಚ್ಚುವುದರ ಬದಲು ಅಪಾಯಕಾರಿಯಾಗದಂತೆ, ನೀರಿಂಗಿಸುವ ಬಗ್ಗೆಯೂ ಯೋಚನೆಯಿದೆ. ದುರಸ್ತಿ ಮಾಡುವುದಾದರೂ ಮಳೆಗಾಲಕ್ಕೂ ಮೊದಲೇ ಕಾಮಗಾರಿ ಆರಂಭಕ್ಕೂ ಆಗ್ರಹಿಸಲಾಗುವುದು.
-ಶೇಖರ್ ಪೂಜಾರಿ, ಹುಂಚಾರುಬೆಟ್ಟು , ಪುರಸಭೆ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ