ಅನಧಿಕೃತ ಮರಳು ದಾಸ್ತಾನು ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
Team Udayavani, Oct 24, 2019, 12:09 AM IST
ಉಡುಪಿ: ಕಟ್ಟಡ ನಿರ್ಮಾಣ ಮಾಲಕರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಅನಧಿಕೃತ ಮರಳು ದಾಸ್ತಾನು ಮಾಡುವುದು ಕಂಡು ಬಂದಲ್ಲಿ ನಿಯಮಾನುಸಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಮಿತಿಯ ಹಿರಿಯ ಭೂ ವಿಜ್ಞಾನಿ ಹಾಗೂ ಸದಸ್ಯ ಕಾರ್ಯದರ್ಶಿ ಅವರ ಪ್ರಕಟನೆ ತಿಳಿಸಿದೆ.
ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್)ದ ಹಾಗೂ ಕರಾವಳಿ ನಿಯಂತ್ರಣ ವಲಯ ಹೊರತು ಪಡಿಸಿದ (ನಾನ್ ಸಿಆರ್ಝಡ್) ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವ ಪರವಾನಿಗೆ ನೀಡಲಾಗಿದ್ದು, ಅದರಂತೆ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಮಾಲಕರು, ಗುತ್ತಿಗೆದಾರರು ಹಾಗೂ ಮಂಜೂರಾದ ಕಟ್ಟಡದ ಕಾಮಗಾರಿ ಗಳ ಆವಶ್ಯಕತೆಗನುಗುಣವಾಗಿ ಮರಳನ್ನು ಸಾಗಾಟ ಪರವಾನಿಗೆ ಯೊಂದಿಗೆ ಉಪಯೋಗಿಸಬೇಕು. ಇದನ್ನು ಹೊರತುಪಡಿಸಿ ಮರಳಿನ ದಾಸ್ತಾನು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಪ್ರಕಟನೆ ತಿಳಿಸಿದೆ.