ದೇವರಬಾಳು ಎನ್ಕೌಂಟರ್ಗೆ 12 ವರ್ಷ
Team Udayavani, Jun 22, 2017, 3:22 PM IST
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗೆ ಸಾಕ್ಷಿಯಾಗಿದ್ದ ದೇವರಬಾಳು ನಕ್ಸಲ್ ಎನ್ಕೌಂಟರ್ಗೆ ಜೂ. 23ಕ್ಕೆ ಹನ್ನೆರಡು ವರ್ಷ ತುಂಬುತ್ತಿದೆ. ಈ ಭಾಗದಲ್ಲಿ ಕೆಲವು ವರ್ಷಗಳ ಹಿಂದೆ ಬಿರುಸುಗೊಂಡಿದ್ದ ನಕ್ಸಲ್ ಚಟುವಟಿಕೆ ಈಗ ಬಹುತೇಕ ಸ್ತಬ್ಧಗೊಂಡಿದೆ. ಆದರೆ ಇಲ್ಲಿನ ಕೆಲವು ಭಾಗಗಳ ಮೂಲ ಸೌಕರ್ಯದ ಸಮಸ್ಯೆ ಮಾತ್ರ ಮರಿಚಿಕೆಯಾಗಿಯೇ ಉಳಿದಿದೆ.
2001ರಲ್ಲಿ ಸಾಕೇತ್ರಾಜನ್ ಮೂಲಕ ತಾಲೂಕಿನ ಬಸ್ರಿಬೇರು ಎಂಬಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಕ್ಸಲ್ ಚಟುವಟಿಕೆ ಕೊಲ್ಲೂರಿನಿಂದ ಕಾರ್ಕಳದ ಈದು ತನಕ ಸಾಗಿತ್ತು. 2005ರ ಜೂ. 23ರಂದು ದೇವರಬಾಳುವಿನಲ್ಲಿ ಎನ್ಕೌಂಟರ್ ಮೂಲಕ ಜಗತ್ತಿಗೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡ ನಕ್ಸಲ್ ಚಟುವಟಿಕೆ ತಾಲೂಕಿನಲ್ಲಿ ಹಾಗೆಯೇ ಮುಂದುವರಿದಿತ್ತು. ಮೂಲ ಸೌಕರ್ಯದಿಂದ ನಲುಗಿ ಹೋದ ದೇವರಾಬಾಳು ಪರಿಸರ ನಕ್ಸಲ್ ಹತ್ಯೆಯ ಅನಂತರ ಇಲ್ಲಿನ ಅಭಿ ವೃದ್ಧಿಗೆ ರಾಜಕಾರಣಿಗಳು ಸೇರಿದಂತೆ ಹತ್ತು ಹಲವರ ಭರವಸೆಗಳು ಕೇಳಿ ಬಂದರೂ ಯಾವುದೇ ಪ್ರಯೋಜನವಾಗದೇ ಹೋಯಿತು.
ಬಗೆಹರಿಯದ ಗಡಿ ಸಮಸ್ಯೆ
ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿ ಇರುವ ದೇವರಬಾಳು ವ್ಯಾಪ್ತಿಯ ಕಟ್ಟಿನಾಡಿ ಎಂಬ ಪ್ರದೇಶದ ಗಡಿ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ. ಕಳೆದ ವರ್ಷ ಈ ಗಡಿ ಸಮಸ್ಯೆಯ ಕುರಿತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಮ್ಮತಿಯ ಮೇರೆಗೆ ಸಮಸ್ಯೆ ಇತ್ಯರ್ಥ ಮಾಡಲು ಎರಡೂ ಜಿಲ್ಲೆಯವರು ಸೇರಿ ಒಟ್ಟಾಗಿ ಸರ್ವೆ ಕಾರ್ಯ ನಡೆಸಿ ಈ ಪ್ರದೇಶ ಯಾವ ಜಿಲ್ಲೆಗೆ ಸೇರುತ್ತದೆ ಎನ್ನುವ ಪ್ರಕ್ರಿಯೆಗೆ ಶಾಸಕರ ನೇತೃತ್ವದಲ್ಲಿ ಚಾಲನೆ ದೊರೆತರೂ ಕೂಡ ಪ್ರಸ್ತಾವನೆಯ ಕಡತಗಳಿಗೆ ಇಂದಿಗೂ ಕೊನೆ ಸಿಕ್ಕಿಲ್ಲ. ಇಲ್ಲಿನ ಜನರು ಹಕ್ಕುಪತ್ರ ಇಲ್ಲದೇ ಸರಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ.
ಅಭಿವೃದ್ಧಿಯಲ್ಲಿ ಹಿನ್ನಡೆ
ನಕ್ಸಲ್ ಎನ್ಕೌಂಟರ್ ಬಳಿಕ ದೇವರಬಾಳು ಪರಿಸರ ಅಭಿವೃದ್ಧಿ ಯಾಗುತ್ತದೆ ಎನ್ನುವ ಬಗ್ಗೆ ಆಶಾಭಾವನೆ ಇತ್ತು. ಆದರೆ ಕೆಲವೊಂದು ಕಾರಣಗಳಿಂದ ರಸ್ತೆ ಮೊದಲಾದ ಮೂಲ ಸೌಕರ್ಯಗಳು ಈ ಭಾಗಕ್ಕೆ ಒದಗಿ ಬರುವಲ್ಲಿ ತೊಡಕಾಗಿ ಕಂಡು ಬಂದಿದೆ. ಕಟ್ಟಿನಾಡಿ, ರಾಮನಹಕ್ಲು, ಬೊಮ್ಮನಹಳ್ಳ ಮೊದಲಾದ ಪ್ರದೇಶಗಳಲ್ಲಿ ಬಹುತೇಕ ಮರಾಠಿ ಹಾಗೂ ಹಸ್ಲ ಕುಟುಂಬಗಳು ವಾಸಿಸುತ್ತಿವೆ. 2005ರಿಂದ ನಕ್ಸಲ್ ಪ್ಯಾಕೇಜ್ನಡಿ ಅನುದಾನ ಹರಿದು ಬಂದಿದ್ದರೂ ಅದು ಲೆಕ್ಕಕ್ಕೇ ಬರಲಿಲ್ಲ. ಪ್ರಸ್ತುತ ನಕ್ಸಲ್ ಪ್ಯಾಕೇಜ್ ಇಲ್ಲದೇ ಇರುವುದರಿಂದ ಹಳ್ಳಿಹೊಳೆ ಗ್ರಾ.ಪಂ. ಈ ಭಾಗಕ್ಕೆ ಕೆಲವು ಮೂಲ ಸೌಕರ್ಯವನ್ನು ಒದಗಿಸುತ್ತಿದೆ. ಇಲ್ಲಿ ಸೇತುವೆ, ರಸ್ತೆಗಳಿಗೆ ಅನುದಾನ ಬಿಡುಗಡೆಯಾದರೂ ಸರಕಾರ ಮೀಸಲು ಅರಣ್ಯವನ್ನು ವನ್ಯಜೀವಿ ವಲಯವನ್ನಾಗಿ ಪರಿವರ್ತಿಸುವ ಚಿಂತನೆಯಲ್ಲಿರುವುದರಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ ಎನ್ನುವುದು ಗ್ರಾಮಸ್ಥರ ಅಳಲು. ಕೆಲವಡೆ ಗ್ರಾ.ಪಂ. ಹಾಗೂ ಶಾಸಕರ ನಿಧಿಯಿಂದ ಕೆಲವು ರಸ್ತೆ ಕಾಮಗಾರಿಗಳು ಇತ್ತಿಚಿನ ದಿನಗಳಲ್ಲಿ ನಡೆದಿವೆ.
ಸರಕಾರ ಈ ಭಾಗದ ಮೂಲ ಸೌಕರ್ಯದ ಸಮಸ್ಯೆಯೊಂದಿಗೆ ಗಡಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಕಳೆದ ಹದಿನೈದು ವರ್ಷಗಳಿಂದ ಮೊರೆ ಹೋಗಿರುವ ಗ್ರಾಮಸ್ಥರಿಗೆ ಇನ್ನು ಕೆಲವೇ ತಿಂಗಳುಗಳಲ್ಲಿ ಸಮಸ್ಯೆ ಬಗೆ ಹರಿಯುವ ಬಗ್ಗೆ ಆಶಾಭಾವನೆ ದೊರೆತಿದೆ. ಅದು ಯಾವಾಗ ಈಡೇರುತ್ತದೆ ಎನ್ನುವುದನ್ನು ಕಾದು ನೋಡಬೇಕು.
ದೇವರಬಾಳು ಎನ್ಕೌಂಟರ್ ನಡೆದ ಮೂರು ವರ್ಷಕ್ಕೆ ಅಂದರೆ 2008ರ ಡಿ. 7ರಂದು ಸಂಜೆ ಹಳ್ಳಿಹೊಳೆಯ ಕೃಷಿಕ ಕೇಶವ ಯಡಿಯಾಳ ಅವರು ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿದ್ದರು. ಕೇಶವ ಯಡಿಯಾಳರ ಹತ್ಯೆಯ ಬಳಿಕ ಎಚ್ಚೆತ್ತ ಸರಕಾರ ನಕ್ಸಲರ ವಿರುದ್ಧ ಕಠಿನ ಕ್ರಮಕ್ಕೆ ಮುಂದಾಗಿರುವುದಲ್ಲದೆ ಅಮಾಸೆಬೈಲು ಹಾಗೂ ಜಡ್ಡಿನಗದ್ದೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಕ್ಯಾಂಪ್ ಆರಂಭಿಸಿತು. ಅಮಾಸೆಬೈಲಿನಲ್ಲಿ ಪೊಲೀಸ್ ಠಾಣೆ ಆರಂಭಿಸಿತು. ಅಲ್ಲಿಂದ ಇಲ್ಲಿಯ ತನಕ ನಕ್ಸಲ್ ಚಟುವಟಿಕೆ ಅಲ್ಲೊಂದು ಇಲ್ಲೊಂದು ಕರಪತ್ರದ ಪ್ರಕರಣಕ್ಕೆ ಜೋತು ಬಿದ್ದಿತೇ ವಿನಾ ಬೇರೆ ಬೇರೆ ನಕ್ಸಲ್ ತಂಡಗಳು ಹೇಳ ಹೆಸರಿಲ್ಲದಂತೆ ಚದುರಿಹೋದವು. 2012ರ ಡಿಸೆಂಬರ್ನಲ್ಲಿ ಅಮಾಸೆಬೈಲು ಬೊಳ್ಮನೆ ಪ್ರದೇಶದಲ್ಲಿ ಹತ್ತು ಮಂದಿ ನಕ್ಸಲರು ಕಾಣಿಸಿಕೊಂಡಿರುವುದು ಬಿಟ್ಟರೆ ಬಹುತೇಕ ತಾಲೂಕಿನಲ್ಲಿ ನಕ್ಸಲ್ ಚಟುವಟಿಕೆ ಸ್ತಬ್ಧಗೊಂಡಿದೆ.
– ಉದಯ ಆಚಾರ್ ಸಾಸ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ