ಉಡುಪಿ, ದ.ಕ.ಗಳಲ್ಲಿ ಸ್ವಉದ್ಯೋಗ ಯೋಜನೆಗೆ ನಿರಾಸಕ್ತಿ
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನಕ್ಕೆ ನೀರಸ ಸ್ಪಂದನ
Team Udayavani, Jul 8, 2019, 10:51 AM IST
ಕುಂದಾಪುರ: ಕೇಂದ್ರ ಸರಕಾರದ ಪ್ರಾಯೋಜಕತ್ವದಲ್ಲಿ ರಾಜ್ಯ ಸರಕಾರ ನಡೆಸುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನಕ್ಕೆ (ಎನ್ಆರ್ಎಲ್ಎಂ)ಉಡುಪಿ ಜಿಲ್ಲೆಯಲ್ಲಿ ನೀರಸ ಸ್ಪಂದನ ದೊರೆತಿದೆ. 10 ಲಕ್ಷ ರೂ.ವರೆಗೆ ಸಾಲ ದೊರೆಯುತ್ತದೆಯಾದರೂ ಜನ ಸ್ವ ಉದ್ಯೋಗಕ್ಕೆ ಮುಂದಾಗುತ್ತಿಲ್ಲ.
ಏನಿದು ಯೋಜನೆ?
ರಾಜ್ಯದಲ್ಲಿ ಸಂಜೀವಿನಿ ಯೋಜನೆ ಯನ್ನು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆಎಸ್ಆರ್ಎಲ್ ಪಿಎಸ್) ಮೂಲಕ ಜಾರಿಗೊಳಿಸಲಾಗುತ್ತಿದೆ. ಯೋಜನೆ ಯಡಿ ಕೇಂದ್ರ ಮತ್ತು ರಾಜ್ಯ ಸರಕಾರ ಗಳು ಅನುದಾನ ಭರಿಸುತ್ತವೆ. ಪ್ರತಿ ಸ್ವ ಸಹಾಯ ಗುಂಪುಗಳಿಗೆ ಮೂವರು ಮಹಿಳೆಯರನ್ನು ಆಯ್ಕೆ ಮಾಡಿ ವಾರ್ಡ್ ಮಟ್ಟದ ಒಕ್ಕೂಟವನ್ನು ರಚನೆ ಮಾಡಲಾಗುತ್ತದೆ. ವಾರ್ಡ್ ಮಟ್ಟದ ಒಕ್ಕೂಟದಲ್ಲಿ ಮೂವರು ಮಹಿಳೆಯರನ್ನು ಆಯ್ಕೆ ಮಾಡಿ ಗ್ರಾ.ಪಂ. ಮಟ್ಟದ ಒಕ್ಕೂಟವನ್ನು ಸ್ಥಾಪಿಸಿ ಪದಾಧಿಕಾರಿಗಳನ್ನು ನೇಮಿಸ ಲಾಗುತ್ತದೆ. ಒಕ್ಕೂಟದ ಮೂಲಕ ಕಿರು ಬಂಡವಾಳ ಯೋಜನೆಯ ತರಬೇತಿ ಪಡೆದು, ಯೋಜನೆ ತಯಾರಿಸಿದ ಅರ್ಹ ಸ್ವಸಹಾಯ ಗುಂಪುಗಳಿಗೆ ಸಾಲದ ರೂಪದಲ್ಲಿ 10 ಲಕ್ಷ ರೂ.ವರೆಗೆ ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗುತ್ತದೆ.
ಕಡಿಮೆ ಬಡ್ಡಿಯ ಸಾಲ
2010-11ನೇ ಸಾಲಿನಲ್ಲಿ ಕೇಂದ್ರ ಗ್ರಾಮೀಣಾ ಭಿವೃದ್ಧಿ ಮಂತ್ರಾಲಯವು ಸ್ವರ್ಣ ಜಯಂತಿ ಸ್ವರೋಜ್ಗಾರ್ ಯೋಜನೆಯನ್ನು ಪುನಾರಚಿಸಿ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವ ನ್ನಾಗಿ ಜಾರಿಗೆ ತಂದಿದೆ. ಊರುಗಳ ಸ್ಥಿತಿಗತಿ ಅಧ್ಯಯನ, ಸಂಘಗಳು ಹೊಂದುವ ಲೆಕ್ಕ, ಸಭೆ ಪುಸ್ತಕಗಳ ನಿರ್ವಹಣೆ ಬಗ್ಗೆ, ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. ಸ್ವಸಹಾಯ ಸಂಘಗಳಿಗೆ 15 ಸಾವಿರ ರೂ. ಪ್ರೋತ್ಸಾಹ ಧನ ದೊರೆಯುತ್ತದೆ.
43 ಒಕ್ಕೂಟ ರಚನೆ
ಈ ವರ್ಷ ಉಡುಪಿ ಜಿಲ್ಲೆಯಲ್ಲಿ 43 ಒಕ್ಕೂಟಗಳ ರಚನೆಯಾಗಿದೆ. ಉಡುಪಿ ತಾಲೂಕಿನಲ್ಲಿ 5, ಕಾರ್ಕಳದ 34, ಕುಂದಾಪುರದ 5 ಗ್ರಾ.ಪಂ.ಗಳಲ್ಲಿ ಒಕ್ಕೂಟ ರಚನೆಯಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ 38, ಬಂಟ್ವಾಳದಲ್ಲಿ 40, ಪುತ್ತೂರು 29, ಮಂಗಳೂರಿನಲ್ಲಿ 13 ಮತ್ತು ಸುಳ್ಯದಲ್ಲಿ 20 ಒಕ್ಕೂಟಗಳ ರಚನೆಯಾಗಿದೆ.
8 ಪಂಚಾಯತ್ಗಳಿಂದ ಬೇಡಿಕೆ
ಕಳೆದ ವರ್ಷ ಕಾರ್ಕಳ ತಾಲೂಕಿನಿಂದ 2 ಪಂಚಾಯತ್ಗಳಿಗೆ 10 ಲಕ್ಷ ರೂ. ನಿಧಿ ನೇರ ಜಮೆಯಾಗಿದೆ. ಇದರ ಹೊರತಾಗಿ ಯಾವುದೇ ಪಂಚಾಯತ್ಗಳು ಬೇಡಿಕೆ ಸಲ್ಲಿಸಲಿಲ್ಲ. ಈ ಬಾರಿ ಕಾರ್ಕಳದ 8 ಪಂಚಾಯತ್ಗಳಿಂದ ಬೇಡಿಕೆ ಬಂದಿದೆ. ಉಡುಪಿ ಮತ್ತು ಕುಂದಾಪುರದಿಂದ ಬೇಡಿಕೆ ಇಲ್ಲ.
ಮಾಹಿತಿ ಕೊರತೆ
ಜನರಿಗೆ ಈ ಯೋಜನೆ ಕುರಿತು ಮಾಹಿತಿ ಕೊರತೆಯಿದೆ. ಗುಜ್ಜಾಡಿ, ವಂಡ್ಸೆಯಲ್ಲಿ ಸಭೆ ಮಾಡಲಾಗಿದ್ದು 14 ಮಂದಿ ಆಸಕ್ತರು ಒಕ್ಕೂಟ ರಚನೆಗೆ ಮುಂದಾಗಿದ್ದಾರೆ.
ಬಂಟ್ವಾಳ ಮಾದರಿ
ದ.ಕ.ದ ಬಂಟ್ವಾಳದಲ್ಲಿ ಪ್ರತಿ ಗ್ರಾ. ಪಂ.ಗೆ ತೆರಳಿ ಮಾಹಿತಿ ನೀಡಿ ಒಕ್ಕೂಟ ರಚಿಸಲಾಗುತ್ತಿದ್ದು, ರಾಜ್ಯದಲ್ಲಿಯೇ ಮಾದರಿ ಪ್ರಯೋಗ ಎನ್ನಲಾಗಿದೆ. ಇತರೆಡೆಯೂ ಅನುಷ್ಠಾನಿಸಲು ಅಧಿಕಾರಿಗಳು ಚಿಂತಿಸಿದ್ದಾರೆ.
ಯೋಜನೆ ಅನುಷ್ಠಾನಕ್ಕೆ ಸಿಬಂದಿಯೇ ಇಲ್ಲ
ತಾಲೂಕನ್ನು ಬ್ಲಾಕ್ಗಳನ್ನಾಗಿ ವಿಂಗಡಿಸಿ ಪ್ರತಿ ಬ್ಲಾಕ್ನಲ್ಲಿ ಒಬ್ಬ ಪಿಆರ್ಪಿ (ಪ್ರೊಬೆಷನಲ್ ರಿಸೋರ್ಸ್ ಪರ್ಸನ್), ಸಿಆರ್ಪಿ (ಕಮ್ಯೂನಿಟಿ ರಿಸೋರ್ಸ್ ಪರ್ಸನ್), ಬುಕ್ಕೀಪರ್ಗಳು ಕಾರ್ಯನಿರ್ವಹಿಸಬೇಕು. ಸಿಆರ್ಪಿಗಳು 15 ದಿನ ಕೆಲಸ ನಿರ್ವಹಿಸಿದರೆ, ಪಿಆರ್ಪಿ ಮತ್ತು ಬುಕ್ಕೀಪರ್ಗಳು ನಿರಂತರವಾಗಿ 3 ವರ್ಷ ಅಲ್ಲೇ ಕೆಲಸ ನಿರ್ವಹಿಸಬೇಕು. ಅವರ ವೇತನವನ್ನು ಸರಕಾರವೇ ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತದೆ. ಸ್ಥಳೀಯ ಆಡಳಿತದ ಮೇಲೆ ಹಣಕಾಸು ಹೊರೆ ಇರುವುದಿಲ್ಲ. ಆದರೆ ಇದು ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ಮಾತ್ರ ನಡೆದಿದ್ದು, ಎಲ್ಲ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನವಾದಾಗ ಜಾರಿಗೆ ಬಂದಿಲ್ಲ. ಉಡುಪಿ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸಿಬಂದಿಯೇ ಇಲ್ಲ. ಯೋಜನಾ ನಿರ್ದೇಶಕರು ಪ್ರಭಾರ, ಒಬ್ಬ ಸಿಬಂದಿಯಿದ್ದಾರೆ. ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆ ಕೂಡ ಖಾಲಿಯಿದೆ. ತಾಲೂಕು ಮಟ್ಟದಲ್ಲಿ ಕೂಡ ಸಿಬಂದಿಯಿಲ್ಲ.
ಇಒಗೆ ಪತ್ರ
ಒಕ್ಕೂಟ ರಚನೆಯಾಗದೆ ಇರುವ ತಾಲೂಕುಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಧನ ಇರುವುದನ್ನು ತಿಳಿಸುವ ಜತೆಗೆ ಜನರಿಗೆ ಹೆಚ್ಚಿನ ಮಾಹಿತಿ ನೀಡಲು ಸೂಚಿಸ ಲಾಗುವುದು. ಸಿಬಂದಿ ಕೊರತೆ ಯಿದ್ದರೂ ವಿವಿಧ ಪಂಚಾಯತ್ಗಳಿಗೆ ಭೇಟಿ ನೀಡಿ ಕೆಲಸ ನಿರ್ವಹಿ ಸಲಾಗುತ್ತಿದೆ. ಸಿಬಂದಿ ನೀಡುವು ದಾಗಿ ಭರವಸೆ ದೊರೆತಿದೆ.
ಭಾರತಿ, ಯೋಜನಾ ನಿರ್ದೇಶಕಿ (ಪ್ರಭಾರ), ಉಡುಪಿ ಜಿ.ಪಂ.
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು