ರಸ್ತೆ ಆಗುವವರೆಗೆ ಟೋಲ್ ಬೇಡ : ಭಟ್
Team Udayavani, Jun 10, 2018, 6:00 AM IST
ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆಗಳು ಆಗುವವರೆಗೆ ಟೋಲ್ ಸಂಗ್ರಹಿಸಬಾರದು ಎಂದು ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಏರ್ಪಡಿಸಿದ್ದ ಸಂವಾದ ದಲ್ಲಿ ಮಾತನಾಡಿ, ರಾ. ಹೆ. 66ರಲ್ಲಿ ಅಂಬಲಪಾಡಿ, ಕಟಪಾಡಿ, ಬ್ರಹ್ಮಾವರ ಮತ್ತು ಪಡುಬಿದ್ರಿಯಲ್ಲಿ ಫ್ಲೈ ಓವರ್ ಅತ್ಯಗತ್ಯ. ಹಾಗಾಗಿ ಫ್ಲೈ ಓವರ್ ಪೂರ್ಣಗೊಳ್ಳುವವರೆಗೆ ಜಿಲ್ಲೆಯ ವರಿಂದ ಟೋಲ್ ಸಂಗ್ರಹಿಸ ಬಾರದು. ಹೆದ್ದಾರಿ ಕಾಮ ಗಾರಿ ನಿರ್ವಹಿಸುತ್ತಿರುವ ಕಂಪೆನಿ ಆರ್ಥಿಕ ವಾಗಿ ದುಸ್ಥಿತಿಯ ಲ್ಲಿದೆ. ಈಗ ಅವರು ವಹಿಸಿಕೊಂಡ ಕಾಮಗಾರಿ ಮುಗಿಸದೇ ಹೊಸ ಫ್ಲೈ ಓವರ್ ಅಥವಾ ಇತರ ಕಾಮಗಾರಿ ನಡೆಸಲೂ ಸಾಧ್ಯವಿಲ್ಲ. ಹಳೆಯ ಕಾಮಗಾರಿ ಮುಗಿದ ಕೂಡಲೇ ಫ್ಲೈ ಓವರ್ ಮಾಡಿಸಲು ನಿತಿನ್ ಗಡ್ಕರಿ ಅವರನ್ನು ಆಗ್ರಹಿಸಿದ್ದೇನೆ. ಇದೇ ಸಂದರ್ಭದಲ್ಲಿ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹ ರದ್ದಿಗೆ ಕೇಂದ್ರ ಸರ ಕಾರ ಚಿಂತನೆ ನಡೆಸಿದೆ ಎಂದರು.
ಪಡುಕರೆ ಬೀಚ್ ಅಭಿವೃದ್ಧಿ
ಪಡುಕೆರೆ ಬೀಚ್ಗೆ ಮೂಲ ಸೌಕರ್ಯ ಒದಗಿಸಿ ಪ್ರವಾಸಿ ತಾಣವಾ ಗಿಸುವ ಯೋಚನೆ ಇದೆ. ಕಲ್ಸಂಕ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗಿಂತ ಕೃಷ್ಣ ಮಠಕ್ಕೆ ಮತ್ತು ಗುಂಡಿಬೈಲಿಗೆ ಹೋಗಲು ಪ್ರತ್ಯೇಕ ಸೇತುವೆ-ರಸ್ತೆ ನಿರ್ಮಿಸಲು ಪ್ರಯತ್ನಿಸುವೆ ಎಂದರು. ಕ್ಲಾಕ್ ಟವರ್ ಪರಿಸರವನ್ನು ಸುಂದರಗೊಳಿಸುವ ಯೋಜನೆಯ ಅನುಷ್ಠಾನ, ಪಡುಬಿದ್ರಿಯಲ್ಲಿ ಜಿಲ್ಲಾಡ ಳಿತದ ವಿಳಂಬ ನೀತಿಯಿಂದಾಗಿ ರಸ್ತೆ ಕಾಮಗಾರಿ ತಡವಾಗಿದೆ ಎಂದರು.
ಜಿಎಸ್ಟಿ ಪಾವತಿದಾರರು ಮತ್ತು ಕುಟುಂಬಿಕರಿಗೆ 10 ಲ.ರೂ. ವಿಮೆ ಮತ್ತು ಉಡುಪಿ-ಮಡ್ಗಾಂವ್ ರೈಲನ್ನು ವಾಸೊಗೆ ವಿಸ್ತರಿಸುವ ಕುರಿತು ಸಂಸದರ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸುವೆ. ಪಂಪಿಂಗ್ ಸಾಮರ್ಥ್ಯ ಹೆಚ್ಚಿಸದೆ ಇರುವುದರಿಂದ ನೀರು ಲಭ್ಯ ಇದ್ದಾಗ್ಯೂ ಉಡುಪಿ ನಗರಕ್ಕೆ 24 ಗಂಟೆ ನೀರು ನೀಡಲಾಗುತ್ತಿಲ್ಲ.ಈ ಬಗ್ಗೆ ನಗರಸಭೆ ಅಧಿಕಾರಿಗಳ ಜತೆ ಚರ್ಚಿಸಿರುವೆ ಎಂದು ಹೇಳಿದರು.
ಅಧಿವೇಶನದಲ್ಲಿ ಪ್ರಶ್ನೆ
ಪ್ರತ್ಯೇಕ ಮರಳು ನೀತಿ ಕರಾವಳಿಗೆ ಮಾರಕ. ಇದರ ಪ್ರಕಾರ ನೀರಿದ್ದಲ್ಲಿ ಮರಳು ತೆಗೆಯಲು ಅವಕಾಶವಿಲ್ಲ. ಆದರೆ ಕರಾವಳಿಯಲ್ಲಿ ಎಲ್ಲಿಯೂ ನೀರಿಲ್ಲದ ಸ್ಥಳದಲ್ಲಿ ಮರಳಿಲ್ಲ. ಇದಲ್ಲದೆ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ಇನ್ನೂ ಗುರುತಿಸಿಲ್ಲ. ಈ ಬಗ್ಗೆ ಜೂ. 15ರ ಅನಂತರ ಜಿಲ್ಲಾಧಿಕಾರಿ ಸಭೆ ಕರೆದು ಚರ್ಚಿಸುವೆ. ಮರಳು ಸಮಸ್ಯೆಯನ್ನು ಪ್ರಥಮ ಆದ್ಯತೆಯಲ್ಲಿ ಬಗೆಹರಿಸಲು ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಉಪಸ್ಥಿತರಿದ್ದರು. ಚೇಂಬರ್ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ ಸ್ವಾಗತಿಸಿದರು. ಡಾ| ವಿಜಯೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮೀಕಾಂತ ಬೆಸ್ಕೂರ್ ವಂದಿಸಿದರು. ಭರತ್ ಶೆಟ್ಟಿ, ರಂಜನ್ ಕಲ್ಕೂರ, ವಿ.ಜಿ. ಶೆಟ್ಟಿ, ಪ್ರಶಾಂತ್ ತೋಳಾರ್, ಕೆಂಚನೂರು ಸೋಮಶೇಖರ ಶೆಟ್ಟಿ ಸಂವಾದದಲ್ಲಿ ಪಾಲ್ಗೊಂಡರು.
ಪ್ರಶ್ನೆ, ಅಹವಾಲು
ಹೊಟೇಲ್ಗಳ ಜಿಎಸ್ ಟಿ ಯನ್ನು ಶೇ.5ಕ್ಕೆ ಇಳಿಸಿದ್ದೀರಿ. ಆದರೆ ಮದುವೆ ಹಾಲ್ ಗಳ ಜಿಎಸ್ಟಿ ಇಳಿಸಿ.
ಚೇಂಬರ್ ಆಫ್ ಕಾಮರ್ಸ್ ನವರಿಗೂ ವಿಧಾನ ಪರಿಷತ್ನಲ್ಲಿ ಸ್ಥಾನ ನೀಡಿ.
ಜಿಎಸ್ಟಿ ಹೋಲ್ಡರ್ ನವರು ಮತ್ತು ಕುಟುಂಬಿಕರಿಗೆ ಅಪಘಾತ ವಿಮೆ ಮಾಡಿ.
ಐಟಿ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ; ನಿಲ್ಲಿಸುವಂತೆ ಮಾಡಿ.
ಉಡುಪಿ ಕ್ಲಾಕ್ಟವರ್ನಲ್ಲಿ ಶ್ರೀಕೃಷ್ಣ, ಮಧ್ವಾಚಾರ್ಯ, ಪರಶುರಾಮನ ವಿಗ್ರಹ ಇರಿಸಿ ಸುಂದರಗೊಳಿಸುವ ಯೋಜನೆಯನ್ನು ಜಾರಿತನ್ನಿ.
ಪ್ರವಾಸಿಗರಿಗೆ ಮಾಹಿತಿ, ಸೂಚನ ಫಲಕ ಹಾಕಿಸಿ.
ಬ್ರಹ್ಮಾವರ ಪುರಸಭೆಯಾ ಗಲಿ, ಕಲ್ಸಂಕದ ಟ್ರಾಫಿಕ್ ಸಮಸ್ಯೆ ತಪ್ಪಲಿ.
ಕಾರ್ಮಿಕರಿಗಾಗಿ ಇಲಾಖೆಗೆ ನೀಡಿದ ಸೆಸ್ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಬಳಸುವಂತೆ ನೋಡಿಕೊಳ್ಳಿ.
ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ.