ಕುಂದಾಪುರ : ವಿದ್ಯುತ್ ಕಂಬ ದುರಸ್ತಿ ಕಾರ್ಯ
Team Udayavani, Nov 29, 2018, 1:20 AM IST
ಕುಂದಾಪುರ: ಬಸ್ರೂರು ಮೂರುಕೈ ಬಳಿಯ ಮೆಸ್ಕಾಂ ಕಚೇರಿ ಸಮೀಪ ಜೆಸಿಬಿ ವಾಹನದ ಅವಾಂತರದಿಂದ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬುಧವಾರ ಇದರ ದುರಸ್ತಿ ಕಾರ್ಯ ನಡೆಯಿತು. ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜೆಸಿಬಿ ವಾಹನದ ಕೊಕ್ಕೆಗೆ ವಿದ್ಯುತ್ ವಯರ್ ಸಿಕ್ಕಿ, ಅದನ್ನು ಎಳೆದುಕೊಂಡು ಹೋದ ಪರಿಣಾಮ, ಜೆಸಿಬಿ ವಾಹನಕ್ಕೆ ಸಿಲುಕಿ ಎಳೆದುಕೊಂಡು ಹೋಗಿ, ಟ್ರಾನ್ಸ್ಫಾರ್ಮರ್ ಕಂಬ ಮುರಿದು ರಸ್ತೆಗೆ ಬಿದ್ದಿದೆ. ಇದರಿಂದ ಮತ್ತೆ ಕೆಲವು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದಿತ್ತು.
ಇದರಿಂದ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಸಂಜೆ 1 ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಅದಲ್ಲದೆ ಕುಂದಾಪುರದ ಕೆಲವು ಕಡೆಗಳಿಗೆ ವಿದ್ಯುತ್ ಕಡಿತ ಮಾಡಲಾಗಿತ್ತು. ಬುಧವಾರ ಮೆಸ್ಕಾಂ ಸಿಬಂದಿ, ಕಾರ್ಮಿಕರು ವಿದ್ಯುತ್ ಕಂಬ ಬದಲಿಸುವ ಕಾರ್ಯ ಆರಂಭಗೊಂಡಿದ್ದು, ಸಂಜೆ ವೇಳೆಗೆ ಎಲ್ಲ ಕಡೆಗೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
1.75 ಲಕ್ಷ ರೂ. ನಷ್ಟ
ಜೆಸಿಬಿ ವಾಹನದ ಅವಾಂತರದಿಂದಾಗಿ ಮೆಸ್ಕಾಂ ಕಚೇರಿ ಸಮೀಪದ ಟ್ರಾನ್ಸ್ಫಾರ್ಮರ್ ಕಂಬಗಳು ಸಹಿತ 10 ಕ್ಕೂ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಸುಮಾರು 1.75 ಲಕ್ಷ ರೂ. ಗೂ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.