ಯೋಗೀಶ್ವರನ ಆರಾಧನೆಯಿಂದ ಸರ್ವವೂ ಸಾಧ್ಯ
Team Udayavani, May 13, 2019, 6:10 AM IST
ಉಡುಪಿ: ಯೋಗೀಶ್ವರ ನಾದ ಶ್ರೀಕೃಷ್ಣನ ಆರಾಧನೆಯಿಂದ ಸರ್ವವೂ ಸಾಧ್ಯವಾಗುತ್ತದೆ ಎಂದು ಶ್ರೀ ಪಲಿಮಾರು ಮಠದ 31ನೇ ಯತಿಗಳಾಗಿ ರವಿವಾರ ಪಟ್ಟಾಭಿಷಿಕ್ತರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ನುಡಿದರು.
ರಾಜಾಂಗಣದಲ್ಲಿ ನಡೆದ ಸಾರ್ವ ಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀಕೃಷ್ಣ- ರಾಮದೇವರ ಪೂಜೆಯನ್ನು ಮಾಡಬೇಕೆಂಬ ಇಚ್ಛೆ ನನಗೆ ಇತ್ತು. ಹೃಷಿಕೇಶತೀರ್ಥರ ಪರಂಪರೆಯನ್ನು ಅಲಂಕರಿಸುವ ಭಾಗ್ಯ ಒದಗಿರುವುದು ಗುರುಗಳು, ದೇವರ ಅನುಗ್ರಹ ಎಂದರು.
ಉತ್ತರಾಧಿಕಾರಿಯಲ್ಲ, ಉತ್ತಮಾಧಿಕಾರಿ
ಪೇಜಾವರ ಶ್ರೀ ವಿಶ್ವೇಶತೀರ್ಥರು ಆಶೀರ್ವಚನ ನೀಡಿ, ನೂತನ ಯತಿಗಳು ಉತ್ತರಾಧಿಕಾರಿಯಾಗಿರದೆ ಉತ್ತಮಾಧಿಕಾರಿ ಆಗುತ್ತಾರೆ. ಮಧ್ವರು ಪ್ರವಚನ ನೀಡುವಾಗ ಶ್ಲೋಕಗಳನ್ನು ಹಾಡಿದ, ಅವರ ಕೃತಿಯನ್ನು ದಾಖಲಿ ಸಿದ ಪರಂಪರೆಯ ಮೊದಲ ಯತಿ ಶ್ರೀ ಹೃಷಿಕೇಶತೀರ್ಥರು, ಎಲ್ಲರಿಗೂ ಮಂಗಲವಾಗಬೇಕೆಂದು “ಮಂಗಲಾಷ್ಟಕ’ವನ್ನು ಬರೆದ ಶ್ರೀ ರಾಜರಾಜೇಶ್ವರತೀರ್ಥರು, ಅನೇಕ ಮಠಾಧೀಶರಿಗೆ ಪಾಠ ಹೇಳಿ ರೂಪಿಸಿದ ತಮ್ಮ ಗುರು ಶ್ರೀ ವಿದ್ಯಾಮಾನ್ಯ ತೀರ್ಥರು ವಿರಾಜಿಸಿದ ಈ ಪರಂಪರೆ ಯನ್ನು ನೂತನ ಯತಿಗಳು ಬೆಳಗಲಿ ಎಂದು ಹಾರೈಸಿದರು.
ಗುರು-ಮಾತೆಯರಿಂದ ಸಮಾಜ ನಿರ್ಮಾಣ
ಮಾತೆಯರು ಉನ್ನತೋನ್ನತ ವ್ಯಕ್ತಿತ್ವಗಳನ್ನು ನಿರ್ಮಾಣ ಮಾಡುವ ವರು. ಗುರುಗಳು ಉತ್ತಮೋತ್ತಮ ಸಮಾಜದ ನಿರ್ಮಾತೃಗಳು ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಅಭಿಪ್ರಾಯಪಟ್ಟರು.
ಉಪನಿಷತ್ತು “ಮಾತೃದೇವೋ ಭವ’ ಎನ್ನುತ್ತದೆ. ವ್ಯಕ್ತಿಗಳನ್ನು ಹೆತ್ತು ಹೊತ್ತು ನಿರ್ಮಿಸುವವರು ತಾಯಿ. ಇಂದು ತಾಯಂದಿರ ದಿನ. ಗುರು, ಸನ್ಯಾಸಿಯಾದರೂ ಮಾತೆಗೆ ಮಗನೇ. ಗುರುಗಳು ಸಮಾಜವನ್ನು ನಿರ್ಮಿಸು ವವರು. ನೂತನ ಯತಿಗಳಲ್ಲಿ ಹಿಂದಿನ ಎಲ್ಲ ಯತಿಗಳ ಸನ್ನಿಧಾನವಿದ್ದು ಉನ್ನತ ಸಮಾಜವನ್ನು ನಿರ್ಮಾಣ ಮಾಡಲಿ ಎಂದು ಹಾರೈಸಿದರು.
ಸನ್ಯಾಸ ಧರ್ಮವನ್ನು ಪರಿ ಪಾಲಿಸುವುದು ಬಲು ಕಷ್ಟ. ಪಲಿ ಮಾರು ಮಠಾಧೀಶರು ಉತ್ತರಾಧಿಕಾರಿ ಯನ್ನು ನೇಮಿಸುವ ವಿಷಯದಲ್ಲಿ ಮಾದರಿಯಾಗಿದ್ದಾರೆ ಎಂದು ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ನುಡಿದರು. ಕಾಣಿಯೂರು, ಅದಮಾರು ಕಿರಿಯ, ಪೇಜಾವರ ಕಿರಿಯ, ಸುಬ್ರಹ್ಮಣ್ಯ, ಭೀಮನಕಟ್ಟೆ, ಸೋದೆ ಮಠಾಧೀಶರು ಉಪಸ್ಥಿತರಿದ್ದರು. ವಿದ್ವಾಂಸ ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಹೆಸರಿನ ಹಿಂದೆ
ಶ್ರೀ ವಿದ್ಯಾಧೀಶತೀರ್ಥರು ಶಿಷ್ಯನಿಗೆ ಶ್ರೀ ವಿದ್ಯಾರಾಜೇಶ್ವರತೀರ್ಥರು ಎಂದು ನಾಮಕರಣ ಮಾಡಿದ್ದಾರೆ. ಜನತೆಗೆ ಮಂಗಲವಾಗಲೆಂದು ಹಾರೈಸಿ “ಮಂಗಲಾಷ್ಟಕ’ವನ್ನು ಬರೆದ ಪಲಿಮಾರು ಮಠದ ಆರನೆಯ ಯತಿ ಶ್ರೀ ರಾಜರಾಜೇಶ್ವರತೀರ್ಥರು ಮತ್ತು ಅವರ ಗುರು ಶ್ರೀ ವಿದ್ಯಾಪತಿತೀರ್ಥರ ಹೆಸರುಗಳನ್ನು ಜೋಡಿಸಿ ನೂತನ ಯತಿಯ ನಾಮಕರಣವಾಗಿದೆ. ಇದೇವೇಳೆ ವಿದ್ಯಾಪತಿತೀರ್ಥರ ಆರಾಧನೋತ್ಸವ ರವಿವಾರ ನಡೆಯಿತು.
ವಿವಿಧ ಮಠಾಧೀಶರ ಉಪಸ್ಥಿತಿ
ಸಾಮಾನ್ಯವಾಗಿ ಆಯಾ ಮಠಾಧೀಶರು ಮಾತ್ರ ಉತ್ತರಾಧಿಕಾರಿ ಯನ್ನು ನೇಮಿಸುತ್ತಾರೆ. ಕೆಲವು ಬಾರಿ ದ್ವಂದ್ವ ಮಠದವರು ಪಾಲ್ಗೊಳ್ಳುವು
ದಿದೆ. ಆದರೆ ಈ ಬಾರಿಯ ಕಾರ್ಯಕ್ರಮದಲ್ಲಿ ಪೇಜಾವರ, ಕೃಷ್ಣಾಪುರ, ಅದಮಾರು, ಕಾಣಿಯೂರು, ಸೋದೆ ಮಠಾಧೀಶರಲ್ಲದೆ ಸುಬ್ರಹ್ಮಣ್ಯ, ಭೀಮನಕಟ್ಟೆ ಮಠಾಧೀಶರೂ ಪಾಲ್ಗೊಂಡದ್ದು ವಿಶೇಷವಾಗಿತ್ತು.
ಪೇಜಾವರರ ಸಂಸ್ಕೃತ ಕವಿತ್ವ!
ಪೇಜಾವರ ಶ್ರೀಗಳು ಇದೇ ಸಂದರ್ಭದಲ್ಲಿ “ವಿದ್ಯಾಧೀಶಾಬ್ದಿ ಸಂಭೂತಃ ಕುಮುದಾ ನಂದದಾಯಕಃ| ವಿದ್ಯಾರಾಜೇಶ್ವರೋ ನಾಮ ಗುರುರಾಜೋ ವಿರಾಜತೇ|| ಎಂಬ ಶ್ಲೋಕವನ್ನು ರಚಿಸಿ ವಾಚಿಸಿದರು. ಇದರರ್ಥ “ವಿದ್ಯಾಧೀಶರೆಂಬ ಸಮುದ್ರದಲ್ಲಿ ಅರಳುವ ನೈದಿಲೆಯು ಭೂಮಿಗೆ ಮುದ ನೀಡುವ ಚಂದ್ರನಂತೆ ವಿದ್ಯಾರಾಜೇಶ್ವರ ಹೆಸರಿನ ಗುರುಗಳು ಶೋಭಿಸಲಿ’.
ಅಭಿಜಿನ್ ಮುಹೂರ್ತದಲ್ಲಿ ಪಟ್ಟಾಭಿಷೇಕ
ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಧ್ಯಾಹ್ನ 12.20ಕ್ಕೆ ಅಭಿಜಿನ್ ಮುಹೂರ್ತದಲ್ಲಿ ಮಠದ ಉಪಾಸ್ಯಮೂರ್ತಿ, ಸಾಲಿಗ್ರಾಮಗಳನ್ನು ಹರಿವಾಣದಲ್ಲಿರಿಸಿ ಶಿರದ ಮೇಲಿನಿಂದ ಅಭಿಷೇಕ ಮಾಡುವ ಮೂಲಕ ಉತ್ತರಾಧಿಕಾರಿಯನ್ನು ನೇಮಿಸಿದರು. ವೇದ, ಗೀತೆ, ಭಾಗವತಾದಿಗಳ ಪಾರಾಯಣ ನಡೆಯಿತು. ಲಕ್ಷ್ಮೀ ಶೋಭಾನೆ, “ಮಂಗಲ ಭಾರತ ನಿರ್ಮಾಣ’ ಪರಿಕಲ್ಪನೆಯಡಿ “ಮಂಗಲಾಷ್ಟಕ’ ಪಠಿಸಲಾಯಿತು.
49 ವರ್ಷಗಳ ಬಳಿಕ ಸರ್ವಜ್ಞ ಪೀಠದಿಂದ…
1925ರಲ್ಲಿ ಶ್ರೀ ಅದಮಾರು ಮಠದ ಶ್ರೀ ವಿಬುಧಪ್ರಿಯತೀರ್ಥರು ಪರ್ಯಾಯ ಪೀಠಸ್ಥರಾಗಿದ್ದಾಗ ಶ್ರೀ ಭಂಡಾರಕೇರಿ ಮಠಕ್ಕೆ ಶ್ರೀ ವಿದ್ಯಾಮಾನ್ಯತೀರ್ಥರನ್ನು ನೇಮಿಸಿದ್ದರು. ಆ ಬಳಿಕ 1972ರಲ್ಲಿ ಅದಮಾರು ಮಠದ ಶ್ರೀ ವಿಬುಧೇಶತೀರ್ಥರು ಪರ್ಯಾಯ ಪೂಜೆಯಲ್ಲಿದ್ದಾಗ ಶ್ರೀ ವಿಶ್ವಪ್ರಿಯತೀರ್ಥರನ್ನು ಉತ್ತರಾಧಿಕಾರಿಯಾಗಿ ನೇಮಿಸಿದರು. ಅನಂತರ ಇದೇ ಪ್ರಥಮ ಬಾರಿಗೆ 49 ವರ್ಷಗಳ ಬಳಿಕ ಪರ್ಯಾಯ ಪೀಠದಲ್ಲಿದ್ದು, ಉತ್ತರಾಧಿಕಾರಿಯ ನಿಯೋಜನೆಯಾಗಿದೆ. ಇದನ್ನು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ನಡೆಸಿದ್ದಾರೆ.
ಉತ್ತಮ ಸಮಾಜವನ್ನು ನಿರ್ಮಿಸುವವರು ಗುರುಗಳು. ನೂತನ ಯತಿಗಳಲ್ಲಿ ಹಿಂದಿನ ಎಲ್ಲ ಯತಿಗಳ ಸನ್ನಿಧಾನವಿದ್ದು ಸಮಾಜವನ್ನು ನಿರ್ಮಾಣ ಮಾಡಲಿ.
ಪಲಿಮಾರು, ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು
ಹಿಂದಿನಿಂದಲೂ ದೇವರ ಪೂಜೆಯಲ್ಲಿ ವಿಶೇಷ ಆಸಕ್ತಿ ಇತ್ತು.
ಈ ಕಾರಣದಿಂದಲೇ ಗುರುಗಳು ಮತ್ತು ದೇವರ ಅನುಗ್ರಹದಿಂದ ಹೃಷೀಕೇಶ ತೀರ್ಥರ ಪರಂಪರೆಯಲ್ಲಿ ಸನ್ಯಾಸಿಯಾಗುವ ಭಾಗ್ಯ ಲಭಿಸಿದೆ. ಶ್ರೀಕೃಷ್ಣನ ಉಪಾಸನೆಯಿಂದ ದುರ್ಲಭವಾದುದೂ ಜೀವನದಲ್ಲಿ ಪ್ರಾಪ್ತಿಯಾಗುತ್ತದೆ.
– ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಶ್ರೀ ಪಲಿಮಾರು ಕಿರಿಯ ಪಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು