ಖ್ಯಾತ ಜ್ಯೋತಿಷ್ಯ ತಜ್ಞ, ಉದಯವಾಣಿ ಅಂಕಣಕಾರ ಎನ್.ಎಸ್ ಭಟ್ ಇನ್ನಿಲ್ಲ
Team Udayavani, Jun 13, 2021, 12:59 PM IST
ಮಣಿಪಾಲ: ಜ್ಯೋತಿಷ್ಯ ಶಾಸ್ತ್ರ ತಜ್ಞ, ಉದಯವಾಣಿ-ತರಂಗ ಪತ್ರಿಕೆಗಳ ದಿನಭವಿಷ್ಯ- ವಾರಭವಿಷ್ಯ ಅಂಕಣಕಾರ ಎನ್.ಎಸ್.ಭಟ್ ಅವರು ಶನಿವಾರ ರಾತ್ರಿ ನಿಧನ ಹೊಂದಿದರು.
77 ವರ್ಷ ಪ್ರಾಯದ ಎನ್.ಎಸ್.ಭಟ್ ಅವರು ವಯೋಸಹಜ ಅನಾರೋಗ್ಯದ ಕಾರಣದಿಂದ ಶನಿವಾರ ರಾತ್ರಿ ಅಸುನೀಗಿದರು.
ಇದನ್ನೂ ಓದಿ:ದೇಶದಲ್ಲಿ 80,834 ಹೊಸ ಕೋವಿಡ್ ಪ್ರಕರಣಗಳು ಪತ್ತೆ: ಇಳಿಕೆಯಾಗುತ್ತಿದೆ ಸಕ್ರಿಯ ಪ್ರಕರಣಗಳು
ಎನ್.ಎಸ್.ಭಟ್ ಅವರು ಅಂಕಣಕಾರರಾಗಿ, ರೇಖಾಚಿತ್ರ/ವರ್ಣಚಿತ್ರ ಕಲಾವಿದರಾಗಿ ಪ್ರಸಿದ್ದರಾದವರು. ಕುಂದಾಪುರ ಮೂಲದ ಅರ್ಚಕ ಕುಟುಂಬದ ಸದಸ್ಯರಾದ ಎನ್.ಎಸ್.ಭಟ್ ಅವರು, ಮುಂಬೈನ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಯಲ್ಲಿ ಪದವಿ ಪಡೆದಿದ್ದರು. ಮುಂಬೈನಲ್ಲಿ ಹಲವು ವರ್ಷಗಳ ಕಾಲ ಚಿತ್ರ ಕಲಾವಿದರಾಗಿ ದುಡಿದಿದ್ದರು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾವಿಣ್ಯತೆ ಪಡೆದಿದ್ದ ಅವರು ಕಳೆದ ಹಲವು ದಶಕಗಳಿಂದ ಉದಯವಾಣಿ ದಿನಪತ್ರಿಕೆ, ತರಂಗ ವಾರಪತ್ರಿಕೆ, ಯುಗಾದಿ- ದೀಪಾವಳಿ ವಿಶೇಷಾಂಕಗಳಿಗೆ ದಿನ ಭವಿಷ್ಯ, ವಾರಭವಿಷ್ಯ, ವರ್ಷ ಭವಿಷ್ಯ ಅಂಕಣಕಾರರಾಗಿ ಜನಪ್ರೀಯತೆ ಪಡೆದಿದ್ದರು.