ಬಡಗುತಿಟ್ಟಿನ ಪ್ರತಿಭಾನ್ವಿತ ಬಾಗವತ ನಗರ ಸುಬ್ರಹ್ಮಣ್ಯ ಆಚಾರ್ ನಿಧನ
Team Udayavani, Jan 7, 2020, 4:27 PM IST
ಮಂಗಳೂರು: ಬಡಗುತಿಟ್ಟಿನ ಪ್ರತಿಭಾವಂತ ಭಾಗವತರಲ್ಲಿ ಒಬ್ಬರಾಗಿದ್ದ ನಗರ ಸುಬ್ರಹ್ಮಣ್ಯ ಆಚಾರ್ ಮಂಗಳೂರಿನ ಕುಲಶೇಖರದಲ್ಲಿ ಇಂದು ನಿಧನ ಹೊಂದಿದ್ದಾರೆ. ಸುಬ್ರಹ್ಮಣ್ಯ ಆಚಾರ್ ಅವರು ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು.
ಉಡುಪಿಯ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿದ್ದ ನಗರ ಅವರು ಬಡಗು ಯಕ್ಷರಂಗದಲ್ಲಿ ನಡುತಿಟ್ಟಿನ ಭಾಗವತಿಕೆ ಪರಂಪರೆಯ ಪ್ರಮುಖ ಕೊಂಡಿಯಾಗಿ ಗುರುತಿಸಿಕೊಂಡಿದ್ದರು. ‘ನಡುಮನೆ ಯಕ್ಷಗಾನ’ ಎಂಬ ವಿನೂತನ ಪರಿಕಲ್ಪನೆಯಡಿಯಲ್ಲಿ ನಗರ ಸುಬ್ರಹ್ಮಣ್ಯ ಆಚಾರ್ ಅವರ ತಂಡ ನಡೆಸಿಕೊಡುತ್ತಿದ್ದ ಮೂರು ಗಂಟೆಗಳ ಯಕ್ಷಗಾಯನ-ನಾಟ್ಯ ಕಾರ್ಯಕ್ರಮ ಯಕ್ಷಗಾನ ಪ್ರಿಯರ ಮನ ಗೆದ್ದಿತ್ತು.
‘ನಡುಮನೆ ಯಕ್ಷಗಾನ’ ಇದುವರೆಗೆ ಸುಮಾರು 800ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿದೆ. ಯಕ್ಷಗಾನಾಸಕ್ತರ ಮನೆಗಳಿಗೆ ತೆರಳಿ ಅವರ ದೇವರಮನೆಯಲ್ಲಿ ಪ್ರಾರ್ಥಿಸಿ ಬಳಿಕ ರಾಮಾಯಣ, ಮಹಾಭಾರತ ಪ್ರಸಂಗಗಳಿಂದ ಆಯ್ದ ಪದ್ಯಗಳನ್ನು ಹಾಡಿ ಪ್ರೇಕ್ಷಕರಗೆ ಯಕ್ಷಗಾನಾಮೃತದ ಸವಿಯನ್ನು ಉಣಿಸುವ ವಿಶೇಷ ಪ್ರದರ್ಶನ ಇದಾಗಿತ್ತು.
ಮಳೆಗಾಲದಲ್ಲಿ ಸಂಚಾರ ಕಾರ್ಯಕ್ರಮದ ಆರಂಭದಲ್ಲಿ ಅರ್ಧ ಗಂಟೆ ಗಾಯನ ಭಾಗವಾದರೆ, ಇನ್ನುಳಿದ ಎರಡೂವರೆ ಗಂಟೆಯಲ್ಲಿ ಅರ್ಥ ಸಹಿತ ಪ್ರಬುದ್ಧ ಯಕ್ಷಗಾನ ನಡೆಯುತ್ತದೆ. ತಂಡದಲ್ಲಿ ಒಟ್ಟು ಒಂಭತ್ತು ಮಂದಿ ಕಲಾವಿದರು ಇರುತ್ತಿದ್ದರು.