ಸಕಾಲದಲ್ಲಿ ಸಿಗದ ಬಿತ್ತನೆ ಬೀಜ ನೆಲಗಡಲೆ ಕೃಷಿಕರು ಕಂಗಾಲು
Team Udayavani, Nov 24, 2020, 1:52 PM IST
ಕುಂದಾಪುರ, ನ. 23: ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ನೆಲಗಡಲೆ (ಶೇಂಗಾ) ಕೃಷಿಯನ್ನು ಉಡುಪಿ ಜಿಲ್ಲೆಯ ಕರಾವಳಿ ತೀರದ ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆಯುತ್ತಿದ್ದು, ಈ ಬಾರಿ ಸಕಾಲದಲ್ಲಿ ಬಿತ್ತನೆ ಬೀಜ ಲಭ್ಯವಾಗದೆ ಸಂಕಷ್ಟಕ್ಕೀಡಾಗಿದ್ದಾರೆ.
ಜಿಲ್ಲೆಯ ಕುಂದಾಪುರ, ಬೈಂದೂರು, ಕೋಟ ವ್ಯಾಪ್ತಿಯ 18,000 ಹೆಕ್ಟೇರ್ ಪ್ರದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ರೈತರು ನೆಲಗಡಲೆ ಬೆಳೆಯುತ್ತಾರೆ. ಕೆಲವು ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಅಲ್ಪ ಪ್ರಮಾಣದಲ್ಲಿ ಪೂರೈಕೆಯಾಗಿದ್ದು, ಕೆಲವು ಕೇಂದ್ರಗಳಿಗೆ ಇನ್ನೂ ಬಂದಿಲ್ಲ.
ಬೇಗ ಬೆಳೆಯುವ ತಳಿ ಬೇಕು :
ಈ ಪ್ರದೇಶದಲ್ಲಿ ಉಪ್ಪುನೀರಿನ ಪ್ರಭಾವ ಹೆಚ್ಚಾಗಿರುವುದರಿಂದ ಕಡಿಮೆ ತೇವಾಂಶ ಹಾಗೂ ಕಡಿಮೆ ದಿನಗಳಲ್ಲಿ ಬೆಳೆಯುವ ಬೀಜದ ಅಗತ್ಯವಿದೆ. 120 ಹಾಗೂ 90 ದಿನಗಳಲ್ಲಿ ಬೆಳೆಯುವ 2 ತಳಿಗಳಿದ್ದು ಶೇ. 60ರಷ್ಟು ಜವಾರಿ (90 ದಿನಗಳದ್ದು) ಬೀಜ ಬೇಕಿದ್ದರೆ, ಶೇ. 40ರಷ್ಟು ಮಾತ್ರ ಜಿಪಿಬಿಡಿ-4 (120 ದಿನಗಳದ್ದು) ಅಗತ್ಯವಿದೆ. ಆದರೆ ಇಲ್ಲಿಗೆ 120 ದಿನಗಳಲ್ಲಿ ಬೆಳೆಯುವ ಜಿಪಿಬಿಡಿ-4 ತಳಿಯ ಬೀಜವನ್ನೇ ಹೆಚ್ಚಾಗಿ ಪೂರೈಕೆ ಮಾಡುತ್ತಾರೆ ಎನ್ನುವುದು ರೈತರ ಆರೋಪ.
ಹೊರಗೆ ದುಬಾರಿ ದರ :
ರೈತ ಸಂಪರ್ಕ ಕೇಂದ್ರದಲ್ಲಿ ಒಂದು ಕೆ.ಜಿ. ಬೀಜಕ್ಕೆ 70 ರೂ. ಇದ್ದು ರೈತರಿಗೆ ಈ ಬಾರಿ ಸಬ್ಸಿಡಿ ದರದಲ್ಲಿ 54 ರೂ. ನಿಗದಿಪಡಿಸಲಾಗಿದೆ. ಅದೇ ಖಾಸಗಿ ಅಥವಾ ಬೇರೆ ಕಡೆಯಿಂದ ತರಿಸುವುದಾದರೆ 60ರಿಂದ 70 ರೂ. ವರೆಗೂ ಇದೆ. ಕುಂದಾಪುರ ರೈತಸಂಪರ್ಕ ಕೇಂದ್ರಕ್ಕೆ 50 ಕ್ವಿಂಟಾಲ್ ಟಿಎಂವಿ – 2 ಬೀಜ ತರಿಸಲಾಗಿದೆ. ಬೈಂದೂರಲ್ಲಿ 300 ಕ್ವಿಂಟಾಲ್ ಬೇಡಿಕೆಯಿದ್ದು, ಈಗ 80 ಕ್ವಿಂಟಾಲ್ ಜಿಪಿಬಿಡಿ-4 ತರಿಸಲಾಗಿದೆ.
ದ್ವಿದಳ ಧಾನ್ಯ ದಾಸ್ತಾನು :
ಉಡುಪಿ ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ ನೆಲಗಡಲೆ ಹೊರತುಪಡಿಸಿ ಉದ್ದು, ಹೆಸರು ಬೆಳೆಯಲಾಗುತ್ತಿದ್ದು, ಅವುಗಳನ್ನು ಈಗಾಗಲೇ ಮಂಡ್ಯದಿಂದ ಅಗತ್ಯವಿರುವಷ್ಟು ತರಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯವಿರುವಷ್ಟು ಪೂರೈಕ : ಈ ಬಾರಿ ಜಿಲ್ಲೆಯಿಂದ 650 ಕ್ವಿಂಟಾಲ್ ನೆಲಗಡಲೆ ಬೀಜಕ್ಕೆ ಬೇಡಿಕೆ ಕಳುಹಿಸಲಾಗಿದೆ. ಕೋಟ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯವಿರುವಷ್ಟು ತರಿಸಲಾಗಿದೆ. ಕುಂದಾಪುರ, ಬೈಂದೂರಿಗೂ ಬಂದಿದ್ದು, ರೈತರಿಗೆ ಕೂಡಲೇ ವಿತರಿಸಲಾಗುವುದು. ಅಗತ್ಯವಿರುವಷ್ಟನ್ನೂ ಪೂರೈಸಲಾಗುವುದು. – ಎಚ್. ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ
ಹೊರಗಡೆಯಿಂದ ಖರೀದಿ : ನನಗೆ ವರ್ಷಕ್ಕೆ ಒಂದು ಕ್ವಿಂಟಾಲ್ ವರೆಗೆ ಬೀಜದ ಅಗತ್ಯವಿದೆ. ಆದರೆ ಗದ್ದೆಯ ತೇವಾಂಶ ಕಡಿಮೆಯಾಗು ತ್ತಿರುವ ಕಡೆಗಳಲ್ಲಿ ಬಿತ್ತನೆ ಮಾಡಲು ತುರ್ತಾಗಿ 40 ಕೆ.ಜಿ. ಅಗತ್ಯವಿತ್ತು. ಇಲಾಖೆಯಲ್ಲಿ ಕೇಳಿದಾಗ ಒಂದೆರಡು ದಿನ ಆಗಬಹುದು ಎಂದರು. ಹಾಗಾಗಿ ಹೊರಗಿನಿಂದ ಕೆ.ಜಿ.ಗೆ 60 ರೂ. ಕೊಟ್ಟು ತರಿಸಿದ್ದೇನೆ. – ಶೀನ, ಹೇರಂಜಾಲು, ನೆಲಗಡಲೆ ಕೃಷಿಕ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444