ಫೆ. 15: ಹೆದ್ದಾರಿ ಕಾಮಗಾರಿ ವೀಕ್ಷಣೆಗೆ ಕೇಂದ್ರದ ತಂಡ
Team Udayavani, Feb 5, 2019, 12:30 AM IST
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಮಂಗಳೂರಿನಿಂದ ಗೋವಾ ಗಡಿ ವರೆಗೆ ಪರಿಶೀಲನೆಗೆ ಫೆ. 15ರಂದು ತಂಡವೊಂದನ್ನು ಕಳುಹಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಪಂಚಾಯತ್ರಾಜ್ ಸಚಿವ ಆರ್.ವಿ. ದೇಶಪಾಂಡೆ ಅವರು ಸೋಮವಾರ ದಿಲ್ಲಿಯಲ್ಲಿ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಹೆದ್ದಾರಿ ಕಾಮಗಾರಿಗೆ ವೇಗ ನೀಡುವಂತೆ ಆಗ್ರಹಿಸಿದರು. ತಂಡದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾಂಗೆ ಹಾಗೂ ಇತರ ಅಧಿಕಾರಿಗಳು ಇರಲಿದ್ದು, ಸಾರ್ವಜನಿಕರು ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಬಗ್ಗೆ ವಿವರಿಸಬಹುದು ಎಂದು ಹೇಳಿದ್ದಾರೆ ಎಂದು ದೇಶಪಾಂಡೆ ‘ಉದಯವಾಣಿ’ಗೆ ತಿಳಿಸಿದರು.
ಮಂಗಳೂರು-ಪಣಜಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರಿಂದ 189 ಕಿ.ಮೀ. ದೂರ ವರೆಗೆ ಕಾಮಗಾರಿ ನಡೆಯುತ್ತಿದ್ದು ಸುರಕ್ಷತೆಗೆ ಆದ್ಯತೆ ನೀಡಿ ಕಾಮಗಾರಿಯನ್ನು ಪೂರೈಸಬೇಕಿದೆ. ಆದರೆ ಈಗ ನಡೆದ ಕಾಮಗಾರಿಯಲ್ಲಿ ಅಂತಹ ಸುರಕ್ಷೆ ಕಂಡುಬರುತ್ತಿಲ್ಲ. ಅನೇಕ ಕಡೆ ಹೆಚ್ಚುವರಿಯಾಗಿ ಅಂಡರ್ಪಾಸ್ ಹಾಗೂ ಮೇಲ್ಸೇತುವೆಗಳು ರಚನೆಯಾಗಬೇಕಿವೆ. ಸರ್ವಿಸ್ ರಸ್ತೆ ಕಾಮಗಾರಿ ಕೂಡ ಸಮರ್ಪಕವಾಗಿ ನಡೆದಿಲ್ಲ. ಹೆಚ್ಚಿನ ಕಡೆ ರಸ್ತೆಯನ್ನು ಎತ್ತರಿಸಲಾಗಿದ್ದು ಮಕ್ಕಳಿಗೆ ರಸ್ತೆ ದಾಟಲು ತೊಂದರೆಯಾಗುತ್ತಿದೆ. ಅಂತೆಯೇ ಹೆದ್ದಾರಿಗೆ ಪ್ರವೇಶವೇ ಆಗದಂತೆ ಮಾಡಿದ ಕಾರಣ ಸ್ಥಳೀಯ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇದೆಲ್ಲವನ್ನು ಸರಿಪಡಿಸಿ ಸಾರ್ವಜನಿಕರ ಬೇಡಿಕೆಯಂತೆ ಹೆಚ್ಚುವರಿ ಕಾಮಗಾರಿಗೆ ಸೇರ್ಪಡೆ ನಡೆಸುವಂತೆ ವಿನಂತಿಸಿದ್ದೇನೆ ಎಂದರು.