ಬೀಜಾಡಿ: ಅಗ್ನಿ ಆಕಸ್ಮಿಕದಲ್ಲಿ ಸುಟ್ಟು ಹೋದ ಜೀವನಾಶ್ರಯಕ್ಕಿದ್ದ ಮನೆ
Team Udayavani, Dec 17, 2019, 1:39 PM IST
ಕೋಟೇಶ್ವರ: ಅಗ್ನಿ ಆಕಸ್ಮಿಕದಿಂದಾಗಿ ಮನೆ ಸಪೂರ್ಣ ಸುಟ್ಟು ಕರಕಲಾದ ಘಟನೆ ಬೀಜಾಡಿ ಗ್ರಾಮದ ದೊಡ್ಡೋಣಿಯಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಶಂಕರ್ ಆಚಾರ್ಯ ಎಂಬ ಮನೆ ಅಗ್ನಿ ಅನಾಹುತದಲ್ಲಿ ಸಂಪೂರ್ಣ ಸುಟ್ಟು ಹೋಗಿದೆ.
ಇಂದು ಮುಂಜಾನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿರುವ ಕಾರಣ ಹೆಚ್ಚಿನ ಅನಾಹುತ ತಪ್ಪಿಹೋಗಿದೆ.
ಶಂಕರ ಆಚಾರ್ಯರ ಪತ್ನಿ ಮನೆಯ ಸಮೀಪದಲ್ಲಿ ಕೆಲಸದಲ್ಲಿದ್ದು, ಬೆಂಕಿ ಕಂಡು ಓಡಿ ಬಂದಾಗ ಬೆಂಕಿಯ ಕಿಡಿ ತಾಗಿ ಸಣ್ಣ ಪುಟ್ಟ ಗಾಯವಾಗಿದೆ.
ಬಡ ಕುಟುಂಬದ ಶಂಕರ್ ಆಚಾರ್ಯ ಅವರು ಕೂಲಿ ಕೆಲಸ ಮಾಡಿ ವಾಸಿಸುತ್ತಿದ್ದರು. ಜೀವನಾಶ್ರಯಕ್ಕಿದ್ದ ಮನೆ ಸಂಪೂರ್ಣ ಸುಟ್ಟು ಹೋಗಿರುವುದು ಅವರನ್ನು ಚಿಂತೆ ಗೀಡು ಮಾಡಿದೆ.
ಸ್ಥಳಕ್ಕೆ ಕುಂದಾಪುರ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಸ್ಥಳೀಯರು ಕೂಡಾ ಬೆಂಕಿ ನಂದಿಸುವ ಕಾರ್ಯದಲ್ಲಿ ಪಾಲ್ಗೊಂಡರು.