ಕಾರ್ಕಳ ಮಾದರಿ ಕ್ಷೇತ್ರವಾಗಿ ನಿರ್ಮಾಣ: ಸುನಿಲ್
Team Udayavani, Jun 8, 2018, 6:35 AM IST
ಅಜೆಕಾರು: ಅಭಿವೃದ್ಧಿ ಮತ್ತು ಹಿಂದುತ್ವವನ್ನು ಮೂಲಮಂತ್ರವಾಗಿಸಿಕೊಂಡು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಹೊಸ್ಮಾರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಕಳ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಅಂತರ್ಜಲವೃದ್ಧಿ ಸೇರಿದಂತೆ ಜನತೆಯ ಮೂಲ ಅವಶ್ಯಕತೆಗಳಿಗೆ ಈಗಾಗಲೇ ಆದ್ಯತೆ ನೀಡಲಾಗಿದ್ದು ಜನತೆ ಅಭಿವೃದ್ಧಿಗೆ ಈ ಬಾರಿಯ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಿ ಭಾರಿ ಅಂತರದಿಂದ ಜಯ ಗಳಿಸುವಂತೆ ಮಾಡಿದ್ದಾರೆ. ಜನತೆಯ ಆಶಯದಂತೆ ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸುನಿಲ್ ಕುಮಾರ್ ಹೇಳಿದರು.
ಅಧ್ಯಕ್ಷತೆಯನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ ವಹಿಸಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.ಬಿಜೆಪಿ ಕಾರ್ಯಕರ್ತರು ಶಾಸಕ ಸುನಿಲ್ ಕುಮಾರ್ರಿಗೆ ಪುಸ್ತಕಗಳನ್ನು ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಈ ಪುಸ್ತಕಗಳನ್ನು ಅರ್ಹ ಬಡ ಮಕ್ಕಳಿಗೆ ಸಭೆಯಲ್ಲಿ ವಿತರಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ ರಾವ್, ಜಿ.ಪಂ. ಸದಸ್ಯೆ ದಿವ್ಯಾ ಗಿರೀಶ್ ಅಮೀನ್, ತಾ.ಪಂ. ಸದಸ್ಯೆ ಮಂಜುಳಾ, ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ಮಾಪಾಲು ಜಯವರ್ಮ ಜೈನ್, ಉದ್ಯಮಿ ವಸಂತ್ ಭಟ್, ಈದು ಮುಜಿಲಾ°ಯ ದೈವಸ್ಥಾನದ ಮೊಕ್ತೇಸರರಾದ ಅಶೋಕ್ ಕುಮಾರ್ ಜೈನ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಸೋಜನ್ ಜೆ. ಜೇಮ್ಸ್, ಗ್ರಾ.ಪಂ. ಉಪಾಧ್ಯಕ್ಷರಾದ ಪದ್ಮಪ್ರಿಯ ಜೈನ್, ಪಂಚಾಯತ್ ಸಮಿತಿಯ ಯುವಮೋರ್ಚಾ ಅಧ್ಯಕ್ಷರಾದ ಪ್ರಶಾಂತ್ ಚಿತ್ತಾರ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರಿಂದ ಹೊಸ್ಮಾರು ಪೇಟೆಯಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು. ಎಂ.ಕೆ. ಅಶೋಕ್ ಮತ್ತು ಸತೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಗೌಡ ಸ್ವಾಗತಿಸಿದರು.