ಗಂಗೊಳ್ಳಿ: ಮೀನು ಹರಾಜು ಪ್ರಾಂಗಣದ ಪಿಲ್ಲರ್ನಲ್ಲಿ ಬಿರುಕು!
Team Udayavani, Jun 22, 2019, 10:00 AM IST
ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿರುವ ಎರಡನೇ ಹರಾಜು ಪ್ರಾಂಗಣದ ಕಟ್ಟಡದ ಪಿಲ್ಲರ್ ಬಿರುಕು ಬಿಟ್ಟಿದ್ದು, ಭವಿಷ್ಯದಲ್ಲಿ ಇನ್ನಷ್ಟು ಅಪಾಯ ತಂದೊಡ್ಡುವ ಭೀತಿ ಎದುರಾಗಿದೆ.
ಕಳೆದ ಅಕ್ಟೋಬರ್ ಹಾಗೂ ಡಿಸೆಂಬರ್ನಲ್ಲಿ ಇಲ್ಲಿನ ಬಂದರಿನ ಎರಡನೇ ಹರಾಜು ಪ್ರಾಂಗಣದ ಬಳಿಯ ಜೆಟ್ಟಿಯ ಸ್ಲಾಬ್ ಕುಸಿದಿತ್ತು. ಇದರಿಂದ ಈಗ ಇಲ್ಲಿನ ಹರಾಜು ಪ್ರಾಂಗಣದ ಕಟ್ಟಡದ ಪಿಲ್ಲರ್ಗಳಿಗೂ ಅಪಾಯ ಎದುರಾಗಿದ್ದು, ಒಂದೊಂದೇ ಪಿಲ್ಲರ್ಗಳು ಬಿರುಕು ಬಿಡಲು ಆರಂಭಿಸಿವೆ.
ಇನ್ನು ಈ ಹಿಂದೆ ಕುಸಿದ ಸ್ಲಾಬ್ ದುರಸ್ತಿಗೆ ಇಲ್ಲಿನ ಮೀನುಗಾರರ ಬೇಡಿಕೆಯಂತೆ, ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಮನವಿ ಮೇರೆಗೆ ಇತ್ತೀಚೆಗಷ್ಟೇ ರಾಜ್ಯ ಸರಕಾರವು 1.98 ಕೋ.ರೂ. ಅನುದಾನ ಮಂಜೂರು ಮಾಡಿದೆ. ಆದರೆ ಆ ಕಾಮಗಾರಿ ಮಳೆಗಾಲ ಮುಗಿದ ಬಳಿಕವಷ್ಟೇ ಆರಂಭವಾಗುವ ಸಾಧ್ಯತೆಗಳಿವೆ.
ಈಗ ಯಾಂತ್ರೀಕೃತ ಮೀನುಗಾರಿಕೆಗೆ ರಜೆಯಿದ್ದು, ಹಾಗಾಗಿ ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಆದರೆ ಆಗಸ್ಟ್ನಲ್ಲಿ ಮತ್ತೆ ಮೀನುಗಾರಿಕಾ ಋತು ಆರಂಭವಾಗಲಿದ್ದು, ಅದಕ್ಕೂ ಮೊದಲು ದುರಸ್ತಿ ಮಾಡದಿದ್ದರೆ ಈ ಜಾಗದಲ್ಲಿ ಮೀನುಗಾರಿಕಾ ಚಟುವಟಿಕೆ ನಡೆಸಲು ಕಷ್ಟವಾಗಬಹುದು ಎನ್ನುವ ಆತಂಕ ಮೀನುಗಾರರದ್ದು.