ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ, ಶಾಲಾ ಕಟ್ಟಡ ದುರಸ್ತಿ, ಬೀದಿ ನಾಯಿ ಉಪಟಳ: ಚರ್ಚೆ
ಗಂಗೊಳ್ಳಿ: ಕೆಡಿಪಿ ಸಭೆ
Team Udayavani, Aug 3, 2019, 5:16 AM IST
ಕುಂದಾಪುರ: ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ, ಶಾಲಾ ಕಟ್ಟಡಗಳ ದುರಸ್ತಿ, ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ ವಿತರಣೆ ಸಮಸ್ಯೆ, ಬೀದಿ ನಾಯಿ ಉಪಟಳ ನಿಯಂತ್ರಣ, ಮೆಸ್ಕಾಂ ವಿದ್ಯುತ್ ಕೇಂದ್ರದಲ್ಲಿ 24×7 ಸೇವೆ ನೀಡುವ ಬಗ್ಗೆ, ಗ್ರಾ.ಪಂ.ನಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸುವ ವಿಚಾರದ ಕುರಿತು ಗಂಗೊಳ್ಳಿ ಗ್ರಾ.ಪಂ. ಸಭಾಭವನದಲ್ಲಿ ಆ.1ರಂದು ಜರಗಿದ ಗಂಗೊಳ್ಳಿ ಗ್ರಾ.ಪಂ.ನ ಪ್ರಥಮ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಚರ್ಚಿಸಲಾಯಿತು.
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆಯಿಂದಾಗಿ ರೋಗಿಗಳಿಗೆ ಸೇವೆ ನೀಡಲು ತೊಂದರೆಯಾಗುತ್ತಿದೆ. ಗಂಗೊಳ್ಳಿಯಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸರಕಾರದ 108 ಆ್ಯಂಬುಲೆನ್ಸ್ ಆರೋಗ್ಯ ಕೇಂದ್ರದ ಸಮೀಪದಲ್ಲಿ ನಿಲ್ಲುವಂತೆ ವ್ಯವಸ್ಥೆ ಮಾಡಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ ಸೂಚಿಸಿದರು.
ಗಂಗೊಳ್ಳಿಯ ಖಾರ್ವಿಕೇರಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಿಟಕಿ ಬಾಗಿಲು ಮತ್ತು ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ, ಕಿಟಕಿ ದುರಸ್ತಿ ಬಗ್ಗೆ ಮುಖ್ಯೋಪಾಧ್ಯಾಯಿನಿ ಸುಜಾತಾ ಕೆ. ಗಮನ ಸೆಳೆದರು.
ಗಂಗೊಳ್ಳಿಯಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿರುವುದರಿಂದ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಅಥವಾ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಕ್ರಮಕೈಗೊಳ್ಳುವಂತೆ ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು. ಗಂಗೊಳ್ಳಿಯಲ್ಲಿ ಮೆಸ್ಕಾಂನ 24×7 ಸೇವಾ ಕೇಂದ್ರ ಆರಂಭಿಸಲು ಕೆಲವೆಡೆ ದುರ್ಬಲಗೊಂಡ ವಿದ್ಯುತ್ ತಂತಿಗಳನ್ನು ಬದಲಾಯಿಸಲು ಕ್ರಮಕೈಗೊಳ್ಳುವಂತೆ ಮೆಸ್ಕಾಂ ಶಾಖಾಧಿಕಾರಿಗೆ ಸೂಚಿಸಿ ದರು. ಗಂಗೊಳ್ಳಿಯಲ್ಲಿರುವ ಮೆಸ್ಕಾಂ ವಿದ್ಯುತ್ ಉಪಕೇಂದ್ರಕ್ಕೆ ಪಂಚಾಯತ್ ತೆರಿಗೆ ವಿಧಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.
94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಲೈಟ್ಹೌಸ್, ಬೇಲಿಕೇರಿ ಹಾಗೂ ಮ್ಯಾಂಗನೀಸ್ ರಸ್ತೆ ನಿವಾಸಿಗಳ ಸ್ಥಳ ತನಿಖೆ ನಡೆದಿದ್ದು, ಬೇಲಿಕೇರಿಯಲ್ಲಿ ಸಿಆರ್ಝಡ್ ಸಮಸ್ಯೆಯಿಂದ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ. ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಸಿದ ಅರ್ಜಿ ಪರಿಶೀಲಿಸಲಾಗುತ್ತಿದೆ ಎಂದು ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ ಸಭೆಯ ಗಮನಕ್ಕೆ ತಂದರು. ಹೊಸ ಆಧಾರ ಕಾರ್ಡ್ ನೊಂದಣಿ ಹಾಗೂ ಆಧಾರ್ ಕಾರ್ಡ್ ತಿದ್ದುಪಡಿಗೆ ಗ್ರಾ.ಪಂ. ಕಚೇರಿಯಲ್ಲಿ ಅವಕಾಶ ಕಲ್ಪಿಸಬೇಕೆಂಬ ಆಗ್ರಹ ಕೇಳಿ ಬಂದಿತು.
ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರಾಜ್ಕಿರಣ್, ಪಿಡಿಒ ಚಂದ್ರಶೇಖರ್, ಮುಖ್ಯೋಪಾಧ್ಯಾಯಿನಿ ಸುಜಾತಾ ಕೆ., ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಮೆಸ್ಕಾಂ ಶಾಖಾಧಿಕಾರಿ ರಾಘವೇಂದ್ರ ಶೇರುಗಾರ್, ಪಶು ಇಲಾಖೆಯ ರಾಘವೇಂದ್ರ ಶೆಟ್ಟಿ, ಕೃಷಿ ಅಧಿಕಾರಿ ಮಮತಾ, ಆರೋಗ್ಯ ಸಹಾಯಕಿ ಪ್ರಜ್ವಲಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ ಗೌಡ, ಗ್ರಂಥಾಲಯ ಮೇಲ್ವಿಚಾರಕ ಸುನಿಲ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಗ್ರಾಪಂ ಕಾರ್ಯದರ್ಶಿ ಬಿ. ಮಾಧವ ಸ್ವಾಗತಿಸಿ, ಸಿಬಂದಿ ನಾರಾಯಣ ಶ್ಯಾನುಭಾಗ್ ವಂದಿಸಿದರು.
ಕಾಟಾಚರಕ್ಕೆ ಕೆಡಿಪಿ ಸಭೆ
ಸರಕಾರದ ವಿವಿಧ ಇಲಾಖೆಯ ಕಾರ್ಯ ಚಟುವಟಿಕೆಗಳ ಅನುಷ್ಠಾನ ಹಾಗೂ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಲು ಗ್ರಾ.ಪಂ. ಮಟ್ಟದಲ್ಲಿ ಗ್ರಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ
ಅಂಗನವಾಡಿ
ವಿವಿಧ ಸಮಸ್ಯೆ
ಶಾಲೆಗಳಲ್ಲಿ ಎಸ್ಡಿಎಂಸಿ ಸದಸ್ಯರ ವಿವರ ಹಾಗೂ ಸಹಾಯವಾಣಿ ಸಂಖ್ಯೆಯನ್ನು ಬರೆಸಬೇಕೆಂದು ಸೂಚನೆ ನೀಡಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ ಎಂದು ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶೆಟ್ಟಿ ಹೇಳಿದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ವಿತರಿಸಲಾಗುವ ಮೊಟ್ಟೆಗೆ ಸರಕಾರ 5 ರೂ. ನೀಡುತ್ತಿದ್ದು, ಒಂದು ಮೊಟ್ಟೆ ಖರೀದಿಗೆ 6 ರೂ. ವೆಚ್ಚವಾಗುತ್ತಿದೆ. ಇದು ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಟಿಕ ಆಹಾರ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ ಗರ್ಭಿಣಿಯರಿಗೆ ಈ ಹಿಂದಿನಂತೆ ಕಿಟ್ ವಿತರಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್ ಒತ್ತಾಯಿಸಿದರು.