ಗಂಗೊಳ್ಳಿ: ಮಳೆಗಾಲದ ಸಿದ್ಧತೆ ಇನ್ನೂ ಆರಂಭಗೊಂಡಿಲ್ಲ
Team Udayavani, May 21, 2019, 6:10 AM IST
ಗಂಗೊಳ್ಳಿ: ಮಳೆಗಾಲ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರವಿದ್ದು, ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾತ್ರ ಇನ್ನೂ ಅದಕ್ಕೆ ಬೇಕಾದ ಸಿದ್ದತೆಗಳೇ ಆರಂಭಗೊಂಡಿಲ್ಲ. ಚರಂಡಿ ಹೂಳೆತ್ತುವ ಮತ್ತು ರಸ್ತೆ ಬದಿ ಬೆಳೆದಿರುವ ಗಿಡ ಗಂಟಿಗಳ ತೆರವು ಕಾರ್ಯ ಶುರುವಾಗಿಲ್ಲ.
ಗಂಗೊಳ್ಳಿ ಪೇಟೆ ಸಹಿತ ಹೆಚ್ಚಿನ ಒಳ ರಸ್ತೆಗಳಲ್ಲಿ ಮಳೆ ನೀರು ಹರಿದುಹೋಗಲು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಪ್ರತಿ ಬಾರಿಯ ಮುಂಗಾರಿನಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತದೆ. ಈ ಬಾರಿಯೂ ಇರುವಂತಹ ಚರಂಡಿಗಳದ್ದು ಕೂಡ ಹೂಳೆತ್ತುವ ಕಾರ್ಯ ನಡೆದಿಲ್ಲ.
ಪಂಚಾಯತ್ ವ್ಯಾಪ್ತಿಯ ಅರೆಕಲ್ಲು, ವಿಜಯ ವಿಟuಲ ಮಂಟಪದ ಬಳಿ, ಮ್ಯಾಂಗನೀಸ್ ರಸ್ತೆ ಪ್ರದೇಶ, ರಥಬೀದಿ ಸಮೀಪದ ಮುಖ್ಯರಸ್ತೆಯಲ್ಲಿ ಮಳೆಗಾಲದ ಸಂದರ್ಭ ಮಳೆ ನೀರು ಶೇಖರಣೆಗೊಂಡು ಕೃತಕ ನೆರೆ ಉಂಟಾಗುತ್ತದೆ. ಇಲ್ಲಿನ ಬಂದರು ಸಮೀಪದ ಚರಂಡಿಯಲ್ಲಿಯೂ ಹೂಳು, ತ್ಯಾಜ್ಯ ತುಂಬಿದೆ.
ಚರಂಡಿಯಲ್ಲಿ ತುಂಬಿದೆ ಹೂಳು
ಮ್ಯಾಂಗನೀಸ್ ರಸ್ತೆ ಬಳಿಯಿಂದ ಚರ್ಚ್ ರಸ್ತೆ ಮೂಲಕ ಮತ್ತು ಶ್ರೀ ವಿಜಯ ವಿಠಲ ಮಂಟಪದ ಬಳಿಯಿಂದ ಮುಖ್ಯರಸ್ತೆ ಮೂಲಕ ಚರ್ಚ್ ರಸ್ತೆಗೆ ಸಾಗಿ ದುರ್ಗಿಕೇರಿ ಚರಂಡಿಯಲ್ಲಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇದ್ದು, ಈ ಚರಂಡಿಯ ಬಹುಭಾಗ ಅತಿಕ್ರಮಣಗೊಂಡಿದೆ. ಇನ್ನೊಂದೆಡೆ ಚರಂಡಿಯಲ್ಲಿ ಭಾರಿ ಪ್ರಮಾಣದಲ್ಲಿ ಗಿಡಿಗಂಟಿಗಳು ಬೆಳೆದು ನಿಂತಿದ್ದು, ತ್ಯಾಜ್ಯಗಳು ಚರಂಡಿಗಳಲ್ಲಿ ಶೇಖರಣೆಗೊಂಡಿದೆ. ಅರೆಕಲ್ಲು ಪ್ರದೇಶ ಕೂಡ ಇದಕ್ಕೆ ಹೊರತಾಗಿಲ್ಲ. ಚರಂಡಿಯಲ್ಲಿ ಮಣ್ಣು ರಾಶಿ ಹಾಕಲಾಗಿದ್ದು ಮಳೆ ನೀರು ಹರಿದು ಹೋಗಲು ತಡೆಯೊಡ್ಡಲಾಗಿದೆ ಅಲ್ಲದೆ ಚರಂಡಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಹಾಗೂ ಹೂಳು ತುಂಬಿಕೊಂಡಿದ್ದು ಗಿಡಗಂಟಿಗಳು ಬೆಳೆದು ನಿಂತಿದೆ. ದೊಡ್ಡಹಿತ್ಲು ಚರಂಡಿ ಸಂಪೂರ್ಣವಾಗಿ ತ್ಯಾಜ್ಯಗಳಿಂದ ಕೂಡಿದ್ದು ಮಳೆ ನೀರು ಹರಿದು ಹೋಗಲು ಸಾಧ್ಯವಿಲ್ಲದಷ್ಟು ತ್ಯಾಜ್ಯ ತುಂಬಿದೆ.
ಹೂಳೆತ್ತಿ, ಸ್ವತ್ಛತೆ ಕಾರ್ಯ
ಈ ಬಾರಿ ಪಂಚಾಯತ್ ವತಿಯಿಂದ ಪ್ರಮುಖ 5-6 ತೋಡುಗಳ ಹೂಳೆತ್ತಿ, ಸ್ವತ್ಛ ಮಾಡಲು ಸಮೀಕ್ಷೆ ನಡೆಸಲಾಗಿತ್ತು. ಎಂಜಿನಿಯರ್ ಕೂಡ ಈ ಬಗ್ಗೆ ಸರ್ವೇ ನಡೆಸಿದ್ದಾರೆ. ಆದರೆ ಚುನಾವಣಾ ನೀತಿ ಸಂಹಿತೆಯಿಂದಾಗಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಅದು ಮುಗಿದ ಕೂಡಲೇ ಸಭೆ ನಡೆಸಿ, ಮುಂಗಾರಿಗೆ ಬೇಕಾದ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುವುದು.
– ಶ್ರೀನಿವಾಸ ಖಾರ್ವಿ, ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷರು
ಅವಘಡಕ್ಕೆ ಮುನ್ನ ಎಚ್ಚೆತ್ತುಕೊಳ್ಳಲಿ
ಕೃತಕ ನೆರೆಯಿಂದಾಗಿ ಮಳೆಗಾಲದಲ್ಲಿ ಅನಾಹುತ ನಡೆಯುತ್ತದೆ ಎಂದು ಗೊತ್ತಿದ್ದರೂ, ಈಗ ಯಾವುದೇ ಪೂರ್ವಸಿದ್ಧತೆಗಳನ್ನು ಕೈಗೊಳ್ಳುತ್ತಿಲ್ಲ. ಅವಘಢ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಬದಲು ಈಗಿನಿಂದಲೇ ಚರಂಡಿಯಲ್ಲಿರು ಹೂಳೆತ್ತಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಿ. ರಸ್ತೆ ಬದಿ ಬೃಹದಾಕಾರವಾಗಿ ಬೆಳೆದಿರುವ ಗಿಡ, ಬಳ್ಳಿ, ಪೊದೆಗಳನ್ನು ತೆರೆವುಗೊಳಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ