ಪಡಿತರದಲ್ಲಿ ಕಜೆ ಅಕ್ಕಿಯೇ ನೀಡಿ: ಸದಸ್ಯರ ಆಗ್ರಹ
ಉಡುಪಿ ತಾ.ಪಂ. 27ನೇ ಸಾಮಾನ್ಯ ಸಭೆ
Team Udayavani, Jan 28, 2021, 4:00 AM IST
ಉಡುಪಿ: ಪಡಿತರ ಪ್ರಕ್ರಿಯೆಯಲ್ಲಿ ಆನ್ಲೈನ್ ಪದ್ಧತಿಗೆ ಸರ್ವರ್ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದಲ್ಲಿ ವಿಳಂಬವಾಗುತ್ತಿದೆ. ಇದಕ್ಕೆ ಹಿಂದಿನಂತೆ ಮ್ಯಾನುವಲ್ಪದ್ಧತಿ ಅನುಸರಿಸಿಕೊಳ್ಳಬೇಕು. ಇದಕ್ಕೆ ತಾ.ಪಂ. ನಿರ್ಣಯ ತೆಗೆದುಕೊಳ್ಳಬೇಕು. ಜತೆಗೆ ಪಡಿತರದಲ್ಲಿಯೂ ಬಹು ಬೇಡಿಕೆಯ ಕಜೆ ಅಕ್ಕಿ ವಿತರಿಸಬೇಕು ಎಂದು ಸದಸ್ಯ ಧನಂಜಯ ಕುಂದರ್ ಆಗ್ರಹಿಸಿದರು.ಉಡುಪಿ ತಾ.ಪಂ.ನ 27ನೇ ಸಾಮಾನ್ಯ ಸಭೆಯು ಬುಧವಾರ ಅಧ್ಯಕ್ಷೆ ಸಂಧ್ಯಾ ಕಾಮತ್ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ಸಭಾಂಗಣದಲ್ಲಿ ನಡೆಯಿತು.
ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮೋಹನ್ರಾಜ್, ಪಡಿತರ ಆನ್ಲೈನ್ ಪ್ರಕ್ರಿಯೆ ರದ್ದತಿ ಬಗ್ಗೆ ರಾಜ್ಯದ ಎಲ್ಲ ತಾ.ಪಂ.ಗಳು ನಿರ್ಣಯ ತೆಗೆದುಕೊಂಡರಷ್ಟೇ ರದ್ದತಿ ಸಾಧ್ಯ. ಸರ್ವರ್ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗು ವುದು ಎಂದರು.
ಹಕ್ಕಿಜ್ವರ ತಡೆಗೆ ಮುನ್ನೆಚ್ಚರಿಕೆ :
ಪಶುಸಂಗೋಪನಾ ಇಲಾಖೆಯ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಹಕ್ಕಿ ಜ್ವರ ಬಾರದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆ, ತಾಲೂಕು ಮಟ್ಟದಲ್ಲಿ ಪಶುವೈದ್ಯರ ನೇತೃತ್ವದಲ್ಲಿ ತಂಡ ರಚಿಸಿ ತರಬೇತಿ ನೀಡಲಾಗಿದೆ. ಸ್ಥಳೀಯ ವೈದ್ಯರು ಪೌಲಿó ಫಾರಂಗೆ ಭೇಟಿ ನೀಡಿ ಲಕ್ಷಣ ಕಂಡುಬರುವ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದರು.
ಬಗೆಹರಿಯದ ಸಮಸ್ಯೆ :
ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಮಾತನಾಡಿ, ಕೊಡಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಕುದಿ ಗ್ರಾಮದ 5 ಎಕ್ರೆ ಜಾಗವನ್ನು ಜಿಲ್ಲಾಧಿಕಾರಿಯವರ ನಡಾವಳಿಯಂತೆ ಪಹಣಿಯಲ್ಲಿ ಗ್ರಾ.ಪಂ.ಹೆಸರಿಗೆ ಕಾದಿರಿಸಿ ನಿವೇಶನ ರಚನೆ ಯಾಗಿದೆ. ಅಲ್ಲಿ ಮರ ಕಡಿಯಲು ಪಂಚಾಯತ್ನಿಂದ ಪತ್ರ ವ್ಯವಹಾರ ನಡೆಸಿದಾಗ ಡೀಮ್ಡ್ ಫಾರೆಸ್ಟ್ ಎಂದು ಹೇಳಿದ್ದರು. ಆದರೆ ಕುದಿ
ಗ್ರಾಮದ ಡೀಮ್ಡ್ ಫಾರೆಸ್ಟ್ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆಯವರ ಪಟ್ಟಿಯೊಂದಿಗೆ ತಾಳೆ ಮಾಡಿ ನೋಡಬೇಕಾಗಿದೆ. ಅರಣ್ಯ ಇಲಾಖೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದು, ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ರಾಜೀನಾಮೆ :
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಲಕ್ಷ್ಮೀನಾರಾಯಣ ಪ್ರಭು ಅವರು ತಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೂ ಅರಣ್ಯ ಇಲಾಖೆಯ ನಿಲುವಿನ ಬಗ್ಗೆ ಬೇಸರಿಸಿದರು.
ಟೈಲರಿಂಗ್ ಯಂತ್ರ ವಿತರಣೆ :
ತಾಲೂಕಿನ ಗ್ರಾಮೀಣ ಪ್ರದೇಶದ ಪರಿಶಿಷ್ಟ ಪಂಗಡದ ವೃತ್ತಿನಿರತ ಕುಶಲಕರ್ಮಿಗಳಿಗೆ ಸಾಂಕೇತಿಕವಾಗಿ 2 ಮಂದಿ ಫಲಾನುಭವಿಗಳಿಗೆ ವಿದ್ಯುತ್ಚಾಲಿತ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಿಲ್ಪಾ ಆರ್.ಕೋಟ್ಯಾನ್, ಲೆಕ್ಕ ಸಹಾಯಕ ಮೆಲ್ವಿನ್ ಥೋಮಸ್ ಉಪಸ್ಥಿತರಿದ್ದರು.
ಕೋವಿಡ್ ಲಸಿಕೆ ಬಗ್ಗೆ ಹಿಂಜರಿಕೆ ಬೇಡ :
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಬ್ರಹ್ಮಾವರ, ಕುಂದಾಪುರ ಭಾಗದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಉಡುಪಿ ಹಾಗೂ ಕಾಪು ಭಾಗಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕಿದೆ. ಈ ಬಗ್ಗೆ ಯಾವುದೇ ತಪ್ಪು ತಿಳಿವಳಿಕೆಗಳು ಬೇಡ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.ಉಳಿದಂತೆ ಯಾರೂ ಭಯಪಡುವ ಆವಶ್ಯಕತೆಯಿಲ್ಲ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ