“ಎಲ್ಲ ಜಿಲ್ಲೆಗಳಲ್ಲಿಯೂ ಗೋ ಪರಿವಾರ’
Team Udayavani, Oct 31, 2017, 9:53 AM IST
ಉಡುಪಿ: ಹಾಲು ಕುಡಿ ಯುವವರೆಲ್ಲರೂ ಗೋವುಗಳ ರಕ್ಷಕರಾಗಬೇಕೆಂಬುದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಅಭಿಲಾಷೆ. ದೇಶದಲ್ಲಿ ಗೋವುಗಳ ರಕ್ಷಣೆಯ ಅನಿವಾರ್ಯತೆ ಉಂಟಾಗಿರುವುದರಿಂದ ಸ್ವಾಮೀಜಿಯವರ ಮಾರ್ಗದರ್ಶನದಂತೆ ಭಾರತೀಯ ಗೋಪರಿವಾರ ರಚಿಸಲಾಗುತ್ತಿದೆ ಎಂದು ಗೋ ಪರಿವಾರ ರಾಜ್ಯ ಮಾಧ್ಯಮ ವಿಭಾಗದ
ಅಧ್ಯಕ್ಷ ಉದಯಶಂಕರ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಗೋ ಪರಿವಾರ ರಚನೆಯ ಪೂರ್ವಭಾವಿಯಾಗಿ ಸೋಮವಾರ ಜರಗಿದ ಸಭೆಯಲ್ಲಿ ಅವರು ಮಾತನಾಡಿದರು.
ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆ ಗೋ ಪರಿವಾರದ ಧ್ಯೇಯ. ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಗೋ ಪರಿವಾರ ರಚನೆಯಾಗಿದೆ. ಉಡುಪಿಯಲ್ಲಿಯೂ ಗೋ ಪರಿವಾರ ರಚಿಸಲುದ್ದೇಶಿಸಲಾಗಿದೆ. ಗೋ ಪರಿವಾರವು 32 ವಿಭಾಗಗಳನ್ನು ಒಳಗೊಂಡಿರುತ್ತದೆ. ಗೋವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರತಿಯೋರ್ವರು ಕೂಡ ತಮ್ಮ ಕೈಲಾಗುವ ರೀತಿಯಲ್ಲಿ ಕೆಲಸ ಮಾಡಲು ಇದು
ಅನುವು ಮಾಡಿಕೊಡುತ್ತದೆ. ಗೋವುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒತ್ತಡ ತರುವ ಸಲುವಾಗಿ ಅಭಯಾಕ್ಷರ ಅಭಿಯಾನ ಕೂಡ ನಡೆಸಲಾಗುವುದು ಎಂದವರು ತಿಳಿಸಿದರು. ಗೋ ಪರಿವಾರ ಮಾತೃ ವಿಭಾಗದ ಅಧ್ಯಕ್ಷೆ ಶೈಲಜಾ ಭಟ್, ಗುಣವಂತೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಗೋ ಶಾಲೆ ಬೇಕು
ಉಡುಪಿಯಲ್ಲಿ ಗೋ ಶಾಲೆ ಗಳ ಕೊರತೆ ಇದೆ. ಇರುವ ಗೋಶಾಲೆಗಳು ತುಂಬಿ ತುಳುಕುತ್ತಿವೆ. ಹಾಗಾಗಿ ಕೂಡಲೇ ಇನ್ನೂ ಒಂದು ಗೋ ಶಾಲೆಯನ್ನು ಆರಂಭಿಸುವುದು ಅತ್ಯಗತ್ಯವಾಗಿದೆ ಎಂದು ಬೈಕಾಡಿ ಸುಪ್ರಸಾದ್ ಶೆಟ್ಟಿ ಮನವಿ ಮಾಡಿದರು.