ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಮನುಕುಲಕ್ಕೆ ಸಾರಿದ ವಿಶ್ವವಂದ್ಯ
Team Udayavani, Sep 10, 2022, 5:09 PM IST
ನಾರಾಯಣಗುರುಗಳು 28-8-1856ರಲ್ಲಿ ಸಿಂಹ ಮಾಸದ, ಶತಭಿಷ ನಕ್ಷತ್ರದ ಚತುರ್ದಶಿಯ 4ನೆಯ ಓಣಂನಂದು, ಮಲಯಾಳಿ ಶಕವರ್ಷ 1030ರಂದು ಜನಿಸಿದರು. ಅವರು ತಿರುವನಂತಪುರದ ಚೇಂಬಳಾಟತಿ ಗ್ರಾಮದವರು. ಅವರ ತಂದೆ ಶ್ರೀ ಮಾಡನಾಶನ್ ಹಾಗೂ ತಾಯಿ ಶ್ರೀಮತಿ ಕುಟ್ಟಿಯಮ್ಮ. ನಾರಾಯಣಗುರುಗಳನ್ನು ಬಾಲ್ಯದಲ್ಲಿ ನಾಣು ಎಂದು ಕರೆಯುತ್ತಿದ್ದರು.
ಚಿಕ್ಕ ವಯಸ್ಸಿನಲ್ಲಿ ದೇವರಿಗಿಟ್ಟ ನೈವೇದ್ಯವನ್ನು ತಿನ್ನುವುದು ಇವರ ಚೇಷ್ಟೇಯಲ್ಲೊಂದಾಗಿದೆ. ದೇವರಿಗೆ ನೈವೇದ್ಯದ ಅಗತ್ಯವಿಲ್ಲ, ಹೊರತಾಗಿ ನಿಷ್ಕಳಂಕ ಪರಿಶುದ್ದ ಪ್ರೇಮವಿದ್ದರೆ ಸಾಕು ಎಂದು ಇವರಿಗದಾಗಲೇ ತಿಳಿದಿತ್ತು. ನಾರಾಯಣ ನಾಣುವಿಗೆ ಅಕ್ಷರ ಮುಹೂರ್ತವನ್ನು, ಪ್ರಾಥಮಿಕ ಶಿಕ್ಷಣವನ್ನು ನೀಡಿದವರು. ಈ ಗುರುವಿನಿಂದಲೇ ಮಲಯಾಳಂ ಹಾಗೂ ಸಂಸ್ಕೃತವನ್ನು ಕಲಿತರು. ಬೇರೆ ಮಕ್ಕಳಿಗೆ ಹೋಲಿಸಿದರೆ ಅವರ ಪ್ರವೃತ್ತಿ ಬೇರೆಯೇ ಆಗಿತ್ತು. ಅಸ್ಪೃಶ್ಯರನ್ನು ಮುಟ್ಟುತಿದ್ದರು. ನಾಣುವಿಗೆ ಅರ್ಥಹೀನ ಮಡಿವಂತಿಕೆಯ ಬಗೆಗೆ ಇದ್ದ ಮನೋವೃತ್ತಿ ಸ್ಪಷ್ಟವಾಗುತ್ತದೆ.
ನಾರಾಯಣಗುರುಗಳು ವಿಚಾರ ಮಗ್ನರು
ಮಾವ ಕೃಷ್ಣ ವೈದ್ಯರ ನಿರ್ದೇಶನದಲ್ಲಿ ವೈದ್ಯಕೀಯ ಗ್ರಂಥಗಳ ಅಭ್ಯಾಸದ ಜತೆಗೆ ಮದ್ದಿನ ಗಿಡಗಳ ಪರಿಚಯವೂ ಇತ್ತು. ನಾಣು, ರಾಮನ್ ಆಶನರ ಶಿಷ್ಯತ್ವವನ್ನು ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅವರ ಮೆಚ್ಚುಗೆಯ ಶಿಷ್ಯನಾದರು. ಗುರುಗಳ ಉಪದೇಶವನ್ನು ಶೀಘ್ರದಲ್ಲಿ ಗ್ರಹಿಸುತ್ತಿದ್ದರು. ಇದರ ನಡುವೆ ಅವರಿಗೆ ಜಲೋಧರ ಭಾದೆಯೂ ತಗುಲಿತು. ಅನಂತರ ಗುರುಕುಲದಿಂದ ಮನೆಗೆ ನಾಣು ವಾಪಾಸಾದರು. ಮಾವನ ಆರೈಕೆಯಿಂದ ನಾಣು ಗುಣವಾದರು. ವೈರಾಗ್ಯ, ವೇದಾಂತ, ತಿಳುವಳಿಕೆ, ಅನುಭವ, ಬಡವರ ಬವಣೆ, ಸಿರಿವಂತರ ದರ್ಪ, ಗೊಡ್ಡು ಸಂಪ್ರದಾಯದ ಬಗೆಗೆ ವಿಚಾರಮಗ್ನನಾಗಿ ವಿಮರ್ಶಿಸುತ್ತಿದ್ದ ನಾಣುವಿನಲ್ಲಿ ವಿಶೇಷ ವ್ಯಕ್ತಿತ್ವ ರೂಪುಗೊಳ್ಳುತಿತ್ತು. ದಿನಗಳುರುಳಿದಂತೆ ಏಕಾಂತ ಬಯಸುತ್ತಿದ್ದರು.
ಜಗತ್ತಿಗೆ ಬೆಳಕನ್ನೀಯಲು ಬಂದವರು ನಾರಾಯಣಗುರುಗಳು
ನಾಣುವಿನ ಒಪ್ಪಿಗೆಯನ್ನು ಕೇಳದೆಯೇ ಅವನ ಮದುವೆಯನ್ನು ಕಾಳಿಯಮ್ಮನೊಂದಿಗೆ ನಿಶ್ಚಯಿಸಿದರು. 1882ರಲ್ಲಿ ಅವರ ಮದುವೆಯೂ ನಡೆಯಿತು. ಆದರೆ ನಾಣು ಸಂಸಾರದಲ್ಲಿ ಆಸಕ್ತಿ ಇಲ್ಲದೇ ಮನೆಯಿಂದ ದೂರ ಉಳಿದು ಬಿಟ್ಟರು. ಅನಂತರ ಎಲ್ಲರ ಮುಂದೆ ಸಂಸಾರ ತ್ಯಾಗ ಮಾಡಿ ಪರಿವ್ರಾಜಕನಾಗಿ ಹೊರಟರು. ಜಗತ್ತಿಗೆ ಬೆಳಕನ್ನು ನೀಡಲು ತಾನು ಬಂದಿರುವುದೆಂದು ನಾಣುವಿಗೆ ಅರಿವಿತ್ತು. ಹಾಗಾಗಿಯೇ ಏಕಕಾಲದಲ್ಲಿ ಸರ್ವವನ್ನೂ ತ್ಯಜಿಸಿದರು.
ಸಹೋದರತತ್ವದಿಂದ ಬಾಳಲು ಸೂಚಿಸಿದರು
ಯೋಗ ಶಿಕ್ಷಣ ಪೂರ್ಣವಾದ ಮೇಲೆ ದೇಶ ಪರ್ಯಟನೆ ಆರಂಭಿಸಿದರು. ತಮಿಳುನಾಡಿನ ಹಳ್ಳಿ, ಪಟ್ಟಣಗಳನ್ನು ಮತ್ತೊಮ್ಮೆ ಸುತ್ತಿದರು. ಜಾತಿ, ಪಂಗಡ, ಧರ್ಮದ ಆಳವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಜಾತಿ ಬೇಧ, ಮತದ್ವೇಷ ಎನೂ ಇಲ್ಲದೆ ಸರ್ವರೂ ಸಹೋದರತತ್ವದಿಂದ ಬಾಳುವ ಸ್ಥಾನವಿದು ಎನ್ನುವ ಮೂಲಕ ಸ್ಥಾಪಿಸಿದ್ದ ಶಿವನ ಮೂರ್ತಿ ಬ್ರಾಹ್ಮಣ ಶಿವನಲ್ಲ ನಮ್ಮ ಶಿವ ಎಂದು ಸಾರಿದರು.
ಮೂಢನಂಬಿಕೆಗೆ ಕಡಿವಾಣ
ನಾರಾಯಣಗುರುಗಳು ಯೋಗ್ಯ ತರುಣರನ್ನು ಆರಿಸಿ, ಅವರಿಗೆ ತರಬೇತಿ ಕೊಡಿಸಿ, ಸಮಾಜ ಸುಧಾರಣೆಯ ಕ್ರಾಂತಿಕಾರಿ ಕಹಳೆ ಊದಿದರು. ತೊಟ್ಟಿಲ ಮದುವೆ, ಬಾಲ್ಯವಿವಾಹ, ಬಹುಪತ್ನಿತ್ವ ಹಾಗೂ ವರದಕ್ಷಿಣೆ ಇವೆಲ್ಲ ಸಮಾಜದ ಸುವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಂಬುದಕ್ಕಾಗಿ ಸಮಾಜವನ್ನು ಈ ಕಾರ್ಯಕ್ರಮಗಳಿಂದ ಮುಕ್ತಗೊಳಿಸುವಲ್ಲಿ ಕಾರ್ಯನಿರ್ವಹಿಸಿದರು. ಮದ್ಯಪಾನವನ್ನು ನಿಷೇಧಿಸುವಂತೆ ಮೂರ್ತೆದಾರರಿಗೆ ಕರೆ ಕೊಟ್ಟರು. ನಾಗಾರಾಧನೆಯನ್ನು ನಿಷೇಧಿಸಿದರಿಂದ ಕೇರಳದಲ್ಲಿಯ ನಾಗದರ್ಶನ, ನಾಗಪೂಜೆ, ನಾಗಮಂಡಲ, ನಾಗಶಿಲೆ ಪ್ರತಿಷ್ಠೆಗಳು ಇತಿಹಾಸ ಸೇರಿ ಹೋದವು.
“ಸರ್ವರಿಗೂ ಶಿಕ್ಷಣ”
ಮದುವೆಗೆ ಮೊದಲು ದೈಹಿಕ ತಪಾಸಣೆಯನ್ನು ವಧು-ವರರು ಮಾಡಿಸಿಕೊಳ್ಳುವುದು ಉತ್ತಮವೆಂಬುದು ಗುರುಗಳ ಉಪದೇಶವಾಗಿತ್ತು. ಇದು ಗುರುಗಳ ದೂರದೃಷ್ಟಿತ್ವವನ್ನು ಸೂಚಿಸುತ್ತದೆ. ಯಾವುದೇ ಸಮಾಜವು ಹಳೆಯ ಅನಗತ್ಯ ಜಾಡ್ಯಗಳನ್ನು ಬಿಟ್ಟು ಕೊಡಲು ಮತ್ತು ಹೊಸತನವನ್ನು ರೂಢಿಸಿಕೊಳ್ಳಲು ಶಿಕ್ಷಣವೇ ಏಕಮಾತ್ರ ಮಾಧ್ಯಮ ಎನ್ನುವುದು ನಾರಾಯಣಗುರುಗಳ ಖಚಿತ ಅಭಿಪ್ರಾಯವಾಗಿತ್ತು. “ಸರ್ವರಿಗೂ ಶಿಕ್ಷಣ’ ಬೇಕೆನ್ನುವ ನೆಲೆಯಲ್ಲಿ ಅವರು ಶಿವಗಿರಿಯಲ್ಲಿ ವಿದ್ಯೆಗೆ ಅಧಿದೇವತೆಯಾದ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಿದರು. ದೇವಾಲಯದ ಸುತ್ತಮುತ್ತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕರೆ ಕೊಟ್ಟರು. ಅಂತೆಯೇ ತ್ರಿಭಾಷಾ ಸೂತ್ರಕ್ಕೂ ಕರೆ ನೀಡಿದರು. ಹಗಲು ಶಾಲೆಗೆ ಹೋಗಲಾರದವರಿಗೆ ರಾತ್ರಿ ಶಾಲೆಗಳನ್ನು ತೆರೆದರು.
ಮಾನವರಿಗೆಲ್ಲ “ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು’ ಎನ್ನುವುದರ ಮೂಲಕ “ಏಕೋ ದೇವ ಸರ್ವ ಭೂತಾಂತರಾತ್ಮ’ ಎನ್ನುವ ಮೂಲ ತತ್ವಗಳನ್ನು ಆಚರಣೆಗೆ ತಂದರು. ಅವರು 1928ರ ಸೆಪ್ಟೆಂಬರ್ 20ರಲ್ಲಿ ಇಹಲೋಕ ತ್ಯಜಿಸಿದರು. ಮಾನವೀಯ ಮಹಾತ್ಮರೆನಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಒಟ್ಟಾಗಿ ಬಾಳ್ಳೋಣ.
–ಶ್ರೇಯಾ ಯೋಗೀಶ್ ಬಿಲ್ಲವ ದ್ವಿ.ಬಿ.ಕಾಂ, ಪೂರ್ಣಪ್ರಜ್ಞ ಕಾಲೇಜು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ