ಗೋಪಾಡಿ: ಪ್ಲಾಸ್ಟಿಕ್ ವಿರುದ್ಧ ಆಂದೋಲನ ಮನೆಯಿಂದಲೇ ಆರಂಭವಾಗಲಿ: ಡಾ| ರಶ್ಮಿ
Team Udayavani, Oct 5, 2019, 5:29 AM IST
ಕೋಟೇಶ್ವರ: ಪ್ಲಾಸ್ಟಿಕ್ ವಿರುದ್ಧದ ಆಂದೋಲನ ಪ್ರತಿ ಮನೆಯಿಂದಲೇ ಆರಂಭವಾಗಲಿ ಎಂದು ಪರಿಸರವಾದಿ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಪ್ರಧ್ಯಾಪಕಿ ಡಾ| ರಶ್ಮಿ ಕುಂದಾಪುರ ಹೇಳಿದರು.
ಗೋಪಾಡಿ ಪಂಚಾಯತ್ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬೀಜಾಡಿ ಒಕ್ಕೂಟ, ಚಂದನ ಯುವಕ ಮಂಡಳಿ ಬೀಜಾಡಿ ಗೋಪಾಡಿ, ನಂದಿನಿ ಫ್ರೆಂಡ್ಸ್ ಬೀಜಾಡಿ ಗೋಪಾಡಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಜ್ವಾಲಿ ಫ್ರೆಂಡ್ಸ್ ಮೂಡುಗೋಪಾಡಿ , ವಿವಿಧ ಸ್ತ್ರೀಶಕ್ತಿ ಸಂಘಟನೆಗಳ ಸಹಭಾಗಿತ್ವದಲ್ಲಿ ಆಯೋಜನೆಗೊಂಡ ಪರಿಸರ ಜಾಗೃತಿ ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಚೀನಾ ದೇಶದಲ್ಲಿ ಕೆಲವು ಪ್ರದೇಶದಲ್ಲಿ ಪರಿಸರ ಹಾನಿಯಾಗಿ ಶುದ್ಧ ಗಾಳಿಯ ಕೊರತೆ ಇದೆ, ಹಾಗಾಗಿ ಶುದ್ಧ ಗಾಳಿಯನ್ನು ಹಣ ನೀಡಿ ಖರೀದಿಸವ ಪರಿಸ್ಥಿತಿ ಉದ್ಭವವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿಯೂ ಪರಿಸ್ಥಿತಿ ತಲೆದೋರುವ ಆತಂಕ ವ್ಯಕ್ತಪಡಿಸಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು.ಬಳಕೆ ಕಂಡುಬಂದಲ್ಲಿ ದಂಡ ಸೇರಿದಂತೆ ಕ್ರಮ ಜರಗಿಸಲಾಗುವುದು ಎಂದವರು ತಿಳಿಸಿದರು. ಅಲ್ಲದೆ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ, ನಿಯಂತ್ರಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಜಾಗೃತಿ ಹಾಗೂ ಸ್ಪರ್ಧೆಯನ್ನು ಏರ್ಪಡಿಸಿ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದರು.
ಸಂಘ ಸಂಸ್ಥೆಯ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಪ್ಲಾಸ್ಟಿಕ್ ಮುಕ್ತ ಸಮಾಜ ಗ್ರಾಮವನ್ನಾಗಿಸಲು ಪ್ರಮಾಣ ವಚನ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚೇತನ್ ಕುಮಾರ್ ಮಾತನಾಡಿ ಪ್ಲಾಸ್ಟಿಕ್ ಮುಕ್ತವಾಗಿಸಲು ಪಂಚಾಯತ್ ನೊಂದಿಗೆ ಕೈಜೋಡಿಸುವುದಾಗಿ ತಿಳಿಸಿದರು.
ತಾ. ಪಂ. ಸದಸ್ಯೆ ವೈಲೆಟ್ ಬರೆಟ್ಟೋ, ಗ್ರಾ.ಪಂ. ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್, ಜುಮ್ಮಾಮಸೀದಿಯ ಅಧ್ಯಕ್ಷ ಮೊಹಮ್ಮದ್, ಚಂದನ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಗಿರೀಶ್ ಉಪಾಧ್ಯಾಯ, ನಂದಿನಿ ಫ್ರೆಂಡ್ಸ್ ನ ಅಧ್ಯಕ್ಷ ಪ್ರಶಾಂತ್ ತೋಳಾರ್, ಜ್ವಾಲಿ ಫ್ರೆಂಡ್ಸ್ ಅಧ್ಯಕ್ಷ ಉದಯ, ಸ್ತ್ರೀ ಶಕ್ತಿ ಸಂಘಟನೆಯ ಪುಷ್ಪಾ ಮೊಬಿನ್, ಗ್ರಾ.ಪಂ. ಸದಸ್ಯರಾದ ಗಜೇಂದ್ರ ಶೆಟ್ಟಿ, ರಮೇಶ್ ಸುವರ್ಣ, ಸುರೇಶ್ ಶೆಟ್ಟಿ, ರಾಘವೇಂದ್ರ, ಸರೋಜಾ ಪೂಜಾರಿ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಪಿ. ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ ವಂದಿಸಿದರು.