ಗಿಳಿಯಾರು-ಶಿರಿಯಾರ ಮಾರ್ಗವಾಗಿ ಸರಕಾರಿ ಬಸ್ಸು ; ಹರ್ಷ
Team Udayavani, Mar 13, 2019, 1:00 AM IST
ಕೋಟ: ಗ್ರಾಮಾಂತರ ಭಾಗವಾದ ಗಿಳಿಯಾರು, ಬೇಳೂರು ಭಾಗಕ್ಕೆ ಸರಕಾರಿ ಬಸ್ಸು ಸೇವೆ ಆರಂಭಿಸುವಂತೆ ಸ್ಥಳೀಯರು ಸಲ್ಲಿಸಿದ ಮನವಿಯ ಮೇರೆಗೆ ಇದೀಗ ಮಾ.8ರಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ಸಂಚಾರ ಆರಂಭಗೊಂಡಿದ್ದು, ಸ್ಥಳೀಯರು ಬಸ್ಸನ್ನು ಸ್ವಾಗತಿಸಿದರು.
ಗಿಳಿಯಾರು, ಬೇಳೂರು, ನೂಜಿ, ಶಿರಿಯಾರ ಮುಂತಾದ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಹಾಗೂ ಸ್ಥಳೀಯರಿಗೆ ಮುಖ್ಯ ಪೇಟೆಗಳಿಗೆ ತೆರಳಲು ಸರಿಯಾದ ಬಸ್ಸು ಸೌಲಭ್ಯವಿಲ್ಲದೆ ಇದುವರೆಗೆ ಸಮಸ್ಯೆಯಾಗಿತ್ತು. ಇದೀಗ ಸಾಕಷ್ಟು ಅನುಕೂಲವಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.
ಶ್ರೀನಿವಾಸ ಪೂಜಾರಿಯವರಿಗೆ ಧನ್ಯವಾದ ಸಲ್ಲಿಸಿದ ಸ್ಥಳೀಯರು
ತಾ.ಪಂ. ಮಾಜಿ ಸದಸ್ಯ ಭರತ್ ಕುಮಾರ್ ಶೆಟ್ಟಿಯವರು ಸರಕಾರಿ ಬಸ್ಸು ಸೇವೆಗಾಗಿ ಸ್ಥಳೀಯರ ಸಹಿ ಸಂಗ್ರಹಿಸಿ, ಗ್ರಾ.ಪಂ. ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿದ್ದರು ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ಈ ಕುರಿತು ಹೋರಾಟ ನಡೆಸುವಂತೆ ವಿನಂತಿಸಿದ್ದರು. ಅನಂತರ ಪೂಜಾರಿಯವರು ಸಂಬಂಧಪಟ್ಟ ಇಲಾಖೆಗೆ ನಿರಂತರ ಮನವಿ ಸಲ್ಲಿಸಿದ ಮೇರೆಗೆ ಇದೀಗ ಬಸ್ಸು ಸೇವೆ ಆರಂಭಗೊಂಡಿದೆ. ಹೀಗಾಗಿ ಸ್ಥಳೀ ಯರು ಪೂಜಾರಿಯವರಿಗೆ ಧನ್ಯವಾದ ಸಲ್ಲಿಸಿದರು.
ಬಸ್ಸಿನ ವೇಳಾಪಟ್ಟಿ
ಬೆಳಗ್ಗೆ 7.15ಕ್ಕೆ ಕುಂದಾಪುರದಿಂದ ಹೊರಟು ಗಿಳಿಯಾರು, ನೂಜಿ ಮಾರ್ಗವಾಗಿ 8.15ಕ್ಕೆ ಶಿರಿಯಾರ ತಲುಪುವುದು, ಅನಂತರ 8.20ಕ್ಕೆ ಶಿರಿಯಾರದಿಂದ ಹೊರಟು 9.20ಕ್ಕೆ ಕುಂದಾಪುರಕ್ಕೆ, ಸಂಜೆ 4.15ಕ್ಕೆ ಕುಂದಾಪುರದಿಂದ ಹೊರಟು 5.20ಕ್ಕೆ ಶಿರಿಯಾರ, 5.30ಕ್ಕೆ ಶಿರಿಯಾರದಿಂದ ಕುಂದಾಪುರಕ್ಕೆ ಬಸ್ಸು ಓಡಾಟ ನಡೆಸಲಿದೆ.