ಅಧಿಕಾರಿಗಳಿಂದ ಶಾಶ್ವತ ಪರಿಹಾರದ ಭರವಸೆ
Team Udayavani, Jul 14, 2018, 6:10 AM IST
ಕೋಟ: ಇಲ್ಲಿನ ಮಣೂರು- ಪಡುಕರೆಯಲ್ಲಿ ಇದೀಗ ಕಡಲ್ಕೊರೆತ ತೀವೃಗೊಂಡಿದ್ದು, ಅಲೆಗಳ ಹೊಡತದಿಂದ ತೀರ ಪ್ರದೇಶಕ್ಕೆ ಹಾನಿಯಾಗುತ್ತಿದೆ.
ಇಲ್ಲಿನ ಬೈನಾಯ್ಕರ ಮನೆ ತನಕ 200 ಮೀಟರ್ ಹಾಗೂ ಮಣೂರು ಜಟ್ಟಿಗೇಶ್ವರ ದೇವಸ್ಥಾನದ ಹಿಂಬದಿಯಿಂದ ತೆಕ್ಕಟ್ಟೆ ಕೊಮೆಯ ಗಡಿಭಾಗದ ವರೆಗೆ 300 ಮೀಟರ್ ತಡೆಗೋಡೆ ಬಾಕಿ ಇದ್ದು, 10ಕ್ಕೂ ಹೆಚ್ಚು ಮನೆಗಳು, ವಿಶಾಲ ತೆಂಗಿನ ತೋಟಕ್ಕೆ ಹಾನಿಯಾಗುತ್ತಿದೆ ಹಾಗೂ ಸಂಪರ್ಕ ರಸ್ತೆಗೂ ಕೂಡ ಹಾನಿಯಾಗಿದೆ. ತಾತ್ಕಾಲಿಕ ತಡೆಗೋಡೆಗೆ ಅಳವಡಿಸಿದ ಕಲ್ಲುಗಳು ಸಮುದ್ರ ಸೇರುತ್ತಿದೆ.
ಅಧಿಕಾರಿಗಳಿಂದ ಪರಿಶೀಲನೆ
ಈ ಸಮಸ್ಯೆ ಕುರಿತು ಉದಯವಾಣಿ ಮಳೆಗಾಲಕ್ಕೆ ಮೊದಲೇ ವರದಿ ಪ್ರಕಟಿಸಿತ್ತು. ಅನಂತರ ಅಧಿಕಾರಿಗಳು ಎರಡು ಬಾರಿ ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿರುತ್ತಾರೆ ಹಾಗೂ ಇಲಾಖೆ ಅನುಮತಿ, ಟೆಂಡರ್ ಬಾಕಿ ಇದ್ದು ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎನ್ನವ ಭರವಸೆ ನೀಡಿರುತ್ತಾರೆ.ಆದಷ್ಟು ಶೀಘ್ರ ಈ ಕಾಮಗಾರಿ ನಡೆಸುವ ಕುರಿತು ಕ್ರಮಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ.
ಪರಿಹಾರದ ಭರವಸೆ
ಮಣೂರು ಪಡು ಕರೆಯಲ್ಲಿ ಕೇವಲ 500 ಮೀ.ನಷ್ಟು ತಡೆಗೋಡೆ ಬಾಕಿ ಇದ್ದು ಕಡಲ್ಕೊರೆತ ಹೆಚ್ಚುತ್ತಿರುವ ಕುರಿತು ಬಂದರು ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಹಾಗೂ ಅವರು ಈಗಾಗಲೇ 2 ಬಾರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿಗೆ ಅನು ಮೋದನೆ ದೊರೆತಿದ್ದು, ಶೀಘ್ರದಲ್ಲಿ ಟೆಂಡರ್ ಮುಂತಾದ ಪ್ರಕ್ರಿಯೆಗಳನ್ನು ನಡೆಸಿ ಶಾಶ್ವತ ತಡೆಗೋಡೆ ಕೈಗೊಳ್ಳುವ ಭರವಸೆ ನೀಡಿದ್ದಾರೆ.
– ಭುಜಂಗ ಗುರಿಕಾರ,
ಕೋಟ ಗ್ರಾ.ಪಂ. ಸದಸ್ಯರು