ಸಾಸ್ತಾನ ಟೋಲ್ಗೇಟ್ನಲ್ಲಿ ಕಿರುಕುಳ: ಆರೋಪ
Team Udayavani, May 2, 2017, 3:00 PM IST
ಕೋಟ: ಸಾಸ್ತಾನ ಗುಂಡ್ಮಿಯ ಟೋಲ್ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೂ ಶುಲ್ಕ ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿದ್ದು, ರವಿವಾರ ಸಂಜೆ ಸಾಮಾಜಿಕ ಕಾರ್ಯಕರ್ತೆ ಮಹಿಳೆಯೋರ್ವರ ಜತೆ ಟೋಲ್ನ ಸಿಬಂದಿ ಅನುಚಿತವಾಗಿ ವರ್ತಿಸಿದ ಕುರಿತು ಕೋಟ ಪೊಲೀಸ್ ಠಾಣೆಗೆ ದೂರು ನೀಡಿಲಾಗಿದೆ.
ಮಂಗಳೂರಿನ ಸುರತ್ಕಲ್ನ ನಿವಾಸಿ ಸಮಾಜ ಸೇವಕಿ ಸಜನಿ ಅವರು ಕೆಲಸದ ನಿಮಿತ್ತ ತನ್ನ ಸದಸ್ಯರ ಜತೆ ಕೋಟಕ್ಕೆ ಆಗಮಿಸಿ, ಕೆ.ಎ.20 ನೋಂದಣಿಯ ವಾಹನದಲ್ಲಿ ಹಿಂದಿರುಗುವಾಗ ಸಾಸ್ತಾನ ಟೋಲ್ಗೇಟ್ನಲ್ಲಿ ಸಿಬಂದಿ ಟೋಲ್ ನೀಡುವಂತೆ ಕೇಳಿದ್ದು, ಆಗ ಸಜನಿ ಅವರು ಕೆ.ಎ.20 ನೋಂದಣಿಯ ವಾಹನಗಳಿಗೆ ಕಾಮಗಾರಿ ಪೂರ್ಣಗೊಳ್ಳುವ ತನಕ ಶುಲ್ಕ ಸಂಗ್ರಹಿಸಬಾರದು ಎಂದು ಬೆಂಗಳೂರಿನಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ನಿರ್ಣಯವಾದರೂ ಯಾಕೆ ಈ ವಾಹನಗಳಿಗೆ ಶುಲ್ಕ ಸಂಗ್ರಹಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದರಿಂದ ಕುಪಿತರಾದ ಟೋಲ್ ಸಿಬಂದಿ ಬಶೀರ್ ಎನ್ನುವಾತ ಅನುಚಿತವಾಗಿ ವರ್ತಿಸಿ ಹಲ್ಲೆಗೆ ಮುಂದಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಫ್ಐಆರ್ಗೆ ಒತ್ತಾಯ
ದೂರು ಸ್ವೀಕರಿಸಿದ ಕೋಟ ಪೊಲೀಸ್ ಠಾಣಾಧಿಕಾರಿಗಳು, ಪ್ರಕರಣ 504, 506 ಕಾಲಂ ಅಡಿಯಲ್ಲಿ ಬರುವುದರಿಂದ ಎಫ್ಐಆರ್ ದಾಖಲಿಸಲು ನ್ಯಾಯಾಧೀಶರ ಅನುಮತಿ ಬೇಕು. ಆದ್ದರಿಂದ ನ್ಯಾಯಾಲಯಕ್ಕೆ ತೆರಳುವಂತೆ ಸಲಹೆ ನೀಡಿ ವಾಪಸು ಕಳುಹಿಸಿದ್ದಾರೆ ಎನ್ನಲಾಗಿದೆ. ಎಫ್ಐಆರ್ ದಾಖಲಿಸದಿರುವುದನ್ನು ಖಂಡಿಸಿದ ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿಯ ಸದಸ್ಯರು ಸೋಮವಾರ ನೊಂದ ಮಹಿಳೆಯೊಂದಿಗೆ ಕೋಟ ಠಾಣೆಗೆ ಆಗಮಿಸಿದ್ದಾರೆ. ಈ ಸಂದರ್ಭ ಠಾಣಾಧಿಕಾರಿ ಇರಲಿಲ್ಲ. ಅನಂತರ ಬ್ರಹ್ಮಾವರ ವೃತ್ತ ನಿರೀಕ್ಷಕರ ಕಚೇರಿಗೆ ತೆರಳಿದ ಸಮಿತಿಯ ಸದಸ್ಯರು ಪ್ರಕರಣದ ಕುರಿತು ಎಫ್ಐಆರ್ ದಾಖಲಿಕೊಳ್ಳುವಂತೆ ವಿನಂತಿಸಿದ್ದಾರೆ. ಮನವಿ ಆಲಿಸಿದ ವೃತ್ತ ನಿರೀಕ್ಷಕರು ಎಫ್ಐಆರ್ ದಾಖಲಿಸಿಕೊÙಳುವಂತೆ ಕೋಟ ಠಾಣಾಧಿಕಾರಿಗೆ ಸಲಹೆ ನೀಡಿದ್ದಾರೆ ಎಂದು ಹೆದ್ದಾರಿ ಜಾಗೃತ ಸಮಿತಿ ಸದಸ್ಯರು ಪತ್ರಿಕೆಗೆ ತಿಳಿಸಿದ್ದಾರೆ.