ಪ್ರತಿಯೊಬ್ಬರಿಗೂ ಆರೋಗ್ಯ ಕಾರ್ಡ್ ಗುರಿ : ಡಾ| ಸುಧಾಕರ್
Team Udayavani, Mar 30, 2021, 9:40 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ 13 ಲಕ್ಷ ಜನರಲ್ಲಿ 7 ಲಕ್ಷ ಜನರಿಗೆ ಆರೋಗ್ಯ ಕಾರ್ಡ್ ನೀಡಲಾಗಿದೆ. 6 ಲಕ್ಷ ಕಾರ್ಡ್ ನೀಡಲು ಬಾಕಿಯಿದೆ. ಇದಕ್ಕಾಗಿ 90 ದಿನಗಳ ಗುರಿ ನೀಡಲಾಗಿದೆ. ಈ ಅವಧಿಯಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ| ಕೆ. ಸುಧಾಕರ್ ಮಂಗಳವಾರ ಪ್ರಗತಿ ಪರಿಶೀಲನ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಕ್ತದೊತ್ತಡ, ಮಧುಮೇಹದ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸಬೇಕು. ಎಚ್1ಎನ್1 ಸ್ಥಿತಿಗತಿಗಳ ಬಗ್ಗೆಯೂ ಗಮನಹರಿಸಬೇಕು. ಮುಂದಿನ 60ರಿಂದ 90 ದಿನಗಳು ಸವಾಲಿನದ್ದಾಗಲಿವೆ. ಒಬ್ಬ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಕಂಡುಬಂದರೆ ಪ್ರಾಥಮಿಕ ಸಂಪರ್ಕವನ್ನು ಗುರುತಿಸಬೇಕು ಎಂದರು.
ಎ. 1ರಿಂದ ಕಡ್ಡಾಯ ಲಸಿಕೆ
ಎ. 1ರಿಂದ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ನೀಡಬೇಕು. ಮನೆಯಲ್ಲಿರುವ ವಿದ್ಯಾವಂತರು ಹಿರಿಯವರನ್ನು ಕರೆದುಕೊಂಡು ಹೋಗಿ ಲಸಿಕೆ ಹಾಕಿಸಿಕೊಳ್ಳ ಬೇಕು ಎಂದರು. ಆ್ಯಂಬುಲೆನ್ಸ್, ಡಾಟಾ ಉಪಕರಣಗಳ ಕೊರತೆಯನ್ನು ಶೀಘ್ರದಲ್ಲಿ ನೀಗಿಸಬೇಕು. ಪ್ರತೀ ಬುಧವಾರ ಇನ್ಸ್ಪೆಕ್ಷನ್ ಡೇ ಇರಲಿದೆ. ಪ್ರಾಥಮಿಕ ಸಹಿತ ಎಲ್ಲ ಆರೋಗ್ಯ ಕೇಂದ್ರಗಳಲ್ಲಿಯೂ ಪ್ರತಿಯೊಂದು ಆಡಳಿತಾಧಿಕಾರಿಗಳೂ ಇನ್ಸ್ಪೆಕ್ಷನ್ ಮಾಡಬೇಕು ಎಂದು ತಿಳಿಸಿದರು.
ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ. ಜಗದೀಶ್, ಸಿಇಒ ಡಾ| ನವೀನ್ ಭಟ್, ಎಸ್ಪಿ ಎನ್. ವಿಷ್ಣುವರ್ಧನ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ್ ವಿಲೀನದಿಂದ ಉಪಯೋಗ
ಬಿ.ಆರ್. ಶೆಟ್ಟಿ ಆಸ್ಪತ್ರೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಅವರು ಸರಕಾರದ ನೆರವು ಯಾಚಿಸುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ್ ವಿಲೀನ ಮಾಡಿರುವುದರಿಂದ ಹಲವಾರು ಪ್ರಯೋಜನಗಳಾಗಿವೆ. ಇದರಲ್ಲಿರುವ ಕೆಲವೊಂದು ನ್ಯೂನತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.