ಕಾರ್ಕಳ ತಾಲೂಕಿನಾದ್ಯಂತ ಉತ್ತಮ ಮಳೆ
Team Udayavani, Jul 10, 2019, 5:40 AM IST
ಅಜೆಕಾರು: ಕಾರ್ಕಳ ತಾಲೂಕಿನಾದ್ಯಂತ ಜು. 9ರಂದು ಬೆಳಗ್ಗೆಯಿಂದಲೇ ಉತ್ತಮವಾಗಿ ಮಳೆ ಬೀಳುತ್ತಿದ್ದು ತಾಲೂಕಿನ ನದಿ ತೊರೆಗಳು ತುಂಬಿ ಹರಿಯುತ್ತಿದೆ. ಪೂರ್ತಿ ಜೂನ್ ತಿಂಗಳು ಮಳೆ ಇಲ್ಲದೆ ಸಂಕಷ್ಟ ಪಟ್ಟಿದ್ದ ಕೃಷಿಕರು ಮಳೆಯಾಗುತ್ತಿರುವುದಕ್ಕೆ ಸಂತಸ ಪಟ್ಟಿದ್ದಾರೆ.
ದಿನವಿಡೀ ಸುರಿದ ಮಳೆಯಿಂದಾಗಿ ತಗ್ಗುಪ್ರದೇಶಗಳು ಸ್ವಲ್ಪಮಟ್ಟಿಗೆ ಜಲಾವೃತಗೊಂಡರೆ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅಜೆಕಾರು ಪರಿಸರದಲ್ಲಿ ಮಧ್ಯಾಹ್ನ ವೇಳೆ ಸುರಿದ ಭಾರೀ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾನಿಗೀಡಾಗಿದೆ.
ಅಜೆಕಾರು ಜ್ಯೋತಿ ಪ್ರೌಢ ಶಾಲೆ ಸಮೀಪ ಮರವೊಂದು ಉರುಳಿ ಬಿದ್ದು ವಿದ್ಯುತ್ ತಂತಿಗೆ ಹಾನಿಯಾಗಿ ರಸ್ತೆ ಸಂಚಾರವು ಕೆಲ ಸಮಯ ಸ್ಥಗಿತಗೊಂಡಿತ್ತು. ಅಜೆಕಾರು ಕುರ್ಪಾಡಿ ಭಾಗದಲ್ಲಿ ಸುಮಾರು 2 ವಿದ್ಯುತ್ ಕಂಬಗಳು, ಕಡ್ತಲ ಪಂಚಾಯತ್ ವ್ಯಾಪ್ತಿಯ ಮೂಡಬೆಟ್ಟುವಿನಲ್ಲಿ 1 ಕಂಬ ತುಂಡಾಗಿ ಬಿದ್ದಿದೆ. ಅಂಡಾರು ಕರಿಯಾಲು ಪ್ರದೇಶದಲ್ಲಿ ಸುಮಾರು 4 ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ.
ತಾಲೂಕಿನ ಜೀವ ನದಿಗಳಾದ ಎಣ್ಣೆಹೊಳೆಯ ಸುವರ್ಣಾ ನದಿ, ಬೆಳ್ಮಣ್ ಭಾಗದ ಶಾಂಭವೀ ನದಿ, ಹೆಬ್ರಿ ಸಮೀಪದ ಸೀತಾ ನದಿ ಮೈದುಂಬಿ ಹರಿಯುತ್ತಿದೆ.