ದಸರಾ ರಜೆ ಹಿನ್ನೆಲೆ : ಕರಾವಳಿಯ ದೇಗುಲ, ಪ್ರವಾಸಿ ತಾಣಗಳಲ್ಲಿ ಜನ ದಟ್ಟಣೆ
Team Udayavani, Oct 9, 2022, 9:05 AM IST
ಮಲ್ಪೆ : ಶಾಲಾ ಮಕ್ಕಳಿಗೆ ದಸರಾ ರಜೆ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಮಂದಿ ಕುಟುಂಬ ಸಮೇತರಾಗಿ ಕರಾವಳಿಯ ಪ್ರವಾಸಿ ತಾಣ, ದೇವಸ್ಥಾನಗಳತ್ತ ಮುಖಮಾಡಿದ್ದು, ಎಲ್ಲೆಡೆ ಜನದಟ್ಟಣೆ ಕಂಡು ಬಂದಿದೆ.
ಕಡಲತಡಿಗೆ ಪ್ರವಾಸಿಗರ ಆಗಮನದಿಂ ದಾಗಿ ಮಲ್ಪೆಯ ಪ್ರಮುಖ ರಸ್ತೆಯಲ್ಲಿ ಭಾರೀ ಪ್ರಮಾಣದ ವಾಹನ ದಟ್ಟಣೆ ಉಂಟಾಗಿತ್ತು. ಶುಕ್ರವಾರ ಮಧ್ಯಾಹ್ನದಿಂದ ಆರಂಭವಾದ ಟ್ರಾಫಿಕ್ ಜಾಮ್ ಶನಿವಾರವೂ ಮುಂದು ವರಿದಿತ್ತು. ರವಿವಾರ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ.
ಬೆಳಗ್ಗಿನಿಂದ ನಿರಂತರವಾಗಿ 2-3 ಕಿ.ಮೀ. ದೂರ ವಾಹನ ಸಾಲು ಕಂಡುಬಂದಿತ್ತು. ಮಲ್ಪೆ ಮೀನುಗಾರಿಕೆ ಬಂದರಿಗೆ ಸಂಬಂಧಿಸಿದ ವಾಹನಗಳು ಮತ್ತು ಸ್ಥಳೀಯ ಬಸ್ಗಳು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ಗೆ ಸಿಲುಕಿ ಪರಿತಪಿಸುವಂತಾಯಿತು. ಇದು ವಾಹನ ಚಾಲಕರ ನಡುವೆ ಘರ್ಷಣೆಗೂ ಕಾರಣವಾಗಿತ್ತು. ನಿರಂತರ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ನಿಂದಾಗಿ ಸ್ಥಳೀಯರಿಗಂತೂ ರಸ್ತೆ ದಾಟುವುದೇ ದುಸ್ತರವಾಗಿದೆ. ವಾಹನಗಳನ್ನು ನಿಯಂತ್ರಿಸುವುದು ಕೂಡ ಪೊಲೀಸರ ಹರಸಾಹಸವಾಗಿತ್ತು.
ದೇಗುಲಗಳತ್ತ ಜನರ ದೌಡು
ಬೆಳ್ತಂಗಡಿ/ ಸುಬ್ರಹ್ಮಣ್ಯ/ ಉಡುಪಿ/ ಕೊಲ್ಲೂರು : ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಕರಾವಳಿಯ ಪ್ರಮುಖ ದೇವಸ್ಥಾನಗಳಿಗೆ ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಕುಕ್ಕ ಕ್ಷೇತ್ರದಲ್ಲಿ ಶನಿವಾರ ಪಾರ್ಕಿಂಗ್ ಪ್ರದೇಶಗಳು ಬಹುತೇಕ ಭರ್ತಿಯಾಗಿದ್ದು, ಪೇಟೆಯೆಲ್ಲೆಡೆ ವಾಹನ ದಟ್ಟಣೆ ಕಂಡುಬಂದಿತು.
ಇದನ್ನೂ ಓದಿ : ಕಾಂಗ್ರೆಸ್ 1947ರಲ್ಲೇ ಭಾರತ್ ಜೋಡೋ ಮಾಡಬೇಕಿತ್ತು : ಡಾ| ಪ್ರಮೋದ್ ಸಾವಂತ್
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿವಿಧ ರೀತಿಯ ಸೇವೆ, ಸಂಕಲ್ಪ ನೆರವೇರಿಸಿದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭೋಜನ ಪ್ರಸಾದ ಸ್ವೀಕರಿಸಿದರು. ವಸ್ತುಸಂಗ್ರಹಾಲಯ, ಅಣ್ಣಪ್ಪ ಸ್ವಾಮಿ ಬೆಟ್ಟ, ಬಾಹುಬಲಿ ಬೆಟ್ಟ ಸಹಿತ ನೇತ್ರಾವತಿ ಸ್ನಾನಘಟ್ಟದಿಂದಲೇ ಸಾವಿರಾರು ಭಕ್ತರು ಕಂಡುಬರುತ್ತಿದ್ದರು. ನೇತ್ರಾವತಿ ಸ್ನಾನಘಟ್ಟದಿಂದ ಕ್ಷೇತ್ರದ ವರೆಗೆ ವಾಹನಗಳು ಹೆಚ್ಚಾಗಿದ್ದರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಯಿತು.
ಚಾರ್ಮಾಡಿ ಬ್ಲಾಕ್
ಶಿರಾಡಿ ರಸ್ತೆ ಸಂಪೂರ್ಣ ಹೊಂಡಮಯವಾಗಿ ಧೂಳು ಮಯ ವಾಗಿರುವುದರಿಂದ ಮಡಿಕೇರಿ ಹೊರತಾಗಿ ಬಹುತೇಕರು ಚಾರ್ಮಾಡಿ ಮಾರ್ಗವನ್ನೇ ಅವಲಂಬಿಸಿದ್ದಾರೆ. ಶನಿವಾರ ರಾತ್ರಿ ಸುಮಾರು 7ರಿಂದ ಚಾರ್ಮಾಡಿ ರಸ್ತೆಯಲ್ಲಿ ಸಂಚಾರಕ್ಕೆ ತಡೆ ಉಂಟಾಯಿತು. ಘನ ವಾಹನಗಳ ಸಾಲಿನ ನಡುವೆ ಕಾರುಗಳು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಕಿ.ಮೀ.ಗಟ್ಟಲೆ ಸಂಚಾರ ವ್ಯತ್ಯಯವಾಯಿತು.