ಹೆಬ್ರಿ: ತಹಶೀಲ್ದಾರ್ ಬಂದರೂ ಅಧಿಕಾರಿಗಳಿಲ್ಲ!
Team Udayavani, Mar 3, 2019, 1:00 AM IST
ಹೆಬ್ರಿ: ಹೆಬ್ರಿ ತಾಲೂಕು ಘೋಷಣೆಯಾಗಿ ವರ್ಷವಾದ ಬಳಿಕ ಕೊನೆಗೂ ಹೆಬ್ರಿಗೆ ತಹಶೀಲ್ದಾರರು ಆಗಮಿಸಿದ್ದಾರೆ. ಆದರೆ ಅಧಿಕಾರಿಗಳ ನೇಮಕ ಇನ್ನೂ ವೇಗ ಪಡೆದಿಲ್ಲ.
ನೂತನ ತಾಲೂಕು ಕಚೇರಿ ಕಟ್ಟಡವಾಗುವ ವರೆಗೆ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಹಳೆ ಕಟ್ಟಡವನ್ನು ತಾತ್ಕಾಲಿಕ ಕಚೇರಿ ಮಾಡುವುದಾಗಿ ತೀರ್ಮಾನಿಸಿ ತಾಲೂಕು ಕಚೇರಿ ಎಂದು ಬೋರ್ಡ್ ಹಾಕಲಾಗಿತ್ತು.ಆದರೆ ಆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದಲ್ಲಿ ಗೋಡೆಗಳಿಗೆ ಹಾನಿಯಾಗಿತ್ತು. ಈಗ ಒಂದು ವರ್ಷ ಅದನ್ನು ಹಾಗೆಯೇ ಬಿಟ್ಟಿದ್ದು, ಈಗ ದುರಸ್ತಿಗೆ ಹೊರಡಲಾಗಿದೆ.
ಅಧಿಕಾರಿಗಳಿಲ್ಲ
ಕೇವಲ ತಹಸೀಲ್ದಾರ್ ಅವರು ಮಾತ್ರ ಆಗಮಿಸಿದ್ದು ಯಾವುದೇ ಇಲಾಖೆಯ ಅಧಿಕಾರಿಗಳು ಬಂದಿಲ್ಲ. ತಹಶೀಲ್ದಾರ್ ಅವರಿಗೆ ಯಾವುದೇ ವಾಹನ ಕೂಡ ನೀಡಿಲ್ಲ. 12 ಹುದ್ದೆಗಳು ಮಂಜೂರಾಗಿದ್ದವು. ಇದರಲ್ಲಿ ತಹಶೀಲ್ದಾರ್ -1ಹುದ್ದೆ , ಶಿರಸ್ತೇದಾರ -1 ಹುದ್ದೆ, ಪ್ರಥಮ ದರ್ಜೆ ಸಹಾಯಕ -2,ಆಹಾರ ನಿರೀಕ್ಷಕ -1, ದ್ವಿತೀಯ ದರ್ಜೆ ಸಹಾಯಕ -3 ಹುದ್ದೆ, ಹೊರಗುತ್ತಿಗೆ ಆಧಾರದ ಮೇಲೆ ಬೆರಳಚ್ಚುಗಾರ/ಡಾಟಾ ಎಂಟ್ರಿ ಆಪರೇಟರ್ -1 ಹುದ್ದೆ ,ಗ್ರೂಪ್ ಡಿ ದರ್ಜೆ ನೌಕರ -2 ಹುದ್ದೆ, ವಾಹನ ಚಾಲಕ 1 ಹುದ್ದೆಗಳಿವೆ. ಇವರಲ್ಲಿ ಒಬ್ಬರು ಮಾತ್ರ ಲಭ್ಯವಿದ್ದಾರೆ.
ಪಹಣಿ ಪತ್ರಕೂಡ ಆರಂಭವಾಗಿಲ್ಲ
ತಾಲೂಕಾಗಿ ಒಂದು ವರ್ಷವಾದರೂ ಪಹಣಿ ಪತ್ರ ವಿತರಣೆ ವ್ಯವಸ್ಥೆ ಶುರುವಾಗಿಲ್ಲ. ಇದರೊಂದಿಗೆ ನೆಮ್ಮದಿ ಕೇಂದ್ರದಲ್ಲೂ ಕೆಲಸ ಆಗುತ್ತಿಲ್ಲ. ಅಜೆಕಾರಿನ ನೆಮ್ಮದಿ ಕೇಂದ್ರದಲ್ಲಿ ಹೆಬ್ರಿ ತಾಲೂಕಿನ ಅಕ್ರಮ ಸಕ್ರಮ, 11 ಇ, ಗಡಿ ಗುರುತು, ಆಧಾರ್ ಕಾರ್ಡ್ ಹಾಗೂ ಇತರ ಎಲ್ಲಾ ಅರ್ಜಿಗಳನ್ನು ಪಡೆದುಕೊಳ್ಳುತ್ತಿದ್ದರೂ ಒತ್ತಡದಿಂದಾಗಿ ಕೆಲಸ ಆಗುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದಿಂದ ಬಂದವರು ಅಲೆದಾಡುವಂತಾಗಿದೆ.
ತಹಸೀಲ್ದಾರ್ಗೆ ಕೂರಲು ಸ್ಥಳವಿಲ್ಲ
ತಾತ್ಕಾಲಿಕ ತಾಲೂಕು ಕಚೇರಿ ಕಟ್ಟಡ ಒಂದು ತಿಂಗಳಿಂದ ದುರಸ್ತಿಯಲ್ಲಿರುವುದರಿಂದ ನೂತನ ತಹಶೀಲ್ದಾರ್ ಮಹೇಶ್ಚಂದ್ರ ಅವರಿಗೆ ಕೂರಲು ಜಾಗವಿಲ್ಲದಂತಾಗಿದೆ. ಆದ್ದರಿಂದ ಪ್ರವಾಸಿ ಮಂದಿರದಲ್ಲಿ ಲಭ್ಯರಿದ್ದಾರೆ.